ಭಾರೀ ಮಳೆ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ
ಮಂಗಳೂರು, ಜೂನ್ 30 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಂಗಳವಾರ ರಾತ್ರಿಯಿಂದ ಬುಧವಾರದ ತನಕ ಸುರಿದ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಸ್ನಾನ ಘಟ್ಟ ಸಂಪೂರ್ಣವಾಗಿ ಜಲಾವೃತವಾಗಿದ್ದು, ಮುಂಜಾಗೃತಾ ಕ್ರಮವಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ನದಿಯ ಮೇಲ್ಭಾಗದಲ್ಲಿ ತೀರ್ಥ ಸ್ನಾನ ಪೂರೈಸುತ್ತಿದ್ದಾರೆ. ಅಲ್ಲದೆ ಘಟ್ಟ ಪ್ರದೇಶದಲ್ಲಿ ಇದೇ ರೀತಿ ನಿರಂತರ ಮಳೆಯಾದರೆ ಕುಮಾರಧಾರ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. [ಚಿತ್ರಗಳು : ಕೊಡಗಿನಲ್ಲಿ ತೀವ್ರತೆಗೊಂಡ ಆರಿದ್ರ ಮಳೆಯ ಆರ್ಭಟ]

ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸೇತುವೆ ಮಟ್ಟದಲ್ಲಿ ನದಿ ನೀರು ಹರಿಯುತ್ತಿದೆ. ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ನಿಂತಿಕಲ್ ಮೊದಲಾದೆಡೆ ನಿರಂತರ ಮಳೆಯಾದುದರಿಂದ ಈ ಪರಿಸರದಲ್ಲಿ ಹರಿಯುವ ನದಿ, ತೊರೆಗಳು ತುಂಬಿ ಹರಿಯುತ್ತಿವೆ. [ಮಳೆಗಾಲದ ಅತಿಥಿಯಾಗಿ ಬಂದ ಹೆಬ್ಬಾವು!]
ನದಿಗಳು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ತೋಟಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಕೃಷಿಕರಿಗೆ ನಷ್ಟ ಉಂಟಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜನರು ತತ್ತರಿಸಿದ್ದಾರೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]
ಪುತ್ತೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶಾಲೆಯೊಳಗೆ ನೀರು ನುಗ್ಗಿದೆ. ಆದರೆ, ಇದು ಮಳೆಯಿಂದಾಗಿ ಉಂಟಾದ ಸಮಸ್ಯೆಯಲ್ಲ . ಕಟ್ಟಡದ ಸುತ್ತ ಎತ್ತರವಿದ್ದು, ಶಾಲೆ ತಗ್ಗು ಪ್ರದೇಶದಲ್ಲಿರುವುದೇ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಶಾಲಾ ಕಟ್ಟಡವನ್ನು ಸೀಳಿಕೊಂಡು ನೀರು ಒಳ ಸೇರುತ್ತಿದೆ. ತರಗತಿಯೊಳಗೆ ಒಂದು ಬದಿ ದಿಡ್ಡು ನಿರ್ಮಿಸಿ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದೆ. ಆದರೂ ಪ್ರಯೋಜನವಾಗಲಿಲ್ಲ. ತರಗತಿ ಕೊಠಡಿಯೊಳಗೆ ಪೂರ್ತಿ ನೀರು . ಶೌಚಾಲಯದೊಳಗೂ ನೀರು ತುಂಬಿದೆ.












Click it and Unblock the Notifications