ರಾಘವೇಶ್ವರ ಶ್ರೀಗಳ ವಿರುದ್ಧ ಸಿಐಡಿ ಪೊಲೀಸರಿಂದ ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ
ಮಂಗಳೂರು, ಸೆಪ್ಟೆಂಬರ್. 27: ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸಪ್ಟೆಂಬರ್. 1 ರಂದು ಶ್ಯಾಂ ಪ್ರಸಾದ್ ಶಾಸ್ತ್ರಿ ಅತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ಪುತ್ತೂರು ಹವ್ಯಕ ವಲಯದ ಅಧ್ಯಕ್ಷ ಶಿವ ಶಂಕರ್ ಭಟ್ ವಿರುದ್ಧ ಆರೋಪ ಪಟ್ಟಿಯನ್ನು ಸಿಐಡಿ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪುತ್ತೂರಿನ ಕೆದಿಲದಲ್ಲಿ 2014, ಸೆಪ್ಟೆಂಬರ್ 01 ರಂದು ಶ್ಯಾಂ ಪ್ರಸಾದ್ ಶಾಸ್ತ್ರಿ ತಮ್ಮ ಮನೆಯಲ್ಲಿ ಬಂದೂಕಿನಿಂದ ಗುಂಡುಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಈ ಪ್ರಕರಣದ ತನಿಖೆ ನಡಿಸಿದ ಸಿಐಡಿ ಡಿವೈಎಸ್ಪಿ ಆರ್ ವಾಸು ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸ್ವಾಮಿಜಿ ಪರ ನಿಲ್ಲುವಂತೆ ಒತ್ತಡ , ಬೆದರಿಕೆ , ನಿಂದನೆ ಪ್ರಚೋದನೆ ಆರೋಪದಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಶ್ಯಾಂ ಪ್ರಸಾದ್ ಶಾಸ್ತ್ರಿ ರಾಮಕಥಾ ಗಾಯಕಿಯ ಪತಿಯ ಕಿರಿಯ ಸಹೋದರ ಆಗಿದ್ದರು. ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಪರ ನಿಲ್ಲುವಂತೆ ಶ್ಯಾಂ ಪ್ರಸಾದ್ ಶಾಸ್ತ್ರಿ ಅವರ ಮೇಲೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಪುತ್ತೂರು ಹವ್ಯಕ ವಲಯದ ಅಧ್ಯಕ್ಷ ಶಿವ ಶಂಕರ್ ಭಟ್ ಹಾಗೂ ರಾಘವೇಶ್ವರ ಶ್ರೀ ಅವರು ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿತ್ತು.
ಒತ್ತಡ ಹೇರಿದ ಆಡಿಯೋ ಸಹಿತ ಹಲವು ಸಾಕ್ಷಿಗಳನ್ನು ಕೋರ್ಟ್ ಗೆ ಸಲ್ಲಿಸಿರುವ ಸಾಧ್ಯತೆ ಇದೆ. 2014 ರಲ್ಲಿ ಪುತ್ತೂರಿನ ಕೆದಿಲದಲ್ಲಿ ನಡೆದಿದ್ದ ಈ ಆತ್ಮಹತ್ಯೆ ಪ್ರಕರಣ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಪುತ್ತೂರು ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆತ್ಮಹತ್ಯೆ ಪ್ರಕರಣವನ್ನು ಸರಕಾರ ಸಿಐಡಿಗೆ ವಹಿಸಿತ್ತು.












Click it and Unblock the Notifications