ನೀರಲ್ಲಿ ಕೊಚ್ಚಿ ಹೋಗಿದ್ದ ನಾಯಿಮರಿಗಳು ಎರಡು ದಿನಗಳ ನಂತರ ಪತ್ತೆ

ಮಂಗಳೂರು, ಆಗಸ್ಟ್ 6: ದಕ್ಷಿಣಕನ್ನಡ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಲ್ಲೂ ಸುಳ್ಯ ತಾಲೂಕು ಮಹಾಮಳೆಗೆ ಜರ್ಜರಿತವಾಗಿದೆ. ಸುಳ್ಯ-ಕೊಡಗು ಗಡಿಭಾಗದ ಗ್ರಾಮಗಳು ಮೇಘಸ್ಫೋಟಕ್ಕೆ ಎಂದೂ ಕಾಣದ ಅನಾಹುತವನ್ನು ಕಂಡಿದೆ.

ಸುಳ್ಯ ತಾಲೂಕಿನ ಹರಿಹರ, ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಾಳುಗೋಡು, ಕಲ್ಲಕಾರು ಭಾಗದಲ್ಲಿ ಮಳೆ ಜನರನ್ನು ಭಯದಿಂದ ಬದುಕುವಂತಹ ಸ್ಥಿತಿಗೆ ತಂದೊಡ್ಡಿದೆ. ಕಲ್ಮಕಾರು, ಕಡಮಕಲ್ಲು ಬೆಟ್ಟದ ಭಾಗದಲ್ಲಿ ಭೂಕುಸಿತ ಉಂಟಾಗಿ ನೀರಿನ ಜೊತೆಗೆ ಭಾರೀ ಪ್ರಮಾಣದ ಮಣ್ಣು, ಕಲ್ಲು, ಮರಗಳು ಬಂದ ಕಾರಣ ಈ ಭಾಗದ ಬಹುತೇಕ ಗ್ರಾಮಗಳು ಇತರೆ ಭಾಗಗಳ ಸಂಪರ್ಕವನ್ನೇ ಕಳೆದುಕೊಳ್ಳುವಂತಾಗಿದೆ. ಮೇಘಸ್ಪೋಟ ಮಳೆಯಿಂದಾಗಿ ಹಲವಾರು ಜನ ತಮ್ಮ ಮನೆ, ಬದುಕಿಗೆ ಆಸರೆಯಾಗಿದ್ದ ಅಂಗಡಿಮುಂಗಟ್ಟುಗಳನ್ನು ಕಳೆದುಕೊಂಡಿದ್ದಾರೆ. ಆದರೆ ಇದರ ನಡುವೆ ಮಹಾಪ್ರಳಯಕ್ಕೆ ಕೊಚ್ಚಿ ಹೋಗಿದ್ದ ಎರಡು ಪುಟಾಣಿ ಶ್ವಾನಗಳು ಜೀವಂತವಾಗಿದ್ದು, ಸರ್ವಸ್ವವನ್ನೂ ಕಳೆದುಕೊಂಡ ಮನೆಯವರಿಗೆ ಮುದ್ದಿನ ಶ್ವಾನಗಳು ಜೀವಂತವಾಗಿ ಸಿಕ್ಕಿರೋದು ಖುಷಿ ನೀಡಿದೆ.

ಆಗಸ್ಟ್ 1 ರಂದು ರಾತ್ರಿಯಿಡೀ ಸುರಿದ ರಣಭೀಕರ ಮಳೆಗೆ ಕೊಲ್ಲಮೊಗ್ರದ ಹೊಳೆ ಇಡೀ ಗ್ರಾಮವನ್ನು ಆವರಿಸಿ ಅನೇಕ ಮನೆಗಳಿಗೆ ನೆರೆ ನೀರು ನುಗ್ಗಿ ಬಹಳಷ್ಟು ಅವಾಂತರಗಳು ಸೃಷ್ಟಿಸಿತ್ತು. ಕೊಲ್ಲಮೊಗ್ರು ಗ್ರಾಮದ ದೋಲನಮನೆ ಎನ್ನುವ ಊರಿನ ನಿವಾಸಿಯಾದ ಶ್ರೀಮತಿ ಲಲಿತಾ ರವರು ಮನೆಗೂ ನೆರೆ ನೀರು ನುಗ್ಗುತ್ತಿದ್ದಂತೆಯೇ ಲಲಿತಾ ಮನೆಯವರು ಪಕ್ಕದ ಮನೆಯಲ್ಲಿ ಆಶ್ರಯ ಪಡೆದರು. ಆದರೆ ಅವರ ಪುತ್ರ ಹೇಮಂತ್ ಕೆಲಸದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಹರಿಹರ ಹೊಳೆಯಲ್ಲಿ ಬಹಳಷ್ಟು ನೀರು ಏರಿಕೆ ಆಗಿದ್ದರಿಂದ ಹರಿಹರ-ಕೊಲ್ಲಮೊಗ್ರ ಸಂಪರ್ಕ ರಸ್ತೆ ಬ್ಲಾಕ್ ಆಗಿತ್ತು. ಮನೆಗೆ ತಲುಪಲಾಗದೆ ಮರುದಿನ ನೀರು ಇಳಿಮುಖ ಗೊಂಡ ನಂತರ ಮನೆಗೆ ತೆರಳಿದರು. ಈ ವೇಳೆ ಮನೆಯಲ್ಲಿ ಬಹಳಷ್ಟು ಆಘಾತ ಪಡುವ ಘಟನೆ ನಡೆದು ಹೋಗಿತ್ತು.

