Surathkal Toll : ಕೇಂದ್ರದಿಂದ ಅಧಿಸೂಚನೆ ಬಂದ ಕೂಡಲೇ ಸುರತ್ಕಲ್ ಟೋಲ್ ತೆರವು: ದ.ಕ ಜಿಲ್ಲಾಧಿಕಾರಿ
ಮಂಗಳೂರು ನವೆಂಬರ್12: ಕೇಂದ್ರ ಸರಕಾರದಿಂದ ಸೂಚನೆ ಬಂದ ತಕ್ಷಣ ಸುರತ್ಕಲ್ ಟೋಲ್ ತೆರವು ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೇಳಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯಕ್ಕೆ ಕೇಂದ್ರ ಸರಕಾರ ಶೀಘ್ರದಲ್ಲೇ ಅಧಿಸೂಚನೆ ಮಾಡುವ ಹಂತದಲ್ಲಿದೆ. ಈ ಸೂಚನೆ ಬಂದ ತಕ್ಷಣ ಟೋಲ್ ಗೇಟ್ ತೆರವು ಆಗಲಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುರತ್ಕಲ್ ಟೋಲ್ ಗೇಟ್ ತೆರವಿಗೆ ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರಕಾರದ ನೋಟಿಫಿಕೇಷನ್ ಬಂದ ತಕ್ಷಣ ಟೋಲ್ ಗೇಟ್ ತೆರವು ಆಗಲಿದೆ. ಆದರೆ ತೆರವಿನ ನಿರ್ಧಿಷ್ಟ ದಿನಾಂಕದ ಬಗ್ಗೆ ಈಗಲೇ ಹೇಳಲು ಅಸಾಧ್ಯ ಎಂದು ಹೇಳಿದ್ದಾರೆ.
ಮರಳುಗಾರಿಕೆಗೆ ತುರ್ತಾಗಿ ಪರವಾನಿಗೆ ಸಿಗುವ ಸಾಧ್ಯತೆ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಚಾರಗಳ ಬಗ್ಗೆ ಕಳೆದ ಮೂರು ದಿನಗಳಿಂದ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಆರು ಸದನ ಸಮಿತಿಯ ಸಭೆ ನಡೆದಿತ್ತು. ಇದರಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣದ ಚರ್ಚೆಯೂ ನಡೆದಿದೆ. ಕರಾವಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಮರಳುಗಾರಿಕೆ ಮಾಡುವವರು ತಾತ್ಕಾಲಿಕ ಪರವಾನಿಗೆ ಇಟ್ಟುಕೊಂಡು ಮರಳುಗಾರಿಕೆ ಮಾಡುತ್ತಿದ್ದಾರೆ. ಆದರೆ ಚೆನ್ನೈ ಹಸಿರು ನ್ಯಾಯಾಧೀಕರಣ ಪೀಠದ ಆದೇಶದಿಂದ ಒಂದೇ ಸಿಆರ್ ಝಡ್ ಝೋನ್ನಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿದ್ದುದು ಸ್ಥಗಿತಗೊಂಡಿತು. ಈ ಆದೇಶದ ವಿರುದ್ಧ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದವರು ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್, ಎನ್ಜಿಟಿಯನ್ವಯ ಅವರಿಗೆ ತುರ್ತಾಗಿ ಪರವಾನಿಗೆ ನೀಡಬೇಕೆಂದು ಆದೇಶಿಸಿದೆ. ಈ ಬಗ್ಗೆ ಸೋಮವಾರ ತಾನು ಸಭೆ ಕರೆಯಲಿದ್ದೇನೆ ಎಂದು ರವಿಕುಮಾರ್ ಎಂ.ಆರ್ ಹೇಳಿದ್ದಾರೆ.
ದೈವಗಳು ಅಭಯ ನೀಡುತ್ತವೆ, ಕೊಲ್ಲುವುದಿಲ್ಲ: ಕಾಂತಾರ ಸ್ಥಗಿತಕ್ಕೆ ದಲಿತ ಸಮುದಾಯ ಆಗ್ರಹ
ಮತದಾರರ ಸಂಖ್ಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಡಿ.ಸಿ
ಇನ್ನು ದ.ಕ.ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದ್ದು, ಮತದಾರರ ಪಟ್ಟಿಯಲ್ಲಿ ಮಹಿಳೆಯರ ಸಂಖ್ಯೆ ಮೇಲುಗೈ ಸಾಧಿಸಿದೆ. 2011ರ ಜನಗಣತಿಯನುಸಾರ ಲಿಂಗಾನುಪಾತ 1020 ಇದ್ದು, ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ 1040 ಆಗಿರುತ್ತದೆ ಎಂದು ಮಾಹಿತಿ ನೀಡಿದರು.
2023ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕಟವಾಗಿದ್ದು, ಅದರಂತೆ ದ.ಕ.ಜಿಲ್ಲೆಯಲ್ಲಿ 17,08,955 ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 8,37,527 ಪುರುಷ ಮತದಾರರು, 8,71,364 ಮಹಿಳಾ ಮತದಾರರಾಗಿದ್ದಾರೆ. ಡಿಸೆಂಬರ್ 8ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಮಯವಿದ್ದು, ಆಕ್ಷೇಪಗಳಿದ್ದಲ್ಲಿ ಸ್ವೀಕರಿಸಲಾಗುತ್ತದೆ ಎಂದು ಹೇಳಿದರು.
ಜನವರಿ 3ರಂದು ಮತದಾರರ ಅಂತಿಮ ಪಟ್ಟಿ ಪ್ರಕಟ
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಿಶೇಷ ನೋಂದಣಿ ಅಭಿಯಾನ ನ.12, ನ.20, ಡಿ.3 ಹಾಗೂ ಡಿ.4ರಂದು ನಡೆಯಲಿದೆ. 2023ರ ಜನವರಿ 3ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈಗಾಗಲೇ ಪ್ರಕಟವಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ತೆಗೆದು ಹಾಕಿರುವ ಹಾಗೂ ಸೇರ್ಪಡೆಗೊಂಡಿರುವ ಹೆಸರುಗಳ ಬದಲಾವಣೆಗಳ ಬಗ್ಗೆ ಮತದಾರರು ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು. ಈ ಬಗ್ಗೆ ನಾಗರಿಕರು ತಮ್ಮ ವ್ಯಾಪ್ತಿಯ ಮತದಾರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಬಹುದು. ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು. ಅಲ್ಲದೆ ವೆಬ್ಪೋರ್ಟಲ್ ceokarnataka.kar.nic.in , nvsp.in , dk.nic.in ಅಥವಾ ಜಿಲ್ಲಾ ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಟೋಲ್
ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ಸದ್ಯಕ್ಕೆ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. 60 ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್ ಅಂತರದಲ್ಲಿ 4 ಟೋಲ್ಗೇಟ್ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ನ ಎನ್.ಐ.ಟಿ.ಕೆ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಟೋಲ್ ಗೇಟ್, ಹೆಜಮಾಡಿ ಟೋಲ್ ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ಆದರೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್ ಗೇಟ್ ಇನ್ನೂ ಕೂಡಾ ಕಾರ್ಯಾಚರಿಸುತ್ತಿರುವುದು, ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.