ಕರಾವಳಿಯ ಹೆಮ್ಮೆ ವಿಜಯಾ ಬ್ಯಾಂಕ್ ಇಂದು ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನ:ಪ್ರತಿಭಟನೆ
ಮಂಗಳೂರು, ಏಪ್ರಿಲ್ 01: ರಾಜ್ಯದ ಕರಾವಳಿ ಪ್ರದೇಶ "ಬ್ಯಾಂಕ್ಗಳ ತೊಟ್ಟಿಲು" ಎಂದೇ ಖ್ಯಾತಿ ಪಡೆದಿದೆ. ಕರಾವಳಿಯಲ್ಲಿ ಹುಟ್ಟಿ ಬೆಳೆದಿದ್ದ ಪ್ರತಿಷ್ಠಿತ ವಿಜಯಾ ಬ್ಯಾಂಕ್ ಇಂದು ವಿಲೀನ ಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತೀಕ ಎಂದೇ ಹೇಳಲಾಗುತ್ತಿದ್ದ ವಿಜಯಾ ಬ್ಯಾಂಕನ್ನು ಕೇಂದ್ರ ಸರಕಾರ ಕರಾವಳಿಗರ ಭಾರೀ ವಿರೋಧದ ನಡುವೆಯೂ ದೇನಾ ಹಾಗೂ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಿದೆ. ಇಂದಿನಿಂದ ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಆಗಿ ಪರಿವರ್ತನೆಗೊಂಡಿದೆ.
ಬ್ಯಾಂಕುಗಳ ವಿಲೀನಕ್ಕೆ ಸಂಪುಟ ಒಪ್ಪಿಗೆ: ಬರಿ ನೆನಪಾಗಿ ಉಳಿಯಲಿದೆ ವಿಜಯಾ ಬ್ಯಾಂಕ್
ಕರಾವಳಿಯ ಹೆಮ್ಮೆಯಲ್ಲಿ ಒಂದಾದ ವಿಜಯಾ ಬ್ಯಾಂಕ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಈ ಮೂಲಕ ಕರಾವಳಿಯ ಹೆಸರೊಂದು ಶಾಶ್ವತವಾಗಿ ಅಳಿಸಿ ಹೋಗಿದೆ. ಬ್ಯಾಂಕ್ಗಳ ತವರೂರಾದ ಕರಾವಳಿಯಲ್ಲಿ ಈಗ ಉಳಿದಿರುವುದು ಕೇವಲ ಎರಡೇ ಬ್ಯಾಂಕ್ಗಳು.
ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹಾಗೂ ಖಾಸಗಿ ಒಡೆತನದ ಕರ್ನಾಟಕ ಬ್ಯಾಂಕ್ಗಳು ಸ್ಥಾಪನೆಯಾಗಿದ್ದು ಇಲ್ಲಿಯೇ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಪೈಕಿ ಕಾರ್ಪೊರೇಷನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರಿನಲ್ಲಿದ್ದರೆ, ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಮಣಿಪಾಲದಲ್ಲಿದೆ. ಉಳಿದೆಲ್ಲ ಬ್ಯಾಂಕ್ಗಳ ಪ್ರಧಾನ ಕಚೇರಿಗಳು ಬೆಂಗಳೂರಿಗೆ ಸ್ಥಳಾಂತರಗೊಂಡಿವೆ.
ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?
ಇಲ್ಲಿ ಮಂಗಳೂರಿನಲ್ಲಿ ವಿಜಯಾ ಬ್ಯಾಂಕ್ ಸ್ಥಾಪನೆಯಿಂದ ಹಿಡಿದು ವಿಲೀನದವರೆಗಿನ ಆಸಕ್ತಿಕರ ಮಾಹಿತಿಯನ್ನು ವಿವರವಾಗಿ ಕೊಡಲಾಗಿದೆ...
ವಿಜಯಾ ಬ್ಯಾಂಕ್ ಹೆಸರು ಹೇಗೆ ಬಂತು?
ಅತ್ತಾವರ ಬಾಲಕೃಷ್ಣ ಶೆಟ್ಟಿ ಅವರಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಸಣ್ಣ ಕೊಠಡಿಯೊಂದರಲ್ಲಿ ಪ್ರಗತಿಪರ ರೈತರ ಬೆಂಬಲದೊಂದಿಗೆ ವಿಜಯಾ ಬ್ಯಾಂಕ್ ಸ್ಥಾಪನೆಯಾಗಿತ್ತು. ವಿಜಯ ದಶಮಿಯಂದು ಬ್ಯಾಂಕ್ ಪ್ರಾರಂಭಗೊಂಡಿದ್ದರಿಂದ ವಿಜಯಾ ಬ್ಯಾಂಕ್ ಎನ್ನುವ ಹೆಸರನ್ನು ಇಡಲಾಗಿತ್ತು. 1975 ರಲ್ಲಿ ಒಂದೇ ದಿನ 27 ಶಾಖೆಗಳನ್ನು ಕರಾವಳಿ ಭಾಗದಲ್ಲಿ ಆರಂಭಿಸುವ ಮೂಲಕ ದಾಖಲೆಯನ್ನೇ ಬರೆದಿತ್ತು.
