ಮಂಗನ ಕಾಯಿಲೆ, ಕಾಳ್ಗಿಚ್ಚಿನ ಭೀತಿ: ಮಳೆಗಾಲದವರೆಗೆ ಚಾರಣ ನಿಷೇಧ
ಮಂಗಳೂರು, ಫೆಬ್ರವರಿ 05: ಪಶ್ಚಿಮ ಘಟ್ಟ ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಂಗನಕಾಯಿಲೆ ಮತ್ತು ಬೆಟ್ಟ ಪ್ರದೇಶದಲ್ಲಿ ಕಾಳ್ಗಿಚ್ಚಿನ ಭೀತಿ ಇರುವ ಹಿನ್ನೆಲೆಯಲ್ಲಿ ಚಾರಣಿಗರನ್ನು ಸೆಳೆಯುವ ಪಶ್ಚಿಮಘಟ್ಟದ ಅನೇಕ ಪ್ರದೇಶಗಳಲ್ಲಿ ಇದೀಗ ನಿಯಂತ್ರಣ ಹೇರಲಾಗಿದೆ.
ಪ್ರಮುಖವಾಗಿ ಪಶ್ಚಿಮ ಘಟ್ಟದಲ್ಲಿ ಅತಿ ಹೆಚ್ಚು ಚಾರಣಿಗರು ತೆರಳುವ ಕುದುರೆಮುಖ, ಕುಮಾರ ಪರ್ವತ, ಕೊಡಚಾದ್ರಿ ಶಿಖರಗಳಿಗೆ ಚಾರಣಕ್ಕೆ ತೆರಳುವುದನ್ನು ನಿಷೇಧಿಸಿ ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮುಕಾಂಬಿಕಾ ಅರಣ್ಯ ವಲಯ ವ್ಯಾಪ್ತಿಯ ಕೊಡಚಾದ್ರಿ, ಆಗುಂಬೆಯ ನರಸಿಂಹ ಬೆಟ್ಟ, ಕುಡ್ಲು ತೀರ್ಥ, ಬರ್ಕಣ, ವನಕೆ ಬೆಟ್ಟ, ಶೃಂಗೇರಿ ವ್ಯಾಪ್ತಿಯ ಸೂಜಿಮಲೆ, ಬಲಿಗೆಕಾನ, ಮೆಣಸಿನ ಹಾಡ್ಯ, ಕುದುರೆ ಮುಖ ವ್ಯಾಪ್ತಿಯ , ಕುದುರೆಮುಖ ಬೆಟ್ಟ, ಹಿರಿಮರಿ ಗುಡ್ಡ, ಕೃಷ್ಣಗಿರಿ, ಚಾರ್ಮಾಡಿ ವ್ಯಾಪ್ತಿಯ ಬಾಳೆಗುಡ್ಡ, ದೊಡ್ಡೇರಿ ಬೆಟ್ಟ, ಹೊಸಮನೆ ಗುಡ್ಡ, ರಮಣಗುಡ್ಡ, ಸೊಪ್ಪಿನ ಬೆಟ್ಟ, ಬಾರಿಮಲೆ, ದೇವರಮನೆ, ಮಿಂಚುಕಲ್ಲು, ದೀಪದಕಲ್ಲು, ಮಡಿಕೇರಿ ವನ್ಯಜೀವಿ ವಿಭಾಗದ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ವನ್ಯಧಾಮದಲ್ಲಿ ಪ್ರವಾಸಿಗರು ಹಾಗೂ ಚಾರಣಿಗರಿಗೆ ಪ್ರವೇಶ ನಿಷೇಧಿಸಿ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಾಡಿನಲ್ಲಿ ಮಂಗನಕಾಯಿಲೆ ಹರಡುವ ರೋಗಾಣುಗಳು ಚಾರಣಿಗರ ಸಂಪರ್ಕಕ್ಕೆ ಬರುವ ಆತಂಕದ ಹಿನ್ನೆಲೆಯಲ್ಲಿ ಮಳೆಗಾಲದವರೆಗೆ ಚಾರಣಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ.
ಮಂಗನಕಾಯಿಲೆ ಹರಡುತ್ತಿರುವುದರಿಂದ ಚಾರಣಕ್ಕೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಆದರೆ ಅರಣ್ಯ ಇಲಾಖೆ ಚಾರಣ ನಿಷೇಧ ಹೇರಿ ಸಾಧಿಸುವುದಾದರೂ ಏನನ್ನು? ಪ್ರಶ್ನಿಸಿರುವ ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಈವರೆಗಿನ ಕಾಡ್ಗಿಚ್ಚಿಗೆ ಚಾರಣಿಗರು ಕಾರಣರೇ? ಮೊದಲು ಕಾಡು ಕಳ್ಳರನ್ನು, ಬೇಟೆಗಾರರು, ಕಾಡಿನೊಳಗೆ ಅಕ್ರಮ ರಿಸಾರ್ಟ್, ಗಾಂಜಾ,ಟಿಂಬರ್ ಮಾಫಿಯಾ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ. ಆಗ ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುತ್ತದೆ ಎಂದು ಕಿಡಿಕಾರಿದ್ದಾರೆ.












Click it and Unblock the Notifications