ಕೃಷ್ಣ ನಗರಿ ಉಡುಪಿಯಲ್ಲೂ ಕುಡಿಯುವ ನೀರಿಗೆ ಬರ!
ಉಡುಪಿ, ಮೇ 07:ಮಂಗಳೂರು ಮಹಾನಗರ ಬಳಿಕ ಈಗ ಉಡುಪಿ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣ ನದಿಯ ಬಜೆ ಅಣೆಕಟ್ಟು ಬತ್ತಿದ್ದು, ನೀರು ಸಂಪೂರ್ಣ ಬರಿದಾಗಿದೆ. ಇಂದಿನಿಂದ ನೀರು ಸರಬರಾಜು ಮಾಡುವುದಾಗಿ ನಗರಸಭೆ ಹೇಳಿತ್ತು. ಆದರೆ ಕಳೆದ ಎರಡು ದಿನ ನಗರಕ್ಕೆ ನೀರು ಸರಬರಾಜು ಮಾಡಲಾಗಿಲ್ಲ.
ಬಜೆ ಅಣೆಕಟ್ಟಿನಲ್ಲಿ ನೀರು ಖಾಲಿಯಾಗಿರುವುದರಿಂದ ನಗರಕ್ಕೆ ಮೇ 5 ಮತ್ತು 6ರಂದು ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಮತ್ತು ಮೇ 7ರಿಂದ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಪೌರಾಯುಕ್ತರು ಹೇಳಿಕೆ ನೀಡಿದ್ದರು. ನೀರನ್ನು ಡ್ರೆಜ್ಜಿಂಗ್ ಮೂಲಕ ಬಜೆ ಅಣೆಕಟ್ಟಿನವರೆಗೆ ಹಾಯಿಸಿ ಇಂದು ಮಂಗಳವಾರದಿಂದ ಮತ್ತೆ ನೀರನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.
ಆದರೆ ಡ್ರೆಜ್ಜಿಂಗ್ ಗುತ್ತಿಗೆ ಪಡೆದ ಸಂಸ್ಥೆ ಸೋಮವಾರ ಮಧ್ಯಾಹ್ನದವರೆಗೆ ಸ್ವರ್ಣ ನದಿಯ ಯಾವುದೇ ಪ್ರದೇಶದಲ್ಲೂ ಡ್ರೆಜ್ಜಿಂಗ್ ಕಾರ್ಯ ಪ್ರಾರಂಭಿಸಿರುವುದು ಕಂಡುಬಂದಿಲ್ಲ. ಒಂದು ವೇಳೆ ಇಂದಿನಿಂದ ಡ್ರೆಜ್ಜಿಂಗ್ ಆರಂಭವಾದರೆ ನಾಳೆಯಿಂದ ನಗರಕ್ಕೆ ನೀರು ಪೂರೈಕೆ ಮಾಡುವುದು ಕಷ್ಟಸಾಧ್ಯವಾಗಿದೆ. ಇದರ ಪರಿಣಾಮ ಮತ್ತೆ ಎರಡು ದಿನ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಮಳೆಯನ್ನೇ ನಂಬಿ ಕುಳಿತಿದ್ದ ನಗರಸಭೆ ಅಧಿಕಾರಿಗಳು ಮೇ ತಿಂಗಳವರೆಗೂ ಡ್ರೆಜ್ಜಿಂಗ್ ಕಾರ್ಯಕ್ಕೆ ಮುಂದಾಗಿರಲಿಲ್ಲ.ಚುನಾವಣೆ ಬ್ಯುಸಿಯಲ್ಲಿದ್ದ ಅಧಿಕಾರಿಗಳು ಬಜೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋದ ಬಳಿಕ ಇದೀಗ ಎಚ್ಚೆತ್ತುಕೊಂಡಿದ್ದಾರೆ.












Click it and Unblock the Notifications