ಮಂಗಳೂರು ನಗರಕ್ಕೆ ಕಾದಿದೆ ಭಾರೀ ಗಂಡಾಂತರ: ಬೆಚ್ಚಿ ಬೀಳಿಸಿದೆ ಅಧ್ಯಯನ ವರದಿ
ಮಂಗಳೂರು, ಡಿಸೆಂಬರ್ 03: ಕಳೆದ ಬಾರಿ ಎಲ್ಲೆಡೆ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿ ನೀರಿಗೂ ಹಾಹಾಕಾರ ತಲೆದೋರಿತ್ತು. ಇದಕ್ಕೆ ಮೂಲ ಕಾರಣ ಅರಣ್ಯ ನಾಶ. ಮಂಗಳೂರಿನಲ್ಲೂ ಬಿಸಿಲ ಝಳ ಏರುತ್ತಿದೆ. ಆಮ್ಲಜನಕದ ಪ್ರಮಾಣ ಕುಗ್ಗುತ್ತಿದೆ. ಕಾಂಕ್ರೀಟ್ ನಗರವಾಗುತ್ತಿರುವ ಮಂಗಳೂರಿನಲ್ಲಿ ಮರಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಹಾಗಾದರೆ ಮಂಗಳೂರಿನಲ್ಲಿ ಎಷ್ಟು ಪ್ರಮಾಣದ ಅರಣ್ಯವಿದೆ ಗೊತ್ತಾ ? ಕೇಳಿದ್ರೆ ಅಚ್ಚರಿ ಗೊಳ್ಳುತ್ತೀರಾ.
ಮಂಗಳೂರು ನಗರದ ನಿಟ್ಟೆ ವಿವಿ ಸಹಕಾರದಲ್ಲಿ ಟ್ರೀ ಕೌಂಟ್ ಮಂಗಳೂರು ಎಂಬ ಅಧ್ಯಯನ ನಡೆಸಿದೆ. ನಿಟ್ಟೆ ವಿವಿ ನುಕ್ಸರ್ ರಿಸರ್ಚ್ ಸೆಂಟರ್ ಡೆಪ್ಯುಟಿ ಡೈರೆಕ್ಟರ್ ಡಾ. ಸ್ಮಿತಾ ಹೆಗ್ಡೆಯವರ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ನಗರದಲ್ಲಿ ಮರಗಳೆಷ್ಟಿವೆ ಎಂಬ ಲೆಕ್ಕಚಾರ ಮಾಡಲಾಯಿತು.