Two Puppies Founds Nearly Two days after swept away by Flood water in Mangaluru

ನೆರೆ ನೀರು ಇಡೀ ಮನೆಯನ್ನು ಆವರಿಸಿದ ಪರಿಣಾಮ ಅವರ ಮನೆ ನೆಲಕಚ್ಚಿತ್ತು. ಮನೆಯಲ್ಲಿದ್ದ ಅನೇಕ ವಸ್ತುಗಳು ನೆರೆ ನೀರಿನ ಪಾಲಾಗಿತ್ತು. ಹಟ್ಟಿಯಲ್ಲಿದ್ದ ಹಸುವೊಂದು ನೆರೆ ಕೊಚ್ಚಿ ಹೋಗಿ ಮುಳುಗಿ ಮೃತ ಪಟ್ಟಿತ್ತು. ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಹೆಸರಿನ ಪೊಮೇರಿಯನ್ ಜಾತಿಯ ನಾಯಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದವು. ಮನೆ- ಕೃಷಿ ಎಲ್ಲವನ್ನೂ ಕಳೆದುಕೊಂಡ ದುಃಖದಲ್ಲಿದ್ದ ಲಲಿತಾ ಮನೆಯವರಿಗೆ ತಮ್ಮ ಮನೆ ಸದಸ್ಯರಂತೇ ಇದ್ದ ಎರಡು ನಾಯಿಗಳು ಕಣ್ಮರೆಯಾದ ವಿಚಾರವನ್ನು ಅರಗಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ.

ಪ್ರತೀ ದಿನವೂ ನಾಯಿಗಳು ನಾಪತ್ತೆಯಾದ‌ ಕೊರಗಿನಲ್ಲೇ ಇದ್ದ ಲಲಿತಾ ಮನೆ ಮಂದಿಗೆ ಎರಡು ದಿನದ ಬಳಿಕ ಸಂತಸ ಕ್ಷಣವೊಂದು ಎದುರಾಯಿತು. ಪ್ರವಾಹದಲ್ಲಿ ಕೊಚ್ಚಿ ಹೋದ ರಾಜು -ರಾಣಿ ನಾಯಿಗಳು ಬದುಕಿವೆ ಎಂಬ ದೂರವಾಣಿ ಕರೆ ಮನೆ ಮಂದಿಯಲ್ಲಿ ಸಂತಸವನ್ನು ತಂದಿದೆ. ದೋಲನಮನೆಯಿಂದ ಸುಮಾರು 2.5 ಕಿಲೋಮೀಟರ್ ದೂರದ ಚಾಂತಳ ಎಂಬಲ್ಲಿ ಒಂದು ಶ್ವಾನ ಪತ್ತೆಯಾಗಿತ್ತು. ಎರಡು ದಿನದ ಬಳಿಕ ಮತ್ತೊಂದು ನಾಯಿ ಚಾಂತಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿತ್ತು. ಮುದ್ದಾಗಿ ಸಾಕಿದ ಶ್ವಾನಗಳು ಸಿಕ್ಕಿದಾಗ ಮನೆ ಕಳೆದು ಕೊಂಡ ದುಃಖ ಮಧ್ಯೆ ಸಂತಸ ಮನೆಯವರ ಮುಖದಲ್ಲಿ ಕಂಡು ಬಂದಿದೆ.

"ಶ್ವಾನಗಳ ಪತ್ತೆ ಹಚ್ಚುವಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಚಾಂತಳ, ಗ್ರಾಮ ಪಂಚಾಯತ್ ಸದಸ್ಯ ಮಾಧವ ಚಾಂತಳ ರವರು ಮೊದಲಾದವರು ಸಹಕರಿಸಿದ್ದಾರೆ. ಮನೆ ಮಂದಿಯಂತಿದ್ದ ನಾಯಿಗಳನ್ನು ಕಳೆದುಕೊಂಡೆವು ಎಂದು ದುಃಖದಲ್ಲಿದ್ದ ನಮಗೆ ನಾಯಿಗಳು ಮತ್ತೆ ಕೈ ಸೇರಿದ್ದು ಹೇಳಲಾಗದ, ವರ್ಣಿಸಲಾಗದ ಸಂತಸ ತಂದಿದೆ " ಎಂದು ಲಲಿತಾರ ಪುತ್ರ ಹೇಮಂತ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+