ಎಸ್ಡಿಸಿಸಿ ಬ್ಯಾಂಕ್ ವಿರುದ್ಧ ತಿರುಗಿಬಿದ್ದ ಸಚಿವ ಸೋಮಶೇಖರ್!
ಮಂಗಳೂರು, ನವೆಂಬರ್ 19; ಕರ್ನಾಟಕದಲ್ಲಿ ಡಿಸೆಂಬರ್ 10ರಂದು ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕರಾವಳಿಯಲ್ಲಿ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಫೈನಲ್ ಆಗಿದೆ. ಕಾಂಗ್ರೆಸ್ನಲ್ಲಿ ಮಾತ್ರ ಟಿಕೆಟ್ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಕಾಂಗ್ರೆಸ್ನಲ್ಲಿ ಹಲವು ಮಂದಿ ನಾಯಕರು ವಿಧಾನಪರಿಷತ್ ಸ್ಥಾನಕ್ಕೆ ಕಣ್ಣಿದ್ದಾರೆ. ಕಾಂಗ್ರೆಸ್ ರಾಜ್ಯ ಪ್ರಮುಖರು ಮಾತ್ರ ಇವರೆಲ್ಲರನ್ನೂ ಬದಿಗಿಟ್ಟು, ಪಕ್ಷೇತರವಾಗಿ ಚುನಾವಣೆಗಿಳಿಯಲು ಸಜ್ಜಾಗಿರುವ ಎಸ್ಡಿಸಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ಪರಿಷತ್; ಹಾಸನ ಜೆಡಿಎಸ್ ಅಭ್ಯರ್ಥಿ ಅಂತಿಮ, ಶುಕ್ರವಾರ ನಾಮಪತ್ರ
ರಾಜೇಂದ್ರ ಕುಮಾರ್ರನ್ನು ಬೆಂಗಳೂರಿನಲ್ಲಿ ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಡಿ. ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿಗೆ ರಾಜೇಂದ್ರ ಕುಮಾರ್ ಹಿತೈಷಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ; ವಿಧಾನ ಪರಿಷತ್ ಚುನಾವಣೆಗೆ ಹೆಚ್ಚಾದ ಆಕಾಂಕ್ಷಿಗಳ ಕಸರತ್ತು
ಕಾಂಗ್ರೆಸ್ ಮುಖಂಡರು ಸ್ವಪಕ್ಷದವರಿಗೆ ಕೈಕೊಟ್ಟು, ರಾಜೇಂದ್ರ ಕುಮಾರ್ಗೆ ಆಹ್ವಾನ ಕೊಟ್ಟಿರೋದು ಟಿಕೆಟ್ ಅಕಾಂಕ್ಷಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಮೂಲಗಳ ಮಾಹಿತಿಯ ಪ್ರಕಾರ ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗುವ ಸಾಧ್ಯತೆಗಳೇ ಅತೀ ಹೆಚ್ಚು.
ಪರಿಷತ್ ಚುನಾವಣೆ; ಬಿಜೆಪಿಗೆ 15 ಸೀಟು ಗುರಿ, 4 ತಂಡದಿಂದ ಯಾತ್ರೆ!
ಹೀಗಾಗಿ ಬಿಜೆಪಿಯ ಪ್ರತಿಸ್ಪರ್ಧಿ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಎಂಬುವುದು ಫೈನಲ್ ಆಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್ ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ ಸಂಭಾಗಣದಲ್ಲಿ ನಡೆದ ಜ್ವನಸ್ವರಾಜ್ ಯಾತ್ರೆಯಲ್ಲಿ ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್ ಪಾಲ್ಗೊಂಡಿದ್ದರು. ಎಸ್ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪವನ್ನು ಸಚಿವರು ಮಾಡಿದರು.
