ಪೇಜಾವರ ಶ್ರೀ ವಿರುದ್ಧ ಮಂಗಳೂರು, ಉಡುಪಿಯಲ್ಲಿ ಪ್ರತಿಭಟನೆ
ಮಂಗಳೂರು, ಜುಲೈ 2: ಉಡುಪಿ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಆಯೋಜಿಸಿದ ಇಫ್ತಾರ್ ಕೂಟವನ್ನು ವಿರೋಧಿಸಿ ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಶ್ರೀರಾಮ ಸೇನೆ, ಹಿಂದೂ ಮಹಾಸಭಾ, ಹಿಂದೂ ಜನ ಜಾಗೃತಿ ಸಂಘಟನೆಗಳು ಲಾಲ್ ಬಾಗ್ ನಲ್ಲಿ ಪ್ರತಿಭಟನೆ ನಡೆಸಿದವು.
ಪೇಜಾವರ ಯತಿಗಳ ಕ್ರಮ ಖಂಡನಾರ್ಹ, ಮಠಕ್ಕೆ ಧಿಕ್ಕಾರ, ಮಠ ಅಪವಿತ್ರವಾಗಿದ್ದು, ಗೋಮೂತ್ರದಿಂದ ಶುದ್ಧೀಕರಣ ಮಾಡಬೇಕು ಎಂದು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿ ಪೇಜಾವರ ಶ್ರೀಗಳು ಮುಸ್ಲಿಂ ಓಲೈಕೆಗೆ ಮಾಡುತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೂಡಲೇ ಶ್ರೀಗಳು ಮಠ ತೊರೆದು ಉತ್ತರಾಧಿಕಾರಿ ಆಯ್ಕೆಗೆ ಅವಕಾಶ ನೀಡಬೇಕು. ಇಲ್ಲಿಯವರೆಗೂ ನಮಗೆ ನೀವು ಆದರ್ಶ ಆಗಿದ್ದೀರಿ. ಆದರೆ, ಈಗ ನೀವು ಮಾಡಿದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಉಡುಪಿಯಲ್ಲೂ ಪ್ರತಿಭಟನೆ
ಇನ್ನು ಇತ್ತೀಚೆಗೆ ಆಯೋಜಿಸಿದ್ದ ಇಫ್ತಾರ್ ಕಾರ್ಯಕ್ರಮದ ವೇಳೆ ಮಠದ ಆವರಣದಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಿದ್ದನ್ನು ವಿರೋಧಿಸಿ ಇಂದು ಬೆಳಗ್ಗೆ ಉಡುಪಿ ಕ್ಲಾಕ್ ಟವರ್ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಸುತ್ತಮುತ್ತ ಹಾಗೂ ಉಡುಪಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಶ್ರೀಕೃಷ್ಣ ದೇವರಿಗೆ ಪ್ರಾರ್ಥಿಸಿ ಭಜನೆ ಮಾಡಿದರು.
ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಮಂಗಳೂರು ವಿಭಾಗದ ಕಾರ್ಯದರ್ಶಿ ಮೋಹನ್ ಭಟ್, ಹಿಂದೂ ಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ವಿಜಯ ಕುಮಾರ್ ಉಪಸ್ಥಿತರಿದ್ದರು..












Click it and Unblock the Notifications