ಪುತ್ತೂರಿನಲ್ಲಿ ಅತೃಪ್ತರ ಬಂಡಾಯದ ನಡುವೆ ಗೆಲುವು ಯಾರಿಗೆ ?
ಮಂಗಳೂರು, ಮೇ 01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಜಿದ್ದಾಜಿದ್ದಿಯ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವ ಅತೃಪ್ತ ಮುಖಂಡರು ಜಯದ ಸುಗಮ ದಾರಿಯನ್ನು ಕಠಿಣಗೊಳಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ .
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ಆಕಾಂಕ್ಷಿಗಳ ಅತೃಪ್ತ ಬಣಗಳು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷವನ್ನು ಕಾಡುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣದಲ್ಲಿರುವವರ ಮಾಹಿತಿ
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಶೋಕ್ ಕುಮಾರ್ ಶೆಟ್ಟಿ ಬಹಿರಂಗವಾಗಿ ಅಪಸ್ವರ ಹೊರಹಾಕಿದ್ದರು. ಇದು ಪಕ್ಷದ ವರಿಷ್ಠರ ನಿದ್ದೆಗೆಡಿಸಿತ್ತು.
ಪುತ್ತೂರು ಕ್ಷೇತ್ರದಿಂದ ಸಂಜೀವ ಮಠಂದೂರು ಅವರಿಗೆ ಬಿಜೆಪಿ ಟಿಕೆಟ್ ಅಂತಿಮಗೊಳ್ಳುತ್ತಿದ್ದಂತೆ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಅರುಣ್ ಕುಮಾರ್ ಪುತ್ತಿಲ ಬಣ ತಟಸ್ಥ ಧೋರಣೆ ಕೈಗೊಂಡಿರುವುದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ .
ಈ ಅತೃಪ್ತ ಬಣಗಳ ತಲೆನೋವು ಕೇವಲ ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ಅನ್ನೂ ಕಾಡುತ್ತಿದೆ. ಅಲ್ಲಿಯೂ ಅತೃಪ್ತರ ಬಣಗಳು ಬಂಡಾಯದ ಬಾವುಟ ಹಾರಿಸಿವೆ.
ಬಿಜೆಪಿಯ ಹಿಂದೂಗಳ ಸಂಸ್ಕೃತಿ ಅನಾವರಣಗೊಳ್ಳುತ್ತಿದೆ: ಪ್ರತಿಭಾ ಕುಳಾಯಿ
ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಪುತ್ತೂರು ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಯಾಗಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಅಸಮಾಧಾನ ಹೊರಹಾಕಿದ್ದರು. ಶಾಸಕಿ ಶಕುಂತಲಾ ಶೆಟ್ಟಿ ಅವರ ವಿರುದ್ಧ ಹೇಮನಾಥ ಶೆಟ್ಟಿ ಬಣ ಈಗ ತಿರುಗಿಬಿದ್ದಿದೆ. ಈ ಮಧ್ಯೆ ಶಾಸಕಿ ಶಕುಂತಲಾ ಶೆಟ್ಟಿಯವರ ಕೆಲ ನಡವಳಿಕೆಗಳಿಂದ ಮುಸ್ಲಿಂ ಸಮುದಾಯ ಅಸಮಾಧಾನಗೊಂಡಿದೆ ಎಂದು ಹೇಳಲಾಗುತ್ತಿದೆ .
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೀಗಿದೆ: ಇಲ್ಲಿ 1,97,923 ಮತದಾರರಿದ್ದಾರೆ. ಒಕ್ಕಲಿಗ ಗೌಡ ಸಮುದಾಯದವರು 41,312 ರಷ್ಟಿದ್ದಾರೆ. ಬಿಲ್ಲವರು 30,276, ಮುಸ್ಲಿಮರು 18,913, ಕ್ರಿಶ್ಚಿಯನ್ನರು 11,769, ಪರಿಶಿಷ್ಟ ಜಾತಿ ಸಮುದಾಯದವರು 16,607 ರಷ್ಟಿದ್ದಾರೆ. ಪರಿಶಿಷ್ಟ ಪಂಗಡದವರ ಸಂಖ್ಯೆ 11,538 ರಷ್ಟಿದೆ. ಈ ಕ್ಷೇತ್ರದಲ್ಲಿ ಬಂಟರ ಮತಗಳು 38,007ರಷ್ಟಿದೆ. ಇಲ್ಲಿ ಬಂಟ್ಸ್ ಸಮುದಾಯದ ಮತಗಳೇ ನಿರ್ಣಾಯಕ ಎಂದು ಹೇಳಲಾಗುತ್ತದೆ.
ಅದಲ್ಲದೆ ಈ ಕ್ಷೇತ್ರದಲ್ಲಿ ಬ್ರಾಹ್ಮಣರು, ಕುಲಾಲ್, ವಿಶ್ವಕರ್ಮ, ಕ್ಷತ್ರಿಯ, ಸವಿತಾ ಸಮಾಜ, ಮಡಿವಾಳ, ಗೌಡ ಸರಸ್ವತ ಬ್ರಾಹ್ಮಣ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾಂಗ್ರೆಸ್ ಅಥವಾ ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಅಡ್ಡಗಾಲು ಹಾಕುವುದಕ್ಕಿಂತ, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅತೃಪ್ತರ ಬಣಗಳೇ ಆಯಾ ಪಕ್ಷದವರಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ. ಪಕ್ಷಗಳ ವಿರುದ್ಧ ಅಸಮಾಧಾನಗೊಂಡಿರುವ ಮುಖಂಡರ ನಡೆ ಅಂತಿಮ ಹಂತದಲ್ಲಿ ಪ್ರಮುಖವಾಗಲಿದೆ ಎಂದು ವಿಮರ್ಶಿಸಲಾಗುತ್ತಿದೆ.