ಮುಗಿಯದ ' ಶಿರಾಡಿ' ಗೋಳು, ನಿಲ್ಲದ ಪ್ರಯಾಣಿಕರ ಗೋಳು!
ಹೊಸ ವರ್ಷದಲ್ಲಿ ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಮಗಾರಿ ಆರಂಭವಾಗುತ್ತೆ ಎಂದು ಘೋಷಿಸಲಾಗಿತ್ತು. ಹೀಗಾಗಿ ಜನವರಿ ಮೂರರಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹಿಂಪಡೆಯಲಾಗಿದೆ
ಮಂಗಳೂರು, ಜನವರಿ 3 : ಹೊಸ ವರ್ಷದಲ್ಲಿ ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಮಗಾರಿ ಆರಂಭವಾಗುತ್ತೆ ಎಂದು ಘೋಷಿಸಲಾಗಿತ್ತು. ಹೀಗಾಗಿ ಜನವರಿ ಮೂರರಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ದಿಢೀರನೆ ಇದಕ್ಕೆಲ್ಲಾ ಬೆಂಕಿ ಬಿದ್ದಿದೆ..!
ಸದ್ಯಕ್ಕೆ ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಜೊತೆಗೆ ಈ ರಸ್ತೆಯ ಗೋಳು ಮುಗಿಯುವ ಲಕ್ಷಣನೂ ಕಾಣುತ್ತಿಲ್ಲ. ಯಾವಾಗ ಕಾಮಗಾರಿ ಆರಂಭವಾಗುತ್ತೆ..? ಕಾಮಗಾರಿ ಮುನ್ನ ಯಾವೆಲ್ಲಾ ತಯಾರಿ ನಡೆದಿದೆ ಎಂಬುದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇಲ್ಲ. ಸದ್ಯ ಈ ರಸ್ತೆಯ ಕಾಮಗಾರಿ ನಡೆಯದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ಎಂದಿನಂತೆ ಸಾಗಲಿದೆ ಎಂಬ ಮಾಹಿತಿ ನಿಮ್ಮ ' ಒನ್ ಇಂಡಿಯಾ' ಕ್ಕೆ ಲಭ್ಯವಾಗಿದೆ.
ವಿಳಂಬಕ್ಕೆ ಕಾರಣ ಏನು..?
ಶಿರಾಡಿ ಘಾಟ್ ರಸ್ತೆಯ 2 ನೇ ಹಂತದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಈವರೆಗೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗೆ ಬೇಕಾದ ಸಲಕರಣೆಗಳನ್ನ ಸಂಗ್ರಹಿಸಿಲ್ಲ. ಮೊದಲೇ ತಿಳಿಸಿದಂತೆ ಅಂದರೆ 2016 ರ ಅಕ್ಟೋಬರ್ ನಲ್ಲಿ ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಬೇಕಾಗಿತ್ತು. ಇದರಲ್ಲಿ ಶೇಕಡಾ ನೂರರಲ್ಲಿ ಈವರೆಗೆ ಸಂಗ್ರಹವಾದ ಸಾಮಾಗ್ರಿಗಳು ಕೇವಲ ಶೇಕಡಾ 43 ರಷ್ಟು ಮಾತ್ರ. ಪೂರ್ಣ ಪ್ರಮಾಣದ ಸಾಮಾಗ್ರಿ ಸಂಗ್ರಹ ಮಾಡದೇ ಕಾಮಗಾರಿ ಮಾಡಿದರೆ ತುಂಬಾ ದಿನಗಳು ಬೇಕಾಗುತ್ತವೆ.

ಎರಡನೇ ಹಂತದಲ್ಲಿ 12.5 ಕಿ.ಮೀ. ರಸ್ತೆಯ ದುರಸ್ತಿ ಕಾರ್ಯ ನಡೆಯಬೇಕಿದೆ. ಶೀಘ್ರವೇ ಕಾಮಗಾರಿ ಆರಂಭವಾಗುತ್ತೆ. ಹೀಗಾಗಿ ಕಳೆದ ತಿಂಗಳಲ್ಲಿ ಪರ್ಯಾಯ ಮಾರ್ಗಗಳನ್ನು ಪ್ರಕಟಿಸಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ, ಕಾಮಗಾರಿ ನಡೆಯುತ್ತಿರುವಾಗ ಸಂಪೂರ್ಣ ರಸ್ತೆ ಬಂದ್ ಮಾಡುವುದು ಬೇಡ ಎಂದು ಸೂಚನೆ ನೀಡಿದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಇದಕ್ಕೆ ಬೆಲೆನೇ ನೀಡಿಲ್ಲ.