ಬ್ಯಾಂಕ್ನಿಂದ ಪ್ರತಿವರ್ಷ ನವೋದಯ ಚಾರಿಟಬಲ್ ಟ್ರಸ್ಟ್ಗೆ 19 ಲಕ್ಷ ರೂಪಾಯಿ ವರ್ಗಾವಣೆವಾಗುತ್ತಿದೆ. ಈ ರೀತಿಯ ಹಣ ವರ್ಗಾವಣೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಎಸ್ಡಿಸಿಸಿ ಬ್ಯಾಂಕ್ನಲ್ಲಿ ಹಣ ವರ್ಗಾವಣೆಯಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಸಮರ್ಪಕವಾಗಿ ತನಿಖೆ ಮಾಡಬೇಕು.
ಅಧಿಕಾರಿಗಳು ಸರಿಯಾಗಿ ತನಿಖೆ ಮಾಡದಿದ್ದರೆ ಅಮಾನತು ಮಾಡಲಾಗುತ್ತದೆ. ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ವಜಾ ಮಾಡುವ ಅಧಿಕಾರ ಸಹಕಾರ ಇಲಾಖೆಗೆ ಇದೆ. ಅಧಿಕಾರಿಗಳು ಯಾವುದೇ ಆಮಿಷಕ್ಕೆ ಬಗ್ಗದೇ ಕರ್ತವ್ಯ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಎಸ್ಡಿಸಿಸಿ ಬ್ಯಾಂಕ್ ಅನ್ನು ದುರುಪಯೋಗ ಮಾಡಲಾಗುತ್ತಿದೆ. ಸಹಕಾರಿ ಹಣವನ್ನು ದುರುಪಯೋಗ ಪಡಿಸಲಾಗುತ್ತಿದೆ. ಅಕ್ರಮ ಎಸಗಲಾಗುತ್ತಿದೆ, ನವೋದಯ ಟ್ರಸ್ಟ್ ಸ್ಥಾಪನೆ ಮಾಡಿರುವುದಕ್ಕೆ ಆಕ್ಷೇಪ ಇಲ್ಲ. ಆದರೆ ನವೋದಯ ಟ್ರಸ್ಟ್ ಅನ್ನು ಬ್ಯಾಂಕಿನಲ್ಲಿ ಅವಕಾಶ ನೀಡಿರುವುದು ಕಾನೂನು ಬಾಹಿರ ವಾಗಿದೆ.
ಎಸ್ಸಿಡಿಸಿಸಿ ಬ್ಯಾಂಕಿನ 19 ಲಕ್ಷ ರೂಪಾಯಿ ಹಣವನ್ನು ಪ್ರತಿ ತಿಂಗಳು ನವೋದಯ ಟ್ರಸ್ಟ್ಗೆ ಕಾನೂನು ಬಾಹಿರವಾಗಿ ನೀಡಲಾಗುತ್ತಿದೆ. ಅಕ್ರಮಕ್ಕೆ ಸಹಕಾರಿ ಇಲಾಖೆಯ ಅಧಿಕಾರಿಗಳ ಸಹಕರಿಸುತ್ತಿದ್ದಾರೆ. ಅಕ್ರಮಕ್ಕೆ ಅಧಿಕಾರಿಗಳು ಸಹಕರಿಸುತ್ತಿರುವುದನ್ನು ಸರ್ಕಾರ ಸಹಿಸೋದಿಲ್ಲ ಎಂದು ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.
ಡಿಸೆಂಬರ್ 14ಕ್ಕೆ ಫಲಿತಾಂಶ; 25 ವಿಧಾನ ಪರಿಷತ್ ಸ್ಥಾನಗಳಿಗೆ ಈಗಾಗಲೇ ಚುನಾವಣೆ ಅಧಿಸೂಚನೆ ಪ್ರಕಟವಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, 14ರಂದು ಫಲಿತಾಂಶ ಪ್ರಕಟವಾಗಲಿದೆ. ಮೂರು ಪಕ್ಷಗಳು ಹೆಚ್ಚು ಸ್ಥಾನಗಳನ್ನು ಗೆದ್ದು ಪರಿಷತ್ನಲ್ಲಿ ಬಲ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸುತ್ತಿವೆ.
Recommended Video
ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್ 23 ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ನವೆಂಬರ್ 26ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.