'ನರೇಂದ್ರ ಮೋದಿ ಸರಿಯಿಲ್ಲ ಅಂತ ಹೇಳಿಕೊಟ್ಟದ್ದು ಜನಾರ್ಧನ ಪೂಜಾರಿಯವರು'
ಮಂಗಳೂರು, ಮಾರ್ಚ್ 17:ಮುಂಬರುವ ಲೋಕಸಭಾ ಚುನಾವಣೆ ದೇಶದ ಸಂವಿಧಾನವನ್ನು ಉಳಿಸುವ ಚುನಾವಣೆಯಾಗಲಿದೆ. ಆ ಕಾರಣಕ್ಕಾಗಿ ಕಾಂಗ್ರೆಸ್ ಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಸಚಿವ ಯುಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಸಂಸದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಮಸ್ಯೆಯನ್ನು ಕಳೆದ 10 ವರ್ಷದಲ್ಲಿ ಸಂಸತ್ತಿನಲ್ಲಿ ಗಮನ ಸೆಳೆಯಲು, ಹೇಳಲು ಸಾಧ್ಯವಾಗಿಲ್ಲ. ಹೇಳಿಕೊಳ್ಳುವಂತಹ ಯಾವುದೇ ಅನುದಾನ ಜಿಲ್ಲೆಗೆ ಬಂದಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದರು.
ಪ್ರಧಾನಿ ಪ್ರತಿಯೊಂದರಲ್ಲೂ ಭಾವನಾತ್ಮಕವಾಗಿ ಮಾತಾಡುತ್ತಾರೆ. ನೋಟ್ ಬ್ಯಾನ್ ನನ್ನು ಭಾವನಾತ್ಮಕವಾಗಿ ತೋರಿಸಿದರು. ಅದರಿಂದ 153 ಜನರು ಬಲಿಯಾಗಿದ್ದಾರೆ . ಆದರೆ ಅದರ ಬಗ್ಗೆ ಮೋದಿ ಈ ವರೆಗೂ ಮಾತಾಡಿಲ್ಲ. ರಫೇಲ್ ನ ಮಾಹಿತಿ ಕದ್ದು ಹೋಗಿದೆ ಅಂತಾರೆ. ಇಂತಹ ವಿಚಿತ್ರ ಸರಕಾರ ವಿಶ್ವದ ಎಲ್ಲಿಯೂ ಕಾಣಸಿಗದು ಎಂದು ಖಾದರ್ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಒಗ್ಗಟ್ಟಾಗಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ ಖಾದರ್, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ಕಾರ್ಯಕರ್ತರಿಗೂ ತಮ್ಮ ಅಭ್ಯರ್ಥಿ ಬೇಕು ಅಂತಾ ಇರುತ್ತದೆ. ಪಕ್ಷದ ಮುಖಂಡರಿಗೆ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಪಕ್ಷದ ನಾಯಕರ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

'ಮೋದಿಯಿಂದ ಭ್ರಷ್ಟಾಚಾರ ನಿವಾರಣೆ' ಎಂದು ಮೋದಿ ಪರ ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಕುರಿತು ಪ್ರತಿಕ್ರಿಯಿಸಿದ ಖಾದರ್, ಜನಾರ್ದನ ಪೂಜಾರಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನರೇಂದ್ರ ಮೋದಿ ಸರಿಯಿಲ್ಲ ಅಂತ ಹೇಳಿಕೊಟ್ಟದ್ದು ಜನಾರ್ಧನ ಪೂಜಾರಿಯವರು. ಅವರು ನಮ್ಮ ಗುರುವಿನ ಸ್ಥಾನದಲ್ಲಿರುವವರು . ರಾಹುಲ್ ಗಾಂಧಿ ಹೆಸರು ಹೇಳುವ ಬದಲು, ಮೋದಿ ಹೆಸರು ಹೇಳಿರಬಹುದು ಎಂದು ಸಮಜಾಯಿಷಿ ನೀಡಿದರು.
ಈ ಹಿಂದೆ ಕೆಟ್ಟ ಶಬ್ದಗಳಿಂದ ಪೂಜಾರಿಯವರನ್ನು ಬಿಜೆಪಿ ಕಾರ್ಯಕರ್ತರು ನಿಂದಿಸಿದ್ದಾರೆ. ಪೂಜಾರಿ ಅವರನ್ನು ಬೇಕಾದ ಹಾಗೆ ಬಿಜೆಪಿಯವರು ಯೂಸ್ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಪೂಜಾರಿ ಮೇಲೆ ಅಭಿಮಾನ ಇದ್ದರೆ ಸೀಟು ಬಿಟ್ಟು ಕೊಡಲಿ. ಬಿಜೆಪಿ ಅಭ್ಯರ್ಥಿ ಹಾಕದಿದ್ರೆ ಜನಾರ್ದನ ಪೂಜಾರಿಯೇ ಕಾಂಗ್ರೆಸ್ ಅಭ್ಯರ್ಥಿ ಎಂದು ತಿಳಿಸಿದರು.












Click it and Unblock the Notifications