ಮಂಗಳೂರು: ಆಧಾರ್ ಕಾರ್ಡ್ ಪಡೆಯಲು ಜನವೋ ಜನ
ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಮತ್ತು ತಿದ್ದುಪಡಿಗಾಗಿ ಟೋಕನ್ ಪಡೆಯಲು ಸುಮಾರು 250 ಮೀಟರ್ ಉದ್ದದ ಸಾಲಿನಲ್ಲಿ ಜನರು ಕಾಯುತ್ತಿದ್ದ ದೃಶ್ಯ ಕಾಣಿಸಿತು
ಮಂಗಳೂರು, ಆಗಸ್ಟ್ 21 : ಸರ್ಕಾರದ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೋಳಿಸುತ್ತಿರುವ ಬೆನ್ನಲ್ಲಿಯೇ ಎಲ್ಲೆಡೆ ಆಧಾರ್ ಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ,
ಅದಕ್ಕೆ ಪೂರಕವೆಂಬಂತೆ ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಮತ್ತು ತಿದ್ದುಪಡಿಗಾಗಿ ಟೋಕನ್ ಪಡೆಯಲು ಸುಮಾರು 250 ಮೀಟರ್ ಉದ್ದದ ಸಾಲಿನಲ್ಲಿ ಜನರು ಕಾಯುತ್ತಿದ್ದ ದೃಶ್ಯ ಕಾಣಿಸಿತು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಟೋಕನ್ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕಾಗಿ ಜನರು ಬೆಳಿಗ್ಗೆ 6 ಗಂಟೆಗೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯಿಂದ ಸರತಿ ಸಾಲಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಕ್ಕಳು, ವಯೋವೃದ್ಧರು, ಗರ್ಬಿಣಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಸುಸ್ತಾದರು.
ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿದ ಡಾ. ಜಗದೀಶ್, 'ಇವತ್ತು ಇಲ್ಲಿ ಟೋಕನ್ ಪಡೆಯಲು ಬಂದವರಲ್ಲಿ 95% ತಿದ್ದುಪಡಿಗಾಗಿ ಬಂದವರು ಆಗಿದ್ದು, ತಿದ್ದುಪಡಿ ವ್ಯವಸ್ಥೆ ಮಂಗಳೂರು ವನ್, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಮಾಡಲಾಗಿದ್ದರೂ ಜನ ಅಲ್ಲಿ ಹೋಗುತ್ತಿಲ್ಲ.

ಅಲ್ಲಿ ಟೋಕನ್ ಪಡೆದು, ಬಹಳ ದಿನ ಕಾಯಬೇಕೆಂಬ ಆತಂಕದಿಂದ ಇದೀಗ ಜನ ಇಲ್ಲಿ ಸೇರಿದ್ದಾರೆ. ಅವರಿಗೆಲ್ಲರಿಗೂ ಟೋಕನ್ ನೀಡುವ ವ್ಯವಸ್ತೆ ಮಾಡಲಾಗಿದೆ.
ಕಚೇರಿ ಅವಧಿ 10 ಗಂಟೆಗಾಗಿದ್ದರೂ, ಟೋಕನ್ ನೀಡುವುದಕ್ಕಾಗಿ ಬೆಳಿಗ್ಗೆ 9 ಗಂಟೆಯಿಂದ ವ್ಯವಸ್ಥೆ ಮಾಡಲಾಗಿತ್ತು. ದಿನವೊಂದಕ್ಕೆ ಕೇಂದ್ರವೊಂದರಲ್ಲಿ 30 ಮಂದಿಗೆ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶವಿದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದ ಗೌತಮ್ ಶೆಟ್ಟು, 'ಇವತ್ತು ಬೆಳಗ್ಗೆ 9:30 ರ ವೇಳೆಗೆ ಆಧಾರ್ ಕಚೇರಿಯಿರುವ ಪ್ರಥಮ ಅಂತಸ್ತಿನಿಂದ ಆರಂಭವಾದ ಜನರ ಸಾಲು ಜಿಲ್ಲಾಧಿಕಾರಿ ಕಚೇರಿಯ ಪ್ರವೇಶದ್ವಾರದ ಸ್ಥಳದವರೆಗೂ ತಲುಪಿತ್ತು.
ಒಂದು ಕಡೆ ಪಾನ್ಕಾರ್ಡ್, ಮೊಬೈಲ್ ಸಿಮ್ ಗೂ ಆಧಾರ್ ಕಡ್ಡಾಯವೆಂದು ಸಾರುತ್ತಲೇ ಇನ್ನೊಂದು ಕಡೆ ಅದಕ್ಕಾಗಿ ಜನರನ್ನು ಬಿಸಿಲು, ಮಳೆಯಲ್ಲಿ ನೆನೆಸಿ, ಕಾಯಿಸಿ ದುಡಿಮೆಗೂ ಕತ್ತರಿ ಹಾಕುವ ಕ್ರೌರ್ಯವೂ ನಡೆಯುತ್ತಿದೆ.
ಇದರ ಬದಲು ಇನ್ನಷ್ಟು ಆಧಾರ್ ಕೇಂದ್ರಗಳನ್ನು ತೆರೆಯಬಾರದೇ? ಎಂದು ಒನ್ ಇಂಡಿಯಾ ಕನ್ನಡಕ್ಕೆ ತಮ್ಮ ಅಳಲನ್ನು ಹಂಚಿಕೊಂಡರು.












Click it and Unblock the Notifications