ಪ್ರತಿಭಟನೆ ಹತ್ತಿಕ್ಕಲು ದ.ಕನ್ನಡದಲ್ಲಿ 48 ಗಂಟೆ ಇಂಟರ್ನೆಟ್ ಬಂದ್
ಮಂಗಳೂರು, ಡಿಸೆಂಬರ್ 19: ಪೌರತ್ವ ಕಾಯ್ದೆ ಹಾಗೂ ಎನ್ಆರ್ಸಿ ವಿರುದ್ಧ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹೆಚ್ಚಾಗದಂತೆ ತಡೆಯಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ನಲವತ್ತೆಂಟು ಗಂಟೆಗಳ ಕಾಲ ಅಂತರ್ಜಾಲ ಸೇವೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ಆದೇಶದಂತೆ ಮಂಗಳೂರು ಪೊಲೀಸ್ ಕಮೀಷನೊರೇಟ್ ವ್ಯಾಪ್ತಿ ಒಳಗೊಂಡಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದಿನ ನಲವತ್ತೆಂಟು ಗಂಟೆಗಳು ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ.
ಇಂದು ಮಂಗಳೂರಿನಲ್ಲಿ ನಡೆದ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಹಾಗಾಗಿ ನಾಳೆ ಪ್ರತಿಭಟನೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಈ ನಿರ್ಧಾರ ತಳೆಯಲಾಗಿದೆ.

ಇಂದು ನಡೆದ ಪ್ರತಿಭಟನೆಗೆ ಸಾಮಾಜಿಕ ಜಾಲತಾಣ ಕಾರಣ ಎಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಘೋಯಲ್ ಭಾವಿಸಿದ್ದು, ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಭಟನೆಗೆ ಕರೆ ನೀಡುವುದು, ಪ್ರತಿಭಟನೆಗೆ ಪ್ರೇರಿಪಿಸುವುದು, ವದಂತಿಗಳನ್ನು ಹರಡುವುದನ್ನು ತಡೆಯಲೆಂದು ಅಂತರ್ಜಾಲ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಾಳೆ ನೆಡೆಯಬೇಕಿದ್ದ ವಿಟಿಯು ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ದೆಹಲಿಯಲ್ಲಿಯೂ ಇಂದು ಇಂಟರ್ನೆಟ್ ಸೇವೆ ಜೊತೆಗೆ ಕರೆ ಮತ್ತು ಎಸ್ಎಂಎಸ್ ಸೇವೆಯನ್ನೂ ಬಂದ್ ಮಾಡಲಾಗಿದೆ. ಈಶಾನ್ಯ ರಾಜ್ಯಗಳ ಕೆಲವು ಭಾಗಗಳ್ಲಿಯೂ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರಗಳು ಪ್ರಯಾಸ ಪಡುತ್ತಿವೆ.












Click it and Unblock the Notifications