ಹಿಂದುತ್ವ ಪ್ರಯೋಗಶಾಲೆಯಲ್ಲಿ ನಳಿನ್ ಕಟೀಲ್ ಯಾಕೆ ಬೇಡ?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸ್ಥಳೀಯ ಕಾರ್ಯಕರ್ತರೇ ಯಾಕೆ ವಿರೋಧಿಸುತ್ತಿದ್ದಾರೆ? ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುವ ವೇಳೆ ಕಟೀಲ್ ಕೆಳಗಿಳಿಸಲು ಒತ್ತಡ ಹೆಚ್ಚಾಗಬಹುದೇ?
ಈ ರೀತಿಯ ಮಾತು, ಚರ್ಚೆಗಳು ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿದೆ. ಹಾಗಾದರೆ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವೇನು ಎನ್ನುವ ವಿಚಾರಕ್ಕೆ ಇಳಿದಾಗ, ಹಿಂದೂ ಕಾರ್ಯಕರ್ತರು ಮತ್ತು ಮುಖಂಡರಿಗೆ ಕಟೀಲ್ ಅವರಿಂದ ಬಯಸಿದ ಪ್ರತಿಕ್ರಿಯೆ ಸಿಗದೇ ಇರುವುದು.
ಪ್ರವೀಣ್ ನೆಟ್ಟಾರು ಕೊಲೆಯಾದ ನಂತರ ನಳಿನ್ ಕಟೀಲ್ ಅವರು ಸ್ಥಳಕ್ಕೆ ಹೋದಾಗ, ಕಾರ್ಯಕರ್ತರ ಆಕ್ರೋಶವನ್ನು ನೋಡಿ ಬೆಚ್ಚಿಬಿದ್ದಿದ್ದರು. ಅಕ್ಷರಸಃ ಕಾರ್ಯಕರ್ತರ ಆಕ್ರೋಶ ಕಟೀಲ್ ಅವರ ಮೇಲಿತ್ತು.+
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರ ವಾರ್!
ಕಾರ್ಯಕರ್ತರ ಆಕ್ರೋಶದ ಬಿಸಿ ಸರಕಾರಕ್ಕೂ ಯಾವ ಮಟ್ಟಿಗೆ ತಟ್ಟಿತ್ತು ಎಂದರೆ, ಬೊಮ್ಮಾಯಿ ಸರಕಾರದ ಒಂದು ವರ್ಷದ ಸಾಧನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿಸಿತ್ತು. ಈಗ, ಸಂಘ ಪರಿವಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹಾಲೀ ಕರ್ನಾಟಕ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಹಾಲೀ ಕರ್ನಾಟಕ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೂರು ವರ್ಷದ ಅವಧಿ ಈಗಾಗಲೇ ಮುಗಿದಿದೆ. ಚುನಾವಣಾ ವರ್ಷವಾಗಿರುವುದರಿಂದ ಹೈಕಮಾಂಡ್ ಈ ವಿಚಾರದಲ್ಲಿ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ. ಬಿಜೆಪಿ ಮೂಲಗಳ ಪ್ರಕಾರ, ನಳಿನ್ ಕಟೀಲ್ ಅಧ್ಯಕ್ಷರಾಗಿ ಮುಂದುವರಿಯುವುದು ಅನುಮಾನ. ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಅಥವಾ ಸುನೀಲ್ ಕುಮಾರ್ ಈ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಯಿದೆ.
ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕ್ರಮ
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸುತ್ತಿದ ಅನುಭವ ನಳಿನ್ ಕಟೀಲ್ ಗೆ ಇದ್ದರೂ, ಪಕ್ಷದ ಕಾರ್ಯಕರ್ತರ ಆಕ್ರೋಶ ಕಟೀಲ್ ಪದಚ್ಯುತಿಗೆ ಕಾರಣವಾಗಬಹುದು. ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕ್ರಮಗಳನ್ನು ಸಾಮಾಜಿಕ ತಾಣವನ್ನು ವೈರಲ್ ಮಾಡುವ ಪೋಸ್ಟ್ ಕಾರ್ಡ್ ಕನ್ನಡ ಬಹಿರಂಗವಾಗಿಯೇ ಕಟೀಲ್ ಪದಚ್ಯುತಿಯಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ.
ಪೋಸ್ಟ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ನಾವು ಮಂಗಳೂರಿಗರು ದೇಶದಲ್ಲೇ ಹಿಂದುತ್ವದ ಭದ್ರಕೋಟೆಯಾಗಿ ಕರಾವಳಿಯನ್ನು ಕಟ್ಟಿಕೊಂಡವರು. ನಮಗೆ ಹಿಂದುತ್ವದ ಜೊತೆಗೆ ಮಂಗಳೂರಿನ ಅಭಿವೃದ್ದಿಯ ದೃಷ್ಟಿಕೋನ ಹೊಂದಿರುವ ನಾಯಕನ ಅಗತ್ಯವಿದೆ. ಸೆಪ್ಟಂಬರ್ ಎರಡರಂದು ಪ್ರಧಾನಿಯವರನ್ನು ಅದ್ದೂರಿಯಾಗಿ ಸ್ವಾಗತಿಸುವ ಮೊದಲು ನಮ್ಮ ಜಿಲ್ಲೆಯ ಸಂಸದರ ಬದಲಾವಣೆಯ ಕೂಗು ಕೇಳಿ ಬರಲಿ ಎಂದು ಪೋಸ್ಟ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.
ಹಿಂದುತ್ವ ಪ್ರಯೋಗಶಾಲೆಯಲ್ಲಿ ನಳಿನ್ ಕಟೀಲ್ ಯಾಕೆ ಬೇಡ?
ಕಾರ್ಯಕರ್ತರ ಆಕ್ರೋಶವನ್ನು ತಣಿಸಲು ಆರ್.ಎಸ್.ಎಸ್ ಮುಂದಾಗಿದೆ. ಸಂಘದ ಮುಕುಂದ್ ಅವರ ನೇತೃತ್ವದಲ್ಲಿ ಬೈಠಕ್ ಪುತ್ತೂರಿನಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಅಸಮಾಧಾನಿತರನ್ನು ಕಾಂಗ್ರೆಸ್ ಎತ್ತಿಕಟ್ಟುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಸತ್ಯಜಿತ್ ಸುರತ್ಕಲ್ ನಮ್ಮ ಆಯ್ಕೆ ಎನ್ನುವ ಪೋಸ್ಟ್ ಹೆಚ್ಚಾಗುತ್ತಿದೆ. ನೈಜ ಕಾರ್ಯಕರ್ತರು ಪಕ್ಷವನ್ನು ಮತ್ತು ಸಿದ್ದಾಂತವನ್ನು ಬಿಟ್ಟು ಕೊಡುವುದಿಲ್ಲ ಎನ್ನುವ ಖಚಿತ ಭರವಸೆಯಲ್ಲಿದ್ದಾರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ. ಒಟ್ಟಿನಲ್ಲಿ ಮೋದಿ ಬರುವ ಮುನ್ನ ಎಲ್ಲವನ್ನೂ ಸರಿದಾರಿಗೆ ತರುವ ವಿಶ್ವಾಸ ಬಿಜೆಪಿಯಲ್ಲೂ ಇದೆ, ಸಂಘ ಪರಿವಾರದಲ್ಲೂ ಇದೆ.