ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ
ಮಂಗಳೂರು, ಅಕ್ಟೋಬರ್ 28: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ಇನ್ನೂ ಮುಗಿದಿಲ್ಲ. ಟೋಲ್ ಗೇಟ್ ತೆರವುಗೊಳಿಸುವವರೆಗೆ ಅನಿರ್ದಿಷ್ಟ ರಾತ್ರಿ ಹಗಲು ಧರಣಿಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮುಂದಾಗಿದೆ. ಜಿಲ್ಲಾಡಳಿತದ ಮನವಿಗೂ ಸ್ಪಂದಿಸದೆ ಹೋರಾಟ ಸಮಿತಿ ಸೆಕ್ಷನ್ ನಡುವೆಯೂ ಇಂದಿನಿಂದ ಧರಣಿ ಆರಂಭಿಸಿದೆ.
ಅಕ್ಟೋಬರ್ 18 ರಂದು ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ಬಳಿ ಭಾರೀ ಹೈಡ್ರಾಮವೇ ನಡೆದಿತ್ತು. ಸುರತ್ಕಲ್ ಟೋಲ್ ಗೇಟ್ ಅಕ್ರಮ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಹೋರಾಟ ಉಗ್ರ ಸ್ವರೂಪಕ್ಕೆ ಹೋಗಿತ್ತು. ಪೊಲೀಸರು ಹಾಕಿದ್ದ ತಡೆಬೇಲಿಯನ್ನು ಮುರಿದು ಟೋಲ್ ಗೇಟ್ನತ್ತ ನುಗ್ಗಿದ್ದ ಹೋರಾಟಗಾರ ಹೈಡ್ರಾಮ ನಡೆಸಿದ್ದು ಬಳಿಕ ಪೊಲೀಸರು ನೂರಾರು ಹೋರಾಟಗಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ದರು.
ಇದಾದ ಬಳಿಕ ಟೋಲ್ ಗೇಟ್ ನವೆಂಬರ್ 7 ರೊಳಗಾಗಿ ಸ್ಥಗಿತಗೊಳಿಸುವ ಬಗ್ಗೆ ಜಿಲ್ಲಾಡಳಿತ ಭರವಸೆ ನೀಡಿದೆ. ಆದರೆ ಇಂತಹ ಭರವಸೆಗಳು ಕಳೆದ ಆರು ವರ್ಷದಿಂದ ಅನೇಕ ಆಗಿರುವುದರಿಂದ ಇದರ ಬಗ್ಗೆ ನಂಬಿಕೆ ಇಲ್ಲ ಎಂದಿರುವ ಹೋರಾಟ ಸಮಿತಿ ಇಂದಿನಿಂದ ರಿಂದ ಟೋಲ್ ಗೇಟ್ ಮುಂಭಾಗದಲ್ಲಿ ರಾತ್ರಿ ಹಗಲು ಅನಿರ್ಧಿಷ್ಟ ಧರಣಿ ಆರಂಭಿಸಿದೆ.

ಇಂದು(ಅಕ್ಟೋಬರ್ 28) ಧರಣಿ ಆರಂಭಗೊಂಡಿದ್ದು ಜಿಲ್ಲಾಡಳಿತ, ಸಂಸದರು ಹೇಳಿದಂತೆ ನವೆಂಬರ್ 7ಕ್ಕೆ ಮತ್ತೆ 9 ದಿನಗಳು ಇದೆ. ಈ ದಿನದ ಮೊದಲಾದರೂ ಟೋಲ್ ಗೇಟನ್ನು ಮುಚ್ಚುವ ಕೆಲಸ ಜಿಲ್ಲಾಡಳಿತ ಮಾಡಲಿ. ಇಲ್ಲದೇ ಇದ್ದಲ್ಲಿ ಟೋಲ್ ಗೇಟ್ ಸ್ಥಗಿತಗೊಳ್ಳುವವರೆಗೂ ಅನಿರ್ದಿಷ್ಟ ಧರಣಿಯನ್ನು ಮುಂದುವರೆಸುವುದು ಅನಿವಾರ್ಯವಾಗಿದೆ. ಶಾಂತಿಯುತ ಧರಣಿ ನಡೆಸಲು ಅನುಮತಿ ಪಡೆದಿದ್ದರೂ, ಪೊಲೀಸ್ ಪ್ರಭಾವ ಬಳಸಿ ಟೋಲ್ ಗೇಟ್ನ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಹಾಕಿ ಧರಣಿಯನ್ನು ಹತ್ತಿಕ್ಕುವ ಪ್ರಯತ್ನ ಜಿಲ್ಲಾಡಳಿತ ಮಾಡಿದೆ ಎಂದು ಹೋರಾಟಗಾರರಾದ ಎಂಜಿ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ಆರಂಭಗೊಂಡ ಈ ಧರಣಿಯಲ್ಲಿ ಕಾಂಗ್ರೆಸ್ನ ನಾಯಕರು ಸೇರಿದಂತೆ ವಿವಿಧ ಪಕ್ಷ, ಸಂಘಟನೆಯ ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ಟೋಲ್ ಗೇಟ್ ವಿಚಾರದಲ್ಲಿ ಈ ಬಾರಿ ಹೋರಾಟ ಸಮಿತಿ ಕೊನೆಯ ಅಸ್ತ್ರವಾಗಿ ಧರಣಿಗೆ ಮುಂದಾಗಿದಂತಿದೆ.












Click it and Unblock the Notifications