ಸರ್ಕಾರಿ ಶಾಲೆಯಲ್ಲಿ ಸನಾತನ ಧರ್ಮ ಬೋಧನೆ, ಪೋಷಕರ ಆಕ್ರೋಶ
ಮಂಗಳೂರು, ಸೆಪ್ಟೆಂಬರ್ 12 : ಇಲ್ಲಿನ ಬೆಳ್ತಂಗಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಧಿಕೃತವಾಗಿ ಸನಾತನ ಧರ್ಮ ಬೋಧನೆ ಮಾಡುತ್ತಿರುವ ಬಗ್ಗೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸನಾತನ ಬೋಧನೆಯನ್ನು ಅನ್ಯ ಜಾತಿಯ ಮಕ್ಕಳಿಗೆ ಬೋಧನೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಶಾಲೆಯ ಎಲ್ಲ ಮಕ್ಕಳಿಗೂ ಸನಾತನ ಸಂಸ್ಥೆಯ ಹೆಸರಿರುವ ಪ್ರಶ್ನೆ ಪತ್ರಿಕೆಯನ್ನು ನೀಡಿ ಪರೀಕ್ಷೆ ಕೂಡ ನಡೆಸಿದ್ದಾರೆ. ಈ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮಕ್ಕಳು ಮನೆಗೆ ತಂದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳಿಗೂ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಇದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪೋಷಕರ ಅನುಮತಿಯನ್ನು ಪಡೆಯದೆ ಮಕ್ಕಳಲ್ಲಿ ಮತೀಯ ಭಾವನೆ ಬೆಳೆಸಲು ಕಾನೂನುಬಾಹಿರವಾಗಿ ಸನಾತನ ಸಂಸ್ಥೆ ಇಂತಹ ಕಾರ್ಯ ಮಾಡುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ನೀಡಿದ್ದಾರೆ.
ಮಕ್ಕಳಿಗೆ ನೀಡಿರುವ ಪ್ರಶ್ನೆಪತ್ರಿಕೆಯಲ್ಲಿ ನವರಾತ್ರೋತ್ಸವ ಪ್ರಶ್ನೆ ಮಾಲೆ ಎಂದು ಬರೆಯಲಾಗಿದ್ದು, ಪ್ರಕಾಶಕರು ಸನಾತನ ಸಂಸ್ಥೆ ಎಂದೂ ಮುದ್ರಿತವಾಗಿದೆ. ಕೊನೆಯ ಪುಟದಲ್ಲಿ ಸನಾತನ ಪ್ರಭಾತ ಪತ್ರಿಕೆಯ ಜಾಹೀರಾತೂ ಹಾಕಲಾಗಿದೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿರುವ ಶಿಕ್ಷಣಾಧಿಕಾರಿ, ಈ ಬಗ್ಗೆ ನಮಗೆ ಯಾವುದೇ ಅರಿವು ಇರಲಿಲ್ಲ ಆದರೆ ಮಕ್ಕಳ ಪೋಷಕರು ನಮ್ಮಲ್ಲಿ ಬಂದು ದೂರು ಕೊಟ್ಟಾಗ ಮಾತ್ರ ಈ ವಿಷಯ ನಮಗೆ ತಿಳಿದು ಬಂದಿದೆ.
ದೂರನ್ನು ಪರಿಶೀಲಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದು ಸೂಕ್ತವಾದ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications