ಮಂಗಳೂರಿನ ಆ ಉದ್ಯಮಿ ಕಾರಲ್ಲೇ ಅಮಿತ್ ಶಾ ಕರಾವಳಿ ಪ್ರವಾಸ ಮಾಡಿದ್ದೇಕೆ?
Recommended Video

ಮಂಗಳೂರು, ಫೆಬ್ರವರಿ 28: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗಾಗಿಯೇ ಅಭೇದ್ಯವಾದ ಕಾವಲಿದೆ. ಝೆಡ್ ಪ್ಲಸ್ ಸೆಕ್ಯೂರಿಟಿ ಇದೆ. ಅವರಿಗಾಗಿಯೇ ಬುಲೆಟ್ ಪ್ರೂಫ್ ಕಾರಿದೆ. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಅಂದರೆ, ಇವೆಲ್ಲವನ್ನೂ ಬಿಟ್ಟು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಬೇರೆ ಕಾರಿನಲ್ಲಿ ಅಮಿತ್ ಶಾ ಪ್ರಯಾಣ ಮಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸಂಘಟನಾತ್ಮಕವಾಗಿ ಭದ್ರ ಪಡಿಸುವ ದೃಷ್ಟಿಯಿಂದ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಝೆಡ್ ಫ್ಲಸ್ ಸೆಕ್ಯುರಿಟಿ ಇರುವ ಅಮಿತ್ ಶಾ ಸ್ಥಳೀಯ ಉದ್ಯಮಿಯೊಬ್ಬರ ಕಾರಿನಲ್ಲಿ ಜಿಲ್ಲೆಯಿಡೀ ಸುತ್ತಾಡಿದ್ದರು.
ಅಮಿತ್ ಶಾ ಅವರ ಸಂಚಾರಕ್ಕೆ ಬೆಂಗಳೂರಿನಿಂದ ಬುಲೆಟ್ ಪ್ರೂಫ್ ವಾಹನ ಕೂಡ ಜಿಲ್ಲೆಗೆ ಬಂದಿತ್ತು. ಆದರೆ ಅವೆಲ್ಲವನ್ನೂ ಬಿಟ್ಟ ಅಮಿತ್ ಶಾ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸದ ವೇಳೆ ಸ್ಥಳೀಯ ಉದ್ಯಮಿ ಮನೋಜ್ ಸರಿಪಳ್ಳ ಎಂಬುವವರ ರೇಂಜ್ ರೋವರ್ ವಾಹನದಲ್ಲೇ ಸುತ್ತಾಟ ನಡೆಸಿದ್ದಾರೆ.

ಬುಲೆಟ್ ಪ್ರೂಫ್ ಕಾರು ನಿರಾಕರಿಸಿದರು
ಕರಾವಳಿ ಜಿಲ್ಲೆಯ ಪ್ರವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆಬ್ರವರಿ 19ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಬುಲೆಟ್ ಪ್ರೂಫ್ ಕಾರಿನಲ್ಲೇ ಹೋಗುವಂತೆ ಮನವಿ ಮಾಡಿದರು. ಆದರೆ ಅದನ್ನು ತಿರಸ್ಕರಿಸಿದ ಅಮಿತ್ ಶಾ, ಮನೋಜ್ ಅವರ ರೇಂಜ್ ರೋವರ್ ಕಾರಿನಲ್ಲೇ ಸುಬ್ರಹ್ಮಣ್ಯಕ್ಕೆ ತೆರಳಿದ್ದರು.

ಮನೋಜ್ ಕಾ ರೇಂಜ್ ರೋವರ್ ಕಹಾಂ ಹೈ?
ಬೆಂಗಾವಲು ವಾಹನ, ಬುಲೆಟ್ ಪ್ರೂಫ್ ಕಾರು ಎಲ್ಲವೂ ಮನೋಜ್ ಅವರ ಕಾರನ್ನು ಹಿಂಬಾಲಿಸಿತು. ಅಲ್ಲದೆ ಸುಬ್ರಹ್ಮಣ್ಯಕ್ಕೆ ಮರುದಿನ ಬೆಂಗಳೂರಿನಿಂದ ಇನ್ನೊಂದು ಬುಲೆಟ್ ಪ್ರೂಫ್ ವಾಹನ ಬಂದಿತ್ತು. ಆದರೆ ಶಾ ಮಾತ್ರ, "ಮನೋಜ್ ಕಾ ರೇಂಜ್ ರೋವರ್ ಕಹಾಂ ಹೈ" ಎಂದು ಕೇಳಿ ಅದರಲ್ಲಿಯೇ ಹೊರಟಿದ್ದರು.

ಪ್ರಧಾನ ಮಂತ್ರಿ ಮೋದಿ ಜತೆ 45 ನಿಮಿಷ ಮಾತುಕತೆ
ಕಾರಿನಲ್ಲಿ ಪ್ರಯಾಣಿಸುವಾಗಲೇ ಪ್ರಧಾನ ಮಂತ್ರಿ ಮೋದಿ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಅಮಿತ್ ಶಾ ಫೋನ್ ನಲ್ಲಿ ಸಂಭಾಷಣೆ ನಡೆಸಿದ್ದರು. 2 ದಿನದ ಪ್ರವಾಸದ ವೇಳೆ ಕಾರಿನಲ್ಲಿ ಆಪ್ತರ ಜೊತೆ ರಾಜ್ಯ ರಾಜಕೀಯ ಹೊರತು ಬೇರೇನನ್ನೂ ಮಾತನಾಡಿಲ್ಲ ಎನ್ನುತ್ತಾರೆ ಮನೋಜ್.

ನಳಿನ್ ಕುಮಾರ್ ಕಟೀಲ್ ಮೂಲಕ ಮಾಹಿತಿ
ಅಮಿತ್ ಶಾ ಅವರು ನನ್ನ ಕಾರಿನಲ್ಲೇ ಪ್ರವಾಸ ಮಾಡಲು ಇಚ್ಛಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಮೂಲಕ ತಿಳಿದು ನನಗೆ ಶಾಕ್ ಆಯಿತು. 2 ದಿನದ ಪ್ರವಾಸದಲ್ಲಿ ನಾನೇ ಡ್ರೈವಿಂಗ್ ಮಾಡಿದೆ. ಅವರ ಸರಳತೆ, ಕಾರ್ಯತತ್ಪರತೆ, ರಾಜಕೀಯ ಮುತ್ಸದ್ದಿತನ ನಿಜಕ್ಕೂ ಅಚ್ಚರಿ ನೀಡಿತು ಎಂದು ಮನೋಜ್ ಕುಮಾರ್ ತಿಳಿಸಿದ್ದಾರೆ.

ಯಾರು ಈ ಮನೋಜ್ ಸರಿಪಳ್ಳ?
ಮನೋಜ್ ಸರಿಪಳ್ಳ ಮಂಗಳೂರಿನ ಯುವ ಉದ್ಯಮಿ. ಇಲ್ಲಿನ ಗರೋಡಿ ಸ್ಟೀಲ್ಸ್ ಮಾಲೀಕರು. ನಗರದಲ್ಲಿ ಸ್ಟೀಲ್ ಉದ್ಯಮವನ್ನು ನಡೆಸುತ್ತಿದ್ದಾರೆ. ಇವರಿಗೆ ಗುಜರಾತ್ ನಲ್ಲೂ ಪಾಲುದಾರರಿದ್ದಾರೆ. ಹೀಗಾಗಿ ಗುಜರಾತ್ ಉದ್ಯಮ ಸ್ನೇಹಿತರ ಮೂಲಕ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಮನೋಜ್ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಅಮಿತ್ ಶಾ ಮಂಗಳೂರಿಗೆ ಬಂದಾಗ ಭೇಟಿಯಾಗುವುದಾಗಿ ಭರವಸೆ ನೀಡಿದ್ದರು. ಆ ಮಾತಿನಂತೆಯೇ ಫೆಬ್ರವರಿ 19ರಂದು ಮಂಗಳೂರಿಗೆ ಅಮಿತ್ ಶಾ ಬಂದಾಗ ಮನೋಜ್ ಕಾರಿನಲ್ಲೇ ಸುತ್ತಾಡಿ ಮಾತು ಉಳಿಸಿಕೊಂಡಿದ್ದಾರೆ.












Click it and Unblock the Notifications