"ಹೆಜ್ಜೆ ಇರಿಸಿದಳು ದ್ರೌಪದಿ ರಾಷ್ಟ್ರಪತಿ ಭವನದಲಿ"-ದೇಶದ ಪ್ರಥಮಪ್ರಜೆಗೆ ಯಕ್ಷಗಾಯನ ಗೌರವ
ಮಂಗಳೂರು, ಜು.25: ದೇಶದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುತ್ತಿರುವ ಬುಡಕಟ್ಟು ಸಮುದಾಯದ ಮೊದಲನೆಯವರಾಗಿ ದ್ರೌಪದಿ ಮುರ್ಮು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನ ಪ್ರವೇಶಿಸುವ ಈ ಶುಭ ಸಂದರ್ಭವನ್ನು ಸ್ವಾಗತಿಸುವ ತೆರದಲ್ಲಿ ಯಕ್ಷಗಾನದ ಗಾಯನವೊಂದು ವೈರಲ್ ಆಗುತ್ತಿದೆ.
ಉದಯೋನ್ಮುಖ ಯಕ್ಷ ಪ್ರತಿಭೆ ಕು. ಚಿಂತನಾ ಹೆಗಡೆ ಮಾಲ್ಕೋಡ್ ಭಾಗವತಿಕೆ ಮಾಡಿರುವ 'ಹೆಜ್ಜೆ ಇರಿಸಿದಳು ದ್ರೌಪದಿ ರಾಷ್ಟ್ರಪತಿ ಭವನದಲಿ' ಯಕ್ಷಗಾನ ಪದ್ಯ ಸಖತ್ ಟ್ರೆಂಡ್ ಆಗುತ್ತಿದೆ. ಮಹಾಭಾರತ ಕಥೆಯ ಪ್ರಧಾನ ಪಾತ್ರ ದೌಪದಿಯ ಹೆಸರನ್ನು ಹೊಂದಿರುವ ನೂತನ ರಾಷ್ಟ್ರಪತಿಯವರನ್ನು ಮಹಾಭಾರತ ಪಾತ್ರಗಳಿಗನ್ವಯವಾಗುವಂತೆ ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರುವಂತೆ ಸಾಹಿತ್ಯ ರಚಿಸಲಾಗಿದೆ.
ಮಹಾಭಾರತದ ಪಾತ್ರಗಳಿಗೆ ಅನ್ವಯ ಮಾಡುತ್ತಲೇ ಪ್ರಸ್ತುತದ ಸನ್ನಿವೇಶಗಳ ಪರಿಕಲ್ಪನೆಗಳಿಗೆ ಮುಖಾಮುಖಿಯಾಗಿಸುವಂತೆ ಸಾಹಿತ್ಯ ರಚಿಸಲಾಗಿದೆ. ಅಲ್ಲದೆ ಸದ್ಯ ಪರಿಹಾರವಾಗಬೇಕಾದ ಸಮಸ್ಯೆಗಳ ಬಗ್ಗೆಯೂ ಸೂಚ್ಯವಾಗಿ ರಾಷ್ಟ್ರಪತಿಯವರಿಗೆ ಬಿನ್ನಪ ಮಾಡುವ ಮೂಲಕ ಅವರನ್ನು ರಾಷ್ಟ್ರಪತಿ ಭವನದೊಳಗೆ ಸ್ವಾಗತಿಸಲಾಗಿದೆ. ಕು. ಚಿಂತನಾ ಹೆಗಡೆ ಮಾಲ್ಕೋಡ್ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರಿದ್ದಾರೆ.
ಸಾಹಿತಿ ಅರವಿಂದ ಚಿಪೂಣ್ಯರ್ ಸಾಹಿತ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡ್ ನಿವಾಸಿ ಚಿಂತನಾ ಹೆಗಡೆ ಭಾಗವತಿಕೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸದ್ಯ ಯಕ್ಷಗಾನ ಶೈಲಿಯಲ್ಲಿ ಹಾಡಿರುವ ಪದ್ಯ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..ಮೂಲತಃ ಚಿಂತನಾ ಹೆಗಡೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನವರಾಗಿದ್ದು,ಮಾಳ್ಕೊಡಿನ ಯಕ್ಷಗಾನ ಕಲಾವಿದ ಉದಯ ಹೆಗಡೆ ಅವರ ಪುತ್ರಿಯಾಗಿದ್ದಾರೆ.
ಕವಲಕ್ಕಿ ಸುಬ್ರಹ್ಮಣ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಚಿಂತನಾ ಹೆಗಡೆಯ ಈ ಯಕ್ಷಗಾಯನ ಗೌರವ ವಿಡಿಯೋ ವೈರಲ್ ಆಗಿದ್ದು, ಈಕೆಯ ಸುಶ್ರಾವ್ಯ ಯಕ್ಷಗಾನ ಭಾಗವತಿಕೆಗೆ ಎಲ್ಲರೂ ತಲೆತೂಗಿದ್ದಾರೆ.