ಮಂಗಳೂರಿನಲ್ಲಿ ತೆಂಗಿನ ಮರದೆತ್ತರಕ್ಕೇರಿದ ಎಳನೀರು ಬೆಲೆ!
ಮಂಗಳೂರಿನಲ್ಲಿ ಆರೋಗ್ಯಕರ ಪಾನೀಯ ಎಳನೀರಿನ ಬೆಲೆ ತೆಂಗಿನ ಮರದಷ್ಟೇ ಎತ್ತರಕ್ಕೇರಿರುವುದರಿಂದ ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.
ಮಂಗಳೂರು, ಎಪ್ರಿಲ್ 6: ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಬಾಯಾರಿಕೆಯೂ ಜೋರಾಗುತ್ತಿದೆ. ಕರಾವಳಿಯಲ್ಲಿ ಹನ್ನೊಂದು ಘಂಟೆಯಾದರೆ ಸಾಕು, ಬಿಸಿಲ ನರ್ತನ ಶುರುವಾಗುತ್ತದೆ. ಅಬ್ಬಬ್ಬಾ...ಬಿಸಿಲಿನ ತಾಪದಿಂದ ಕಾಪಾಡು ದೇವ ಎನ್ನುವವರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಜ್ಯೂಸ್ ಸೆಂಟರ್ ಗಳ ಮಾಲೀಕರಿಗೆ ಭರ್ಜರಿ ವ್ಯಾಪಾರ.
ಆದರೆ ಆರೋಗ್ಯಕರ ಪಾನೀಯ ಎಳನೀರಿನ ಬೆಲೆ ಮಾತ್ರ ತೆಂಗಿನ ಮರದಷ್ಟೇ ಎತ್ತರಕ್ಕೇರಿರುವುದರಿಂದ ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಕರಾವಳಿ ಪ್ರದೇಶದಲ್ಲಿ ಎಳನೀರಿಗೆ ಹೆಚ್ಚು ಬೇಡಿಕೆಯಿದ್ದು, ಈ ವರ್ಷ ಎಳನೀರಿನ ಬೆಳೆ ಕಡಿಮೆಯಿರುವುದರಿಂದ ಮಾರಾಟಗಾರರು ಗ್ರಾಹಕರಿಂದ ಬೇಕಾಬಿಟ್ಟಿ ಹಣ ಕೀಳುತ್ತಿದ್ದಾರೆ.[ಮಲ್ಟಿಪ್ಲೆಕ್ಸ್ ನಲ್ಲಿ ಎಳೆನೀರು ಮಾರಾಟಕ್ಕೆ ಬಿಜೆಪಿ ಆಗ್ರಹ]

ಚಿಕ್ಕದಾದರೆ 20 ರಿಂದ 25 ರೂಪಾಯಿ, ದೊಡ್ಡದಾದರೆ 30 ರಿಂದ 35 ರೂಪಾಯಿ! ಕೇರಳ ಹಾಗೂ ಮಂಗಳೂರಿನ ಸುತ್ತಮುತ್ತ ಹೆಚ್ಚಾಗಿ ಬೆಳೆಯುತ್ತಿದ್ದ ತೆಂಗು ಬೆಳೆ, ಇಂದು ನುಸಿಪೀಡೆ ರೋಗದಿಂದಾಗಿ ಕುಂಠಿತವಾಗಿದೆ. ಬೆಲೆ ಏರಿಕೆಗೂ ಇದೇ ಕಾರಣವೆನ್ನಲಾಗಿದೆ.
ಎಳನೀರಿನ ಬೇಡಿಕೆ ಹೆಚ್ಚಿರುವುದರಿಂದ ಈಗೀಗ ರಾಮನಗರ, ಚನ್ನಪಟ್ಟಣ, ಹಾಸನ, ಸಕಲೇಶಪುರದಿಂದ ಮಂಗಳೂರಿಗೆ ಎಳನೀರು ತರಿಸಲಾಗುತ್ತಿದೆ. ಆದರೂ ಬೇಡಿಕೆಗನುಗುಣವಾಗಿ ಎಳನೀರು ಪೂರೈಸಲು ಸಾಧ್ಯವಾಗುತ್ತಿಲ್ಲ
"ದರ ಏರಿಕೆಯಿಂದ ಎಳನೀರು ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಜೊತೆಗೆ ಬಿಸಿಲಿನ ಧಗೆಯಿಂದಾಗಿ ಬೇಡಿಕೆಯೂ ಹೆಚ್ಚಿದೆ. ತಾಪಮಾನ ಹೆಚ್ಚಾದರೆ ತೆಂಗಿನ ಫಸಲು ಹಾಳಾಗುತ್ತದೆ. ಬರಗಾಲದ ಜೊತೆಗೆ ಎಳನೀರಿಗೂ ಕರಾವಳಿಯಲ್ಲಿ ' ಬರ' ಬಂದಿದೆ" ಎನ್ನುತ್ತಾರೆ ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೀಶ್ ಕುಮಾರ್.












Click it and Unblock the Notifications