ಮಂಗಳೂರು : ಎಂ.ನಾಮ್ ದೇವ್ ಶೆಣೈ ವಿಧಿವಶ
ಮಂಗಳೂರು, ಜೂನ್ 11 : ಹಿರಿಯ ಕಾರ್ಮಿಕ ಮುಖಂಡ, ಉದ್ಯಮಿ, ಸಾಹಿತಿ ಶ್ರೀ ಮಂಗಲ್ಪಾಡಿ ನಾಮ್ ದೇವ್ ಶೆಣೈ ಅವರು ಬುಧವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಪೀಡಿತರಾಗಿದ್ದ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂಲತಃ ಮಂಗಲ್ಪಾಡಿಯವರಾದ ನಾಮದೇವ್ ಶೆಣೈ (75) ಅವರು ತಮ್ಮ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿದ್ದರು. ಕಾರ್ಪೋರೇಶನ್ ಬ್ಯಾಂಕಿನಲ್ಲಿ ಸೇವೆ ಆರಂಭಿಸಿದ ಅವರು, ದೇಶದ ನಾನಾ ಪ್ರದೇಶಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು.

ಕಾರ್ಪೊರೇಷನ್ ಬ್ಯಾಂಕ್ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದ ನಾಮದೇವ್ ಶೆಣೈ, ಕಾರ್ಪೋರೇಶನ್ ಬ್ಯಾಂಕ್ ಎಂಪ್ಲಾಯಿಸ್ ಗಿಲ್ಡ್ ಗೆ ಜೀವ ತುಂಬಿಸಿದ್ದರು. ಅಖಿಲ ಭಾರತೀಯ ಮಜ್ದೂರ್ ಸಂಘದ ಅಂಗಸಂಸ್ಥೆಯಾದ ಎನ್ಒಬಿಡಬ್ಲ್ಯೂನ ರಾಷ್ಟ್ರೀಯ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿದ್ದರು.
ಬ್ಯಾಂಕ್ ಉದ್ಯೋಗದಿಂದ ನಿವೃತ್ತಿ ಹೊಂದಿದ ನಂತರ ಮಂಗಳೂರಿನ ವಿ.ಟಿ ರಸ್ತೆಯಲ್ಲಿ ವಿವೇಕ್ ಟ್ರೇಡರ್ಸ್ ಎಂಬ ಆಯುರ್ವೇದ ಔಷಧ ಮಳಿಗೆಯನ್ನು ಶೆಣೈ ಅವರು ಆರಂಭಿಸಿದ್ದರು. ಆಯುರ್ವೇದ ಔಷಧಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದ ಅವರು, ಆಯುರ್ವೇದದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದರು.
ಕೊಡಿಕಲ್ ಜಿ.ಎಸ್.ಬಿ ಸಭಾದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾಮದೇವ್ ಶೆಣೈ ಅವರು, ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿ ಆಯುರ್ವೇದ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದು. ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕೊಂಕಣಿ ಮಾತೃ ಭಾಷೆಯ ಏಳಿಗೆಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದರು.
ಕೆಲವು ದಿನಗಳ ಹಿಂದೆ ನಾಮದೇವ್ ಶೆಣೈ ಅವರು, ಹಲವು ವರ್ಷ ಕೆಲಸ ಮಾಡಿದ್ದ ಮಧುರೈನಲ್ಲಿ ನಿವೇಶನವೊಂದನ್ನು ಖರೀದಿಸಿ ಕನ್ನಡಿಗರಿಗೆ ಛತ್ರವನ್ನು ಕಟ್ಟಲು ಶಂಕುಸ್ಥಾಪನೆ ನೆರವೇರಿಸಿದ್ದರು. ಶ್ರೀಯುತರು ಪತ್ನಿ, ಓರ್ವ ಪುತ್ರ ಮತ್ತು ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ .












Click it and Unblock the Notifications