ತಂದೆಯ ಅಂತ್ಯಸಂಸ್ಕಾರದ ವೇಳೆಯೇ ಮಗ ಹೃದಯಾಘಾತದಿಂದ ಸಾವು
ಮಂಗಳೂರು, ಜೂನ್ 2: ಕೊರೊನಾ ಸೋಂಕಿನಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರ ನಡೆಸುವ ವೇಳೆ ಮಗನೂ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪುಣಚದಲ್ಲಿ ನಡೆದಿದೆ.
ಪುಣಚದ ಬೈಲಗುತ್ತು ನಿವಾಸಿ ಭುಜಂಗ ಶೆಟ್ಟಿ ಎಂಬುವವರು ಜೂನ್ 1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದು, ಬುಧವಾರ ಬೈಲಗುತ್ತುವಿನಲ್ಲಿ ಅಂತ್ಯಸಂಸ್ಕಾರ ನಡೆಯುತ್ತಿತ್ತು.
ಭುಜಂಗ ಶೆಟ್ಟಿಯವರ ಮಗ ಶೈಲೇಶ್ ಶೆಟ್ಟಿ ತಂದೆಯ ಅಂತ್ಯಸಂಸ್ಕಾರ ಕಾರ್ಯ ಮಾಡುತ್ತಿದ್ದು, ಈ ವೇಳೆಯೇ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಲು ಪ್ರಯತ್ನಿಸಿದರೂ ಆಗಲೇ ಶೈಲೇಶ್ ಮೃತಪಟ್ಟಿದ್ದರು.
ಶೈಲೇಶ್ ಶೆಟ್ಟಿಯವರ ಸಾವಿಗೆ ರಕ್ತದೊತ್ತಡ ಕಡಿಮೆಯಾಗಿದ್ದೇ ಕಾರಣ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದ ಶೈಲೇಶ್ ಶೆಟ್ಟಿ ಕಳೆದ ತಿಂಗಳಷ್ಟೇ ಊರಿಗೆ ಮರಳಿದ್ದರು. ಇದೀಗ ತಂದೆ - ಮಗ ಒಟ್ಟಿಗೆ ಸಾವನ್ನಪ್ಪಿರುವುದು ಮನೆಯವರನ್ನು ಶೋಕ ಸಾಗರಕ್ಕೆ ದೂಡಿದೆ. ಇಡೀ ಊರಿನಲ್ಲಿ ಮೌನ ಆವರಿಸಿದೆ .