ಸುಬ್ರಹ್ಮಣ್ಯದಲ್ಲಿ ಪೊಲೀಸರ ಅಮಾನವೀಯ ವರ್ತನೆ: ಅಮಾನತು
ಮಂಗಳೂರು, ಜನವರಿ 3 : ಸುಬ್ರಹ್ಮಣ್ಯ ದಲ್ಲಿ ಅನ್ಯಕೋಮಿನ ಯುವಕ ಹಾಗು ಯುವತಿಯ ಮೇಲೆ ಹಲ್ಲೆನಡೆಸಿದ ಆರೋಪದಡಿ ಸುಬ್ರಹ್ಮಣ್ಯ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಸುಬ್ರಹ್ಮಣ್ಯಕ್ಕೆ ಅನ್ಯಕೋಮಿನ ಯುವಕರ ಜೊತೆಗೆ ಆಗಮಿಸಿದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಅರೋಪಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.
ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 20 ರಂದು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಯುವತಿ ಹಾಗೂ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಸುಬ್ರಹ್ಮಣ್ಯ ಠಾಣೆಯ ಪೋಲೀಸರಿಗೆ ಒಪ್ಪಿಸಿದ್ದರು.

ಪೋಲೀಸರು ತಮ್ಮ ಮೇಲೆ ವಿನಾಕಾರಣ ಅಮಾನವೀಯ ವಾಗಿ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಳು. ಪೊಲೀಸರು ತನಗೆ ಹಾಗು ತನ್ನ ಜೊತೆಯಿದ್ದ ಮುಸ್ಲಿಂ ಯುವಕರಿಗೆ ಮುಸ್ಲಿಂ ಎನ್ನುವ ಕಾರಣಕ್ಕೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೇಳಿಕೆಯನ್ನು ಹರಿಬಿಟ್ಟಿದ್ದಳು.
ಡಿಸೆಂಬರ್ 20 ರಂದು ತಮಿಳು ಚಿತ್ರ ನಟಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಯುವತಿ ಹಾಗೂ ಇಬ್ಬರು ಯುವಕರು ಸುಬ್ರಹ್ಮಣ್ಯ ಪರಿಸರದಲ್ಲಿ ಅಸಹ್ಯವಾಗಿ ವ್ಯವಹರಿಸುತ್ತಿದ್ದರು ಎಂದು ಹೇಳಲಾಗಿತ್ತು. ಯುವತಿ ಹಾಗು ಯುವಕರ ಅಸಭ್ಯವರ್ತನೆ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಕಾರಣ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪೊಲೀಸರು ಯುವತಿ ಹಾಗು ಯುವಕರನ್ನು ವಶಕ್ಕೆ ಪಡೆಯಲು ಮುಂದಾಗಿದ್ದ ಸಂದರ್ಭದಲ್ಲಿ ಒರ್ವ ಯುವಕ ಪರಾರಿಯಾಗಿದ್ದ.

ತಮ್ಮ ಕೈಗೆ ಸಿಕ್ಕಿದ ಇಬ್ಬರನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪೋಲೀಸರ ವಶಕ್ಕೆ ನೀಡಿದ್ದರು. ಸುಬ್ರಹ್ಮಣ್ಯ ಪೋಲೀಸರು ವಿಚಾರಣೆ ನಡೆಸಿ ಬಳಿಕ ಬಿಡುಗಡೆಗೊಳಿಸಿದ್ದರು.ಆದರೆ ಯುವತಿ ತನ್ನ ಹಾಗೂ ತನ್ನ ಜೊತೆಗಿದ್ದ ಯುವಕನ ಮೇಲೆ ಪೋಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರಕರಣಕ್ಕೆ ತಿರುವು ನೀಡಿದ್ದಳು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಸುದೀರ್ ಕುಮಾರ್ ರೆಡ್ಡಿ ತನಿಖೆ ನಡೆಸಿ ಈಗ ಇಬ್ಬರು ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್ ಮತ್ತು ಸಂಧ್ಯಾ ಕುಮಾರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications