ಬಂಟ್ವಾಳ: 'ಇದು ಹಿಂದೂಗಳ ಮನೆ, ಕಾಂಗ್ರೆಸ್ಸಿಗರಿಗೆ ಪ್ರವೇಶವಿಲ್ಲ' ಪೋಸ್ಟರ್
ಬಂಟ್ವಾಳ(ದಕ್ಷಿಣ ಕನ್ನಡ), ಏಪ್ರಿಲ್ 25 : ಚುನಾವಣೆ ಸಂದರ್ಭದಲ್ಲಿ ದ್ವೇಷ ರಾಜಕಾರಣ, ಎದುರಾಳಿಗಳನ್ನು ಹಿಗ್ಗಾ ಮಗ್ಗಾ ಮಾತಿನ ಏಟಿನ ಮೂಲಕ ಮಣಿಸುವುದನ್ನು ನೋಡಿರಬಹುದು. ತಮ್ಮ ನೆಚ್ಚಿನ ಅಭ್ಯರ್ಥಿಯ ಪರ ಅಭಿಮಾನಿಗಳು ಕೂಡಾ ವಿವಿಧ ರೀತಿಯಲ್ಲಿ ಪ್ರಚಾರ ಕೈಗೊಳ್ಳುತ್ತಾರೆ. ಬಂಟ್ವಾಳದಲ್ಲಿ ಕಾಂಗ್ರೆಸ್ ವಿರುದ್ಧ ಸದ್ಯ ಅಭಿಯಾನ ಜೋರಾಗಿ ನಡೆದಿದೆ.
ಬಂಟ್ವಾಳದ ಕನ್ಯಾನ ಗ್ರಾಮದ ಅನೇಕರ ಮನೆಗಳಲ್ಲಿ 'ಇದು ಹಿಂದೂಗಳ ಮನೆ, ಕಾಂಗ್ರೆಸ್ಸಿಗರಿಗೆ ದೂರವಿರಿ' ಎಂಬ ಪೋಸ್ಟರ್ ಸಾಮಾನ್ಯವಾಗಿ ಕಂಡು ಬಂದಿದೆ.
ಇದು ಹಿಂದು ಮನೆ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದು, ಅದರ ಕೆಳಗಿನ ಸಾಲುಗಳಲ್ಲಿ 'ಗಣ್ಯಶ್ರೀಯನ್ನು ಕಪಟ ಪ್ರೇಮದಿಂದ ಮತಾಂತರ ಮಾಡಲು ಬೆಂಬಲಿಸಿದ ಕಾಂಗ್ರೆಸ್ಸಿಗರಿಗೆ ಇಲ್ಲಿ ಪ್ರವೇಶವಿಲ್ಲ. ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ.' ಎಂದು ಪೋಸ್ಟರ್ ನಲ್ಲಿ ಕಂಡು ಬಂದಿದೆ.

ಈ ಮೂಲಕ ಬಲವಂತದ ಮತಾಂತರ ಹಾಗೂ ಅದನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಗಣ್ಯಶ್ರೀ ಎಂಬ ಯುವತಿ, ಬೇರೋಬ್ಬ ಯುವಕನೊಂದಿಗೆ ಓಡಿ ಹೋಗಿ, ಮತಾಂತರಗೊಂಡು ಮದುವೆಯಾಗಿದ್ದರ ವಿರುದ್ಧ ಕನ್ಯಾನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುವ ಕಾಂಗ್ರೆಸ್, ಕರಾವಳಿಯಲ್ಲಿ ವಿಷಬೀಜ ಬಿತ್ತುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ ಸ್ಪರ್ಧಿಸುತ್ತಿದ್ದಾರೆ.












Click it and Unblock the Notifications