2015 ರ ನವೆಂಬರ್ ನಲ್ಲಿ ಶಿರಾಡಿ ಘಾಟ್ ರಸ್ತೆಯ ಕಾಮಗಾರಿಗೆ ವರ್ಕ್ ಅರ್ಡರ್ ಆಗಿತ್ತು. ಹದಿನೆಂಟು ತಿಂಗಳು ಟೆಂಡರ್ ಅವಧಿಯನ್ನ ನೀಡಲಾಗಿತ್ತು. ನಿಯಮದ ಪ್ರಕಾರ ಗುತ್ತಿಗೆದಾರರು 2016 ಅಕ್ಟೋಬರ್ ನಲ್ಲಿ ಕೆಲಸ ಆರಂಭಿಸಬೇಕಾಗಿತ್ತು.
ಇಲ್ಲಿ 12.3 ಕಿ.ಮೀ. ವ್ಯಾಪ್ತಿಯಲ್ಲಿ 72 ಮೋರಿಗಳಿವೆ. ಇವುಗಳಲ್ಲಿ ಕೆಲಸ ಆಗಿದ್ದು ಕೇವಲ 36 ಮೋರಿಗಳದ್ದು. ಆದರೆ ಇನ್ನು ಮೂವತ್ತಾರು ಮೋರಿ ಹಾಗೂ ಎರಡು ಕಿರು ಸೇತುವೆಗಳ ಕಾಮಗಾರಿ ಬಾಕಿ ಇದೆ. ಈವರೆಗೆ ಕೇವಲ ಕಾಮಗಾರಿಗೆ ಶೇಕಡಾ 47 ರಷ್ಟು ಪೂರಕ ವಸ್ತುಗಳ ಜೊತೆಗೆ ಶೇಕಡಾ 33 ರಷ್ಟು ಮರಳು ಸಂಗ್ರಹವಾಗಿದೆ. ಇನ್ನು ಡೋವೆರ್ ಬಾರ್ ಇನ್ಸುಲೇಟರ್ ,
ಪೇವರ್ ಗಳು ಇನ್ನೂ ಬಂದಿಲ್ವಂತೆ.
ಸಚಿವ ರೈ, ' ಕಾಮಗಾರಿ ಆರಂಭವಾದರೂ ಒಂದು ಕಡೆಯ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಜನ ಸಂಚಾರಕ್ಕೆ ತೊಂದರೆಯಾಗಬಾರದು.. ಹಾಗೂ ಬೇಗನೇ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ..' ಅಂದರು.
ಕಾಮಗಾರಿ ವಿಳಂಬ ಆಗುತ್ತಿರುವ ಬಗ್ಗೆ ಸಚಿವ ರೈ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ಒನ್ ಇಂಡಿಯಾಕ್ಕೆ ಲಭ್ಯವಾಗಿದೆ. ಅಧಿಕಾರಿಗಳ ಪ್ರಕಾರ ಒಂದು ಕಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಕಾಮಗಾರಿಗೆ ತೊಂದರೆಯಾಗುತ್ತದೆ ಎಂಬ ವಾದ. ಆದರೆ ಸಚಿವರ ಪ್ರಕಾರ ಬಂದ್ ಅನಿವಾರ್ಯವಾದರೆ ಹೆಚ್ಚು ಸಮಸ್ಯೆಯಾಗದ ಕಡೆ ಮೊದಲು ಕಾಮಗಾರಿ ಪ್ರಾರಂಭಿಸಬೇಕೆಂದು ಹೇಳಿದ್ದಾರೆ. ಆದರೆ ಕಾಮಗಾರಿ ಆರಂಭಿಸುವ ಮುನ್ನ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳ ಸಭೆ ಕರೆಯಲು ಹಿಂದೇಟು ಹಾಕುತ್ತಿರುವುದು ಯಾಕೆ ಅನ್ನೋದೇ ಪ್ರಶ್ನೆ.












Click it and Unblock the Notifications