ದಕ್ಷಿಣ ಕನ್ನಡದ 2 ಪ.ಪಂ ಬಿಜೆಪಿ ತೆಕ್ಕೆಗೆ; ವಿಧಾನಸಭೆಗೆ ದಿಕ್ಸೂಚಿ ಅಲ್ಲ ಎಂದ ಕಟೀಲ್
ಮಂಗಳೂರು, ಡಿಸೆಂಬರ್ 30: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮಂಗಳೂರು ತಾಲೂಕಿನ ಕೋಟೆಕಾರು ಮತ್ತು ಬಂಟ್ವಾಳದ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಈ ಹಿಂದಿನಂತೆಯೇ ಈ ಬಾರಿಯೂ ಬಿಜೆಪಿ ಜಯಭೇರಿ ಬಾರಿಸಿದೆ.
ಈ ಮೂಲಕ ದಕ್ಷಿಣ ಕನ್ನಡದ ಎರಡು ಪಟ್ಟಣ ಪಂಚಾಯತ್ಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ ಕರಾವಳಿ ಬಿಜೆಪಿಯ ಭದ್ರಕೋಟೆ ಅನ್ನುವುದು ಮತ್ತೆ ಸಾಬೀತಾಗಿದೆ.
ವಿಟ್ಲದ 12 ಸ್ಥಾನಗಳಲ್ಲಿ ಬಿಜೆಪಿ ಜಯ
ವಿಟ್ಲ ಪಟ್ಟಣ ಪಂಚಾಯತ್ನ ಒಟ್ಟು 18 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು, 18 ವಾರ್ಡ್ಗಳಲ್ಲಿ 45 ಅಭ್ಯರ್ಥಿಗಳು ಕಣದಲ್ಲಿದ್ದರು. 18 ವಾರ್ಡ್ಗಳ ಫಲಿತಾಂಶ ಹೊರಬಿದ್ದಿದ್ದು, 18 ವಾರ್ಡ್ಗಳ ಪೈಕಿ 12 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಇನ್ನು 5 ಸ್ಥಾನಗಳಿಗೆ ಮಾತ್ರ ಕಾಂಗ್ರೆಸ್ ಸಮಾಧಾನ ಪಟ್ಟುಕೊಂಡರೆ, ಎಸ್ಡಿಪಿಐ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದೆ.

ಕೋಟೆಕಾರುವಿನಲ್ಲಿ ಬಿಜೆಪಿಗೆ 11 ಸ್ಥಾನ
ಇನ್ನು ಕೋಟೆಕಾರು ಪಟ್ಟಣ ಪಂಚಾಯತ್ನಲ್ಲಿ ಒಟ್ಟು 17 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 11 ಸ್ಥಾನ ಗಳಿಸಿದರೆ, ಕಾಂಗ್ರೆಸ್ 4 ಸ್ಥಾನ ಪಡೆದುಕೊಂಡಿದೆ. ಎಸ್ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.
ನಿರೀಕ್ಷೆಯಂತೆಯೇ ವಿಟ್ಲ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ ಗದ್ದುಗೆ ಹಿಡಿದು ಅಧಿಕಾರ ಉಳಿಸಿಕೊಂಡಿದೆ. ಗುಂಪುಗಾರಿಕೆ, ಅಭ್ಯರ್ಥಿ ಆಯ್ಕೆಯಲ್ಲಿ ಅಸಮಾಧಾನ ಇದ್ದರೂ, ಬಿಜೆಪಿ ಎರಡೂ ಪಟ್ಟಣ ಪಂಚಾಯತ್ನಲ್ಲಿ ಜಯಗಳಿಸಲು ಶಕ್ತವಾಗಿದೆ.
ಇನ್ನು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆದ್ದ ಅಭ್ಯರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಗೆದ್ದ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದ ಕಟೀಲ್
ಈ ವೇಳೆ ಗೆದ್ದ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದ ಕಟೀಲ್, ಮೊದಲು ಪಂಚಾಯತ್ನಲ್ಲಿ ತಮ್ಮ ವ್ಯಾಪ್ತಿ ಮತ್ತು ಸಾಮರ್ಥ್ಯದ ಬಗ್ಗೆ ಅರಿವು ಮಾಡಿಕೊಳ್ಳಬೇಕು. ಯಾವುದೇ ಗುಂಪುಗಾರಿಕೆಗೆ ಅವಕಾಶ ನೀಡದೆ ಶಾಸಕರ ನಿಧಿ ಮತ್ತು ಪಂಚಾಯತ್ ನಿಧಿಯಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಟೀಲ್, ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಇದು ಕರಾವಳಿಯಲ್ಲಿ ಬಿಜೆಪಿ ಪ್ರಾಬಲ್ಯಕ್ಕಿರುವ ಸಾಕ್ಷಿ ಅಂತಾ ಹೇಳಿದ್ದಾರೆ.
ಒಟ್ಟಾರೆ ರಾಜ್ಯದ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಸಿಕ್ಕಿದೆ. ಈ ಚುನಾವಣೆ ಸ್ಥಳೀಯವಾದ ಕಾರಣ ಅಭ್ಯರ್ಥಿಗಳು, ವಿಷಯಗಳು ಸ್ಥಳೀಯವಾಗಿರುತ್ತೆ. ಹಾಗಾಗಿ ಇದು ಸ್ಥಳೀಯವಾಗಿ ಸಂಬಂಧಿಸಿದ ಚುನಾವಣೆಯಾಗಿದೆ. ಒಬ್ಬ ಪಕ್ಷೇತರ ನಿಂತರೂ ಓಟುಗಳು ವ್ಯತ್ಯಾಸವಾಗುತ್ತವೆ, ಫಲಿತಾಂಶ ವಿರುದ್ಧವಾಗಿ ಬರುತ್ತದೆ. ಹೀಗಾಗಿ ಇದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ ಅಂತಾ ಕಟೀಲ್ ಹೇಳಿದ್ದಾರೆ.

ಆದರೂ ಉತ್ತಮವಾದ ಫಲಿತಾಂಶ ಬಿಜೆಪಿಗೆ ಸಿಕ್ಕಿದೆ. ಚಿಕ್ಕಮಗಳೂರು, ಉತ್ತರ ಕರ್ನಾಟಕ ಭಾಗದ ಕೆಲವೆಡೆ ಈ ಬಾರಿ ಗೆದ್ದಿದ್ದೇವೆ. ಈ ಫಲಿತಾಂಶ ಖಂಡಿತವಾಗಿಯೂ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಅಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ಗಳು ಯಾವುದೇ ಚುನಾವಣೆಯ ದಿಕ್ಸೂಚಿ ಆಗಲ್ಲ. ಇದರಲ್ಲಿ ಲೋಕಲ್ ಸಮಸ್ಯೆ, ಲೋಕಲ್ ವಿಷಯ, ಲೋಕಲ್ ಅಭ್ಯರ್ಥಿಗಳಿರುತ್ತಾರೆ. ಇದು ಅಲ್ಲಲ್ಲೇ ನಡೆಯುವ ಚುನಾವಣೆ, ಯಾವುದೇ ಚುನಾವಣೆ ದಿಕ್ಸೂಚಿ ಅಲ್ಲ. ಆದರೂ ಬಿಜೆಪಿ ಒಳ್ಳೆಯ ಫಲಿತಾಂಶ ಕೊಟ್ಟಿದೆ ಅಂತ ಅನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.












Click it and Unblock the Notifications