ಉಕ್ರೇನ್ to ಇಂಡಿಯಾ: ಮನೆಗೂ ಹೋಗದೆ ನೇರ ಡಿಸಿ ಕಚೇರಿಗೆ ಬಂದು ಧನ್ಯವಾದ ಹೇಳಿದ ವಿದ್ಯಾರ್ಥಿಗಳು
ಮಂಗಳೂರು, ಮಾರ್ಚ್ 7: ರಷ್ಯಾದಿಂದ ಯುದ್ಧ ಪೀಡಿತಕ್ಕೆ ಒಳಗಾಗಿರುವ ಉಕ್ರೇನ್ನಿಂದ ಮಂಗಳೂರಿಗೆ ಮತ್ತೆ ಐವರು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳೂರಿನ ದೇರೆಬೈಲ್ನ ಅನೈನಾ ಅನ್ನ, ಮೂಡುಬಿದ್ರೆಯ ಶಲ್ವಿನ್ ಪ್ರೀತಿ ಅರನಾ, ಪಡೀಲ್ನ ಕ್ಲೇಟನ್ ಡಿಸೋಜಾ, ಸಾದ್ ಹರ್ಷದ್ ಅಹ್ಮದ್ ಆಗಮಿಸಿದ್ದಾರೆ.
ಇನ್ನು ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ದೇರಳಕಟ್ಟೆ ನಿವಾಸಿ ಲಕ್ಷಿತಾ ಪುರುಷೋತ್ತಮ್ ಆಗಮಿಸಿದ್ದಾರೆ. ಉಕ್ರೇನ್ನ ಕೀವ್ ಹಾಗೂ ಖಾರ್ಕೀವ್ ಭಾಗದಲ್ಲಿ ವಾಸ್ತವ್ಯವಿದ್ದ ಮಂಗಳೂರಿನ ವಿದ್ಯಾರ್ಥಿಗಳು ಯುದ್ಧ ಸಂದರ್ಭದಲ್ಲಿ ಬಂಕರ್ನಲ್ಲಿ ವಾಸ್ತವ್ಯವಾಗಿದ್ದರು.
ಮೋದಿಗೆ ಧನ್ಯವಾದ ಹೇಳಿದ ಉಕ್ರೇನ್ನಿಂದ ಮರಳಿದ ಹೀನಾ ಫಾತಿಮಾ
ರಷ್ಯಾ ಮತ್ತು ಉಕ್ರೇನ್ನ ಯುದ್ಧ ಸಂದರ್ಭದಲ್ಲಿ ಮಕ್ಕಳು ಉಕ್ರೇನ್ನಲ್ಲಿದ್ದರೂ ಪೋಷಕರು ಆತಂಕಗೊಳ್ಳದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಧೈರ್ಯ ತುಂಬಿದ್ದರು. ಮಕ್ಕಳ ಪೋಷಕರ ವಾಟ್ಸಪ್ ಗುಂಪು ರಚಿಸಿ ಪ್ರತಿದಿನ ಮಕ್ಕಳ ಬಗ್ಗೆ ಅಪ್ಡೇಟ್ ನೀಡುತ್ತಿದ್ದು, ಪ್ರತಿ ಹಂತದ ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದರು. ಇದರಿಂದ ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ಪೋಷಕರೂ ನಿಶ್ಚಿಂತೆಯಿದ್ದರು.
ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಹೆತ್ತವರು ವಿಮಾನ ನಿಲ್ದಾಣದಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಉಕ್ರೇನ್ನಿಂದ ಮಂಗಳೂರಿಗೆ ಬಂದು ಜಿಲ್ಲಾಧಿಕಾರಿ ಭೇಟಿ ಮಾಡಿದ ವಿದ್ಯಾರ್ಥಿಗಳು, ಮನೆಗೆ ಹೋಗದೇ ವಿಮಾನ ನಿಲ್ದಾಣದಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಧನ್ಯವಾದ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರಿಗೆ ಬೊಕ್ಕೆ ಕೊಟ್ಟು, ಕೇಕ್ ಕತ್ತರಿಸಿ ವಿದ್ಯಾರ್ಥಿಗಳು ಸಂಭ್ರಮ ಹಂಚಿಕೊಂಡಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳ ಜೊತೆ ಅಲ್ಲಿನ ಅನುಭವ ಹಂಚಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಶ್ರಮ, ಕೆಲಸವನ್ನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಹೆತ್ತವರು ಶ್ಲಾಘಿಸಿದ್ದಾರೆ.