ದೇನಾ, ಬ್ಯಾಂಕ್ ಬರೋಡದೊಂದಿಗೆ ವಿಲೀನ
2 ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ವಿಜಯಾ ಬ್ಯಾಂಕ್ , ತವರು ಜಿಲ್ಲೆಯಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 142 ಶಾಖೆಗಳನ್ನು ಹೊಂದಿದೆ.ಗ್ರಾಮೀಣ ಜನರ ಬ್ಯಾಂಕ್ ಎಂದೇ ಖ್ಯಾತಿಯಾಗಿದ್ದ ವಿಜಯಾ ಬ್ಯಾಂಕ್ ವಿಲೀನದಿಂದಾಗಿ ಗ್ರಾಮೀಣ ಶಾಖೆಗಳು ಮುಚ್ಚುವ ಭೀತಿ ಎದುರಾಗಿದೆ. ಇದರ ಜತೆಗೆ ಬ್ಯಾಂಕ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. 2,129 ಶಾಖೆ ಹಾಗೂ ಕರ್ನಾಟಕದಲ್ಲಿಯೇ 583 ಶಾಖೆಗಳನ್ನು ಹೊಂದಿರುವ ವಿಜಯಾ ಬ್ಯಾಂಕ್, ಆರ್ಥಿಕವಾಗಿ ಸದೃಢವಾಗಿತ್ತು. ಆದರೆ ಇದೀಗ ನಷ್ಟದಲ್ಲಿದ್ದ ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಬರೋಡದೊಂದಿಗೆ ವಿಲೀನಗೊಳಿಸಲಾಗಿದೆ.
ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ
ವಿರೋಧಿಸಿದ್ದ ವಿಜಯಾ ಬ್ಯಾಂಕ್ ಸಿಬ್ಬಂದಿಗಳು
2017-18 ರಲ್ಲಿ ದೇಶದಲ್ಲಿ ವಿಜಯಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಗಳು ಮಾತ್ರ ಲಾಭ ಗಳಿಸಿದ್ದವು. ಹೀಗಿರುವಾಗ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿದ್ದ ದೇನಾ ಹಾಗೂ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ವಿಜಯಾ ಬ್ಯಾಂಕ್ ಸಿಬ್ಬಂದಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭ ವಿಜಯ ಬ್ಯಾಂಕ್ ಅಧ್ಯಕ್ಷರಾಗಿದ್ದ ಮೂಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರು ಭಾರೀ ರಾಜಕೀಯಕ್ಕೂ ಕಾರಣವಾಗಿತ್ತು. ಏಕೆಂದರೆ ಅವರ ಹೆಸರನ್ನು ಮಂಗಳೂರಿನ ಒಂದು ರಸ್ತೆಗೆ ಇಡುವ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ನಡೆದಿತ್ತು.
ಕಡಿಮೆಯಾದ ನಮ್ಮ ಬ್ಯಾಂಕ್ ಎನ್ನುವ ಭಾವನೆ
ಬಿಜೆಪಿ ನಾಯಕರಿಗೆ ಮೂಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಇಡಲು ಇದ್ದ ಆಸಕ್ತಿ, ವಿಜಯಾ ಬ್ಯಾಂಕ್ ವಿಲೀನ ವಿರೋಧಿಸುವಲ್ಲಿ ಕಾಣಲಿಲ್ಲ ಎಂಬ ಆರೋಪ ಮಾಡಲಾಗುತ್ತಿದೆ. ಬ್ಯಾಂಕ್ನ ಪ್ರಧಾನ ಕಚೇರಿ ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ವಿಜಯಾ ಬ್ಯಾಂಕ್ ಬಗ್ಗೆ ಕರಾವಳಿಯ ಜನರಲ್ಲೂ ನಮ್ಮ ಬ್ಯಾಂಕ್ ಎನ್ನುವ ಭಾವನೆ ಕಡಿಮೆಯಾಗಿದೆ. ವಿಜಯಾ ಬ್ಯಾಂಕ್ ಅನ್ನು ದೇನಾ ಹಾಗೂ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಮಾಡಿರುವುನ್ನು ವಿರೋಧಿಸಿ ಕಾಂಗ್ರೆಸ್ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್ ಡೇ ಆಗಿ ಆಚರಿಸುತ್ತಿದೆ. ಪ್ರತಿಭಟನೆಯನ್ನೂ ಸಹ ಹಮ್ಮಿಕೊಂಡಿದೆ.