ಆಗ ಎದುರಾದ ಕಹಿ ಸತ್ಯವೇನೆಂದರೆ, ಮಂಗಳೂರು ಮನಪಾ ವ್ಯಾಪ್ತಿಯ ಒಟ್ಟು 60 ವಾರ್ಡ್ ಗಳ 50 ವಾರ್ಡ್ ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 6.24% ಮರಗಳಿವೆ. ಖಾಸಗಿ ಪ್ರದೇಶಗಳಲ್ಲಿ ಒಟ್ಟು 41.09ಶೇ. ಮರಗಳಿವೆ. ಈ ಮರಗಳಿಗೂ ದೀರ್ಘಾಕಾಲದ ಉಳಿಗಾಲವಿಲ್ಲ. ಹಾಗೇನಾದರೂ ಆದಲ್ಲಿ, ಮುಂದೆ ಮಂಗಳೂರಿನಲ್ಲಿ ಮರಗಳಿರುವುದು ಕೇವಲ 6.24% ಮಾತ್ರ. ಅಂತಹ ಪರಿಸ್ಥಿತಿ ಎದುರಾದಲ್ಲಿ, ಇಲ್ಲಿನ ಜನರ ದುಸ್ಥಿತಿ ಎಲ್ಲಿಗೆ ಮುಟ್ಟಬಹುದು..?
ನಗರದ ದೇರೆಬೈಲ್, ಡೊಂಗರಕೇರಿ, ಕದ್ರಿ ಕಂಬಳ ವಾರ್ಡ್ ನಲ್ಲಿ ಮರಗಳ ಸಂಖ್ಯೆ ತೀರಾ ಕಡಿಯಾಗಿದ್ದು, ಇಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ 3 ಶೇ. ತಾಪಮಾನ ಏರಿಕೆಯಾಗಿದೆ. ತಿರುವೈಲ್, ಬಜಾಲ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣದೆ ಸರ್ವೆ ಪ್ರಕಾರ ಇಲ್ಲಿ ತಾಪಮಾನ ಕಡಿಮೆಯಿದೆ. ಸತ್ಯ ಗೊತ್ತಿದ್ದೂ, ಇನ್ನೂ ನಿದ್ದೆಯಲ್ಲಿದ್ದರೆ ಕೆಲವೇ ವರ್ಷಗಳಲ್ಲಿ ಮಂಗಳೂರಿನ ಸ್ಥಿತಿ ದುರ್ಬರವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಮಂಗಳೂರು ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ಈಗಾಗಲೇ ಆರಂಭವಾಗಿದೆ. ನಗರದಲ್ಲಿ ಆಗಾಗ ಮಳೆಯಾದರೂ ಸಹ ಬಿಸಿಲಿನ ತಾಪಮಾನ ಹೆಚ್ಚುತ್ತಲೇ ಇದೆ. ಬೇಸಿಗೆಯ ರಣ ಬಿಸಿಲು ಆರಂಭವಾಗುವ ಮೊದಲೇ ಚಳಿಗಾಲದಲ್ಲಿಯೇ ಝಳ ಬಿಸಿಲಿಗೆ ಜನ ತತ್ತರಿಸಿದ್ದಾರೆ. ಇನ್ನು ಕಳೆದ ಬಾರಿಯ ಬೇಸಿಗೆ ನೋಡುವುದಾದರೆ, ಮಂಗಳೂರಿನಲ್ಲಿ ಮಾತ್ರವಲ್ಲ ದಕ್ಷಿಣ ಕನ್ನಡದ ಬಹುತೇಕ ನದಿಗಳು ಬತ್ತಿದ್ದವು. ಕುಡಿಯುವ ನೀರಿಗೆ ಜನ ಪರದಾಡಿದ್ದರು. ದೇವಾಲಗಳ ಸಮೀಪ ಹರಿಯುವ ನದಿಗಳು ಸಂಪೂರ್ಣ ಬತ್ತಿ, ಶಾಲಾ-ಕಾಲೇಜುಗಳಿಗೆ ರಜೆ ಕೂಡ ನೀಡಲಾಗಿತ್ತು.

ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದೇ ಈ ಅನಾಹುತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಮಂಗಳೂರಿನ ಜನರು ಈ ಎಚ್ಚರಿಕೆ ಗಂಟೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಆಗುತ್ತಿರುವ ಕಾಡು ನಾಶದ ಬಗ್ಗೆ ಜನ ಗಮನ ಹರಿಸಬೇಕಾಗಿದೆ. ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆಯಲ್ಲ, ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನಾವೇ ಕಾಡು ನಾಶದ ಭಯಂಕರ ಪರಿಣಾಮ ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿ ಸದ್ಯ ಮಂಗಳೂರಿನಲ್ಲಿ ನಿರ್ಮಾಣವಾಗಿದೆ.
ಜಿಲ್ಲಾಡಳಿತ, ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಾಗರಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕು. ಮರಗಳನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಕೈಜೋಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ಹತ್ತಿಪ್ಪತ್ತು ವರ್ಷಗಳಲ್ಲಿ ಮಂಗಳೂರು ಮಾನವ ವಾಸ ಯೋಗ್ಯವಲ್ಲದ ಪ್ರದೇಶವಾಗಿ ಘೋಷಿಸಲ್ಪಟ್ಟರೂ ಅಚ್ಚರಿಯಿಲ್ಲ.
ಮರಗಳಗಳ ರಕ್ಷಣೆಗೆ ಬಹಳಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ನಾಶ ಮಾಡುವ ಕೆಲಸ ಕೂಡ ಭರದಿಂದ ಸಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪರಿಸರ ಪ್ರೇಮಿಗಳು ಮರಗಳ ಉಳಿವಿಗೆ ಹರಸಾಹಸ ಪಡುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದ್ಯಾವುದೂ ಲೆಕ್ಕಕ್ಕೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿ ಮಂಗಳೂರಿನ ಜನರು ಇಂದಿನಿಂದಲೇ ಎಚ್ಚೆತ್ತುಕೊಂಡು ಮರಗಳ ಸಂರಕ್ಷಣೆಗೆ ಮುಂದಾಗಬೇಕಿದೆ. ಮನೆಗೊಂದು ಮರ ಊರಿಗೊಂದು ವನ ಸದ್ಯ ಮಂಗಳೂರಿಗೆ ಅಗತ್ಯವಿದೆ.












Click it and Unblock the Notifications