ಯುದ್ಧ ನಡೆಯುವ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಕೆಲ ಸಮಯದ ಹಿಂದೆ ಸೂಚನೆ ನೀಡಿತ್ತು. ಆದರೆ ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿತ್ತು. ಯುದ್ಧ ಗಂಭೀರ ಸ್ಥಿತಿ ಪಡೆಯುವರೆಗೂ ತರಗತಿಗಳು ನಡೆಯುತ್ತಿದ್ದವು. ಹೀಗಾಗಿ ಯುದ್ಧ ಆರಂಭವಾಗುವ ಮುನ್ನವೇ ಭಾರತಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಯುದ್ಧ ಗಂಭೀರತೆ ಪಡೆಯುವ ಸಂದರ್ಭದಲ್ಲಿ ಎಲ್ಲರನ್ನೂ ಹಾಸ್ಟೆಲ್ಗಳಿಂದ ಬಂಕರ್ಗಳಿಗೆ ಶಿಫ್ಟ್ ಮಾಡಲಾಯಿತು. ಬಂಕರ್ನಲ್ಲಿ ಸಾಕಷ್ಟು ಆಹಾರದ ಸಮಸ್ಯೆ ಎದುರಾಯಿತು. ಗಡಿ ತಲುಪುವರೆಗೂ ಸಾಕಷ್ಟು ಕಷ್ಟ ಅನುಭವಿಸಿದೆವು, ಆದರೆ ಗಡಿ ದಾಟಿದ ಬಳಿಕ ಭಾರತೀಯ ರಾಯಭಾರಿ ಕಚೇರಿ ಸ್ವಂತ ಮನೆಯವರ ರೀತಿ ನೋಡಿಕೊಂಡರು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಇನ್ನು ಮಂಗಳೂರು ದೇರಳಕಟ್ಟೆ ನಿವಾಸಿ ಲಕ್ಷಿತಾ ಪುರುಶೋತ್ತಮ್, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ರಸ್ತೆ ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ. ವಿಶೇಷವಾಗಿ ಉಕ್ರೇನ್ನಲ್ಲಿ ತಾನು ಸಾಕಿದ ಬೆಕ್ಕನ್ನು ಲಕ್ಷಿತಾ ಕರೆ ತಂದಿದ್ದಾರೆ. ಲೀಸಾ ಹೆಸರಿನ ಬೆಕ್ಕು ಇದಾಗಿದ್ದು, ಲಕ್ಷಿತಾ ಉಕ್ರೇನ್ನಲ್ಲಿ ಈ ಬೆಕ್ಕುನ್ನು ದತ್ತು ಪಡೆದು ಸಾಕಿದ್ದರು.
ಬೆಕ್ಕಿಗೂ ಅಲ್ಲಿ ಊಟವನ್ನು ಸ್ಟಾಕ್ ಮಾಡಿಟ್ಟಿದ್ದರು. ತಾನು ತಂದ ಬೆಕ್ಕಿನೊಂದಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು ಭೇಟಿ ಮಾಡಲು ಬಂದ ಲಕ್ಷಿತಾ, ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸೋಮವಾರ ಒಂದೇ ದಿನ ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಲ್ವರು, ಬೆಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಓರ್ವ ವಿದ್ಯಾರ್ಥಿನಿ ಮಂಗಳೂರಿಗೆ ಆಗಮಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 18 ಮಂದಿ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದರು.