ರೇಬಿಸ್ ಸೋಂಕು ಹಿನ್ನೆಲೆ ಇಚ್ಲಂಪಾಡಿಗೆ ಭೇಟಿ ನೀಡಿದ ತಜ್ಞ ವೈದ್ಯರ ತಂಡ
ಮಂಗಳೂರು, ಸೆಪ್ಟೆಂಬರ್. 05: ರೇಬಿಸ್ ಸೋಂಕು ತಗಲಿ ಸಾವಿಗೀಡಾದ ಯುವಕನ ಊರಿನಲ್ಲಿ ಆತಂಕ ಮನೆ ಮಾಡಿದೆ. ಪುತ್ತೂರು ತಾಲೂಕಿನ ಇಚ್ಲಂಪಾಡಿ ಗ್ರಾಮದ 200ಕ್ಕೂ ಅಧಿಕ ಗ್ರಾಮಸ್ಥರು ಇದೀಗ ಆಂಟಿ ರೇಬೀಸ್ ಚುಚ್ಚುಮದ್ದು ಪಡೆದಿದ್ದಾರೆ. ಸೋಮವಾರದಿಂದ ಗ್ರಾಮಸ್ಥರು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚುಚ್ಚುಮದ್ದು ಪಡೆಯುತ್ತಿರುವುದು ಮುಂದುವರೆದಿದೆ.
ಇಚ್ಲಂಪಾಡಿ ಗ್ರಾಮಕ್ಕೆ ಇಂದು ಮಂಗಳವಾರ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ವೈದ್ಯಕೀಯ ತಜ್ಞರ ತಂಡ ನೆಲ್ಯಾಡಿ ಸರಕಾರಿ ಆಸ್ಪತ್ರೆ ಹಾಗೂ ಮೃತ ಯುವಕನ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರ ತಂಡ ತಿಳಿಸಿದೆ.
ತಜ್ಞರ ತಂಡ ಇಚ್ಲಂಪಾಡಿಯ ಮೃತ ಯುವಕನ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿರುವುದಲ್ಲದೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜನರಲ್ಲಿ ಧೈರ್ಯ ತುಂಬಿದ್ದಾರೆ. ಈ ನಡುವೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಆರೋಗ್ಯಾಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಎನ್ನುವ ಒತ್ತಾಯವೂ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಮೃತಪಟ್ಟಿರುವ ಯುವಕ ಆಶಿತ್ , ರೇಬಿಸ್ ಸೋಂಕಿನಿಂದಲೇ ಮೃತಪಟ್ಟಿದ್ದಾರೆಯೇ ಎನ್ನುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲೂ ಗೊಂದಲವಿದೆ. ಯುವಕನಿಗೆ ಚಿಕಿತ್ಸೆ ಕೊಟ್ಟ ಖಾಸಗಿ ಆಸ್ಪತ್ರೆಗೂ ತೆರಳಿ ಪರಿಶೀಲನೆ ನಡೆಸಲೂ ವೈದ್ಯರ ತಂಡ ನಿರ್ಧರಿಸಿದೆ.
ಈ ವಿಚಾರದಲ್ಲಿ ತಪ್ಪಾಗಿದ್ದರೆ ಆ ಖಾಸಗಿ ಆಸ್ಪತ್ರೆ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ, ಗ್ರಾಮಸ್ಥರ ಒತ್ತಾಯ ಕೂಡ ಆಗಿದೆ.

ಆರು ದಿನಗಳ ಹಿಂದೆ ಇಚ್ಲಂಪಾಡಿಯ ನಿವಾಸಿ ಆನಂದ ಪೂಜಾರಿ ಎಂಬುವವರ ಪುತ್ರ ಆಶಿತ್ ಪೂಜಾರಿ(24) ಹಠಾತ್ ಅನಾರೋಗ್ಯಕ್ಕೀಡಾಗಿ ಆಗಸ್ಟ್ 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆಶಿತ್ ರೇಬಿಸ್ ವೈರಾಣುವಿನಿಂದ ಮೃತಪಟ್ಟಿರುವ ಬಗ್ಗೆ ಆಸ್ಪತ್ರೆಯ ವೈದ್ಯರು ಮನೆಯವರಿಗೆ ತಿಳಿಸಿ ಮೃತದೇಹವನ್ನು ಪ್ಯಾಕ್ ಮಾಡಿಕೊಟ್ಟಿದ್ದು, ಮನೆಯಲ್ಲಿ ಮೃತದೇಹಕ್ಕೆ ನೀರು ಬಿಟ್ಟು ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ಯುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಆದರೆ ಮನೆಯವರು ಸಹಜವಾಗಿಯೇ ಅಂತ್ಯಕ್ರಿಯೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಊರವರು ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಮಂದಿ ಮೃತರ ಅಂತಿಮ ದರ್ಶನಗೈದಿದ್ದರು. ನಂತರ ಆಶಿತ್ ರೇಬಿಸ್ ವೈರಾಣುವಿನಿಂದ ಮೃತಪಟ್ಟಿರುವುದಾಗಿ ಮಂಗಳೂರಿನ ಆಸ್ಪತ್ರೆ ವರದಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮದ ನೂರಾರು ಮಂದಿ ಆತಂಕಗೊಂಡಿದ್ದರು.












Click it and Unblock the Notifications