ಭಾರೀ ಚರ್ಚೆಗೆ ಕಾರಣವಾದ ಎಸ್ ಸಿ ಡಿಸಿಸಿ ಅಧ್ಯಕ್ಷರ ಸನ್ಮಾನ ಸಮಾರಂಭ
ಮಂಗಳೂರು, ಜನವರಿ 22: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರ ಸನ್ಮಾನ ಸಮಾರಂಭ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮದ ಪ್ರಯುಕ್ತ ಮಂಗಳೂರು ನಗರದಲ್ಲಿ ಎಲ್ಲಿ ನೋಡಿದರಲ್ಲಿ ಹಾಕಿದ ಬಂಟಿಂಗ್ಸ್ ಮತ್ತು ಬ್ಯಾನರ್, ಹೋರ್ಡಿಂಗ್ಸ್ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಈಗ ಕಾರ್ಯಕ್ರಮ ಸಂಘಟಕರ ವಿರುದ್ಧ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಗೆ ಸನ್ಮಾನ
ರಾಜ್ಯ ಸರ್ಕಾರ ಈಗಾಗಲೇ ರಾಜ್ಯದೆಲ್ಲೆಡೆ ಪ್ಲಾಸ್ಟಿಕ್ ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ನಿಷೇಧಿಸಿದೆ. ಆದರೆ ಇದನ್ನೆಲ್ಲ ಗಾಳಿಗೆ ತೂರಿ ಮಂಗಳೂರು ನಗರದೆಲ್ಲೆಡೆ ಬಂಟಿಗ್ಸ್ ಮತ್ತು ಬ್ಯಾನರ್ , ಹೋರ್ಡಿಂಗ್ಸ್ ಹಾಕಲಾಗಿತ್ತು . ಡಾ.ಎಮ್.ಎನ್ ರಾಜೇಂದ್ರ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ 25 ವರ್ಷಗಳ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶದ ಕಾರ್ಯಕ್ರಮವು ಜನವರಿ 19 ರಂದು ಆಯೋಜಿಸಲಾಗಿತ್ತು.
ನಗರದ ನೆಹರೂ ಮೈದಾನ ಹಾಗೂ ಫುಟ್ ಬಾಲ್ ಮೈದಾನನಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಜಂಕ್ಷನ್ ಗಳಲ್ಲಿ, ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಮತ್ತು ರಸ್ತೆ ವಿಭಜಕಗಳಲ್ಲಿ ಅನಧಿಕೃತ ಕಟೌಟ್ ಗಳನ್ನು ರಾಜರೋಷವಾಗಿ ಅಳವಡಿಸಲಾಗಿದೆ. ಈ ಬಗ್ಗೆ ತೀವ್ರ ಪ್ರತಿಭಟನೆ ನಡೆಸಿದ್ದ ಪರಿಸರವಾದಿಗಳು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಪರಿಸರ ಇಲಾಖೆಗಳಿಗೆ ದೂರನ್ನು ನೀಡಿದ್ದರು.
ಕಾರ್ಯಕ್ರಮಕ್ಕಾಗಿ ಅಳವಡಿಸಲಾದ ಬಂಟಿಗ್ಸ್ ಮತ್ತು ಬ್ಯಾನರ್, ಹೋರ್ಡಿಂಗ್ಸ್ ನಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದರಿಂದ ಕಾರ್ಯಕ್ರಮದ ಆಯೋಜಕರ ವಿರುದ್ಧ ಮಂಗಳೂರು ಮಹಾ ನಗರ ಪಾಲಿಕೆಯವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.