ಮಂಗಳೂರು: ಮಾಸ್ಕ್ ಧರಿಸದೆ ವಿವಾದ ಸೃಷ್ಟಿಸಿಕೊಂಡ ವೈದ್ಯ ಹೇಳೋದೇನು?
ಮಂಗಳೂರು, ಮೇ 20: ಮಂಗಳೂರಿನ ವೈದ್ಯರೊಬ್ಬರು ನಾನು ಮಾಸ್ಕ್ ಧರಿಸೋದೇ ಇಲ್ಲ. ಸರ್ಕಾರದ ದಡ್ಡ ನಿಯಮಗಳನ್ನು ಪಾಲಿಸುವುದಿಲ್ಲ ಅಂತಾ ಹೇಳಿ ಸೂಪರ್ ಮಾರುಕಟ್ಟೆಯಲ್ಲಿ ವಿವಾದ ಮಾಡಿರುವ ಘಟನೆ ಮಂಗಳವಾರ (ಮೇ 18)ದಂದು ನಡೆದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿತ್ತು.
ಮಂಗಳೂರಿನ ಕದ್ರಿಯಲ್ಲಿರುವ ಜಿಮ್ಮೀಸ್ ಸೂಪರ್ ಮಾರ್ಕೆಟ್ನಲ್ಲಿ ಮೇ 18ರಂದು ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ ಸೂಪರ್ ಮಾರ್ಕೆಟ್ಗೆ ಬಂದ ಡಾ.ಕಕ್ಕಿಲ್ಲಾಯರನ್ನು ತಡೆದ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಇಷ್ಟಕ್ಕೇ ಸಿಬ್ಬಂದಿ ಜೊತೆ ಉಡಾಫೆ ವರ್ತನೆ ತೋರಿದ ಡಾಕ್ಟರ್, ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ಟೀಕೆಗೆ ಒಳಗಾಗಿದ್ದರು.
ನಂತರ ಮಾಸ್ಕ್ ಧರಿಸದೇ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ವೈದ್ಯ ಶ್ರೀನಿವಾಸ್ ಕಕ್ಕಿಲಾಯ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ಸೂಪರ್ ಮಾರ್ಕೆಟ್ ಮಾಲೀಕ ರಯನ್ ರೊಜಾರಿಯಾ ದೂರು ನೀಡಿದ್ದರು.
ವೈದ್ಯ ಶ್ರೀನಿವಾಸ್ ಹೇಳೋದೇನು?
ಈ ವಿವಾದಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿರುವ ವೈದ್ಯ ಶ್ರೀನಿವಾಸ್, ""ನಾನು ಪ್ರತಿವಾರ ದಿನಸಿ ತರಲು ಹೋಗುವ ಅಂಗಡಿಗೆ ಹೋಗಿದ್ದೆ, ನಾನು ಹೋದಾಗ ಪ್ರಶ್ನಿಸದ ಅವರು, ಬಿಲ್ ಮಾಡಿ ವಾಪಸ್ ಬರುವಾಗ ಮಾಸ್ಕ್ ಬಗ್ಗೆ ಕೇಳಿದ್ದಾರೆ. ನಾನು ಅಲ್ಲಿ ವಸ್ತು ತೆಗೆದುಕೊಳ್ಳುವಾಗ ನನ್ನ ಹತ್ತಿರ ಯಾರೂ ಇಲ್ಲ ಮತ್ತು ನಾನು ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದೇನೆ. ಬಿಲ್ ಕೊಡುವಾಗ ಅಂಗಡಿಯವನು ಗದ್ದಲ ಶುರು ಮಾಡಿದರು'' ಎಂದು ಹೇಳಿದರು.
ಮಂಗಳೂರು: ಮಾಸ್ಕ್ ಹಾಕಲ್ಲವೆಂದು ಹಠ ಹಿಡಿದ ಮತ್ತೊಬ್ಬ ವೈದ್ಯ; ನಡೆದಿದ್ದೇನು?
ವ್ಯಾಪಾರವನ್ನು ಹಾಳು ಮಾಡುವುದಾಗಿದೆ
"ನನಗೆ ಈಗಗಾಲೇ ಸೋಂಕು ಬಂದು ಹೋಗಿದೆ, ಆದ್ದರಿಂದ ನನ್ನಿಂದ ಯಾರಿಗೂ ಅಪಾಯವಿಲ್ಲ ಹಾಗೂ ತೊಂದರೆ ಇಲ್ಲ ಅಂತ ಹೇಳಿದೆ. ಸರ್ಕಾರದ ತಪ್ಪು ನಿರ್ಧಾರ ಪಾಲಿಸುವ ಮೊದಲು ಆಲೋಚನೆ ಮಾಡಬೇಕು ಎಂದಿದ್ದೇನೆ. ಕಳೆದ ಮಾರ್ಚ್ ತಿಂಗಳಿನಿಂದಲೂ ಲಾಕ್ಡೌನ್ ಮೂರ್ಖತನದ್ದು ಎಂದು ಹೇಳುತ್ತಿದ್ದೇನೆ. ಕೇವಲ ಸೂಪರ್ ಮಾರುಕಟ್ಟೆಯಲ್ಲಿ ಹೇಳಿಲ್ಲ. ಈ ಮೊದಲು ವೆಬಿನಾರ್, ವಿಡಿಯೋ ಮತ್ತು ಲೇಖನಗಳಲ್ಲಿ ಲಾಕ್ಡೌನ್ ವಿರೋಧಿಸಿದ್ದೇನೆ. ಇದು ಲಾಕ್ಡೌನ್ ಅಲ್ಲ ಶಟ್ ಡೌನ್ ಅಂತ ಹೇಳಿದ್ದೇನೆ. ಇದು ಕೇವಲ ಅಂಗಡಿಗಳನ್ನು ಮುಚ್ಚಿ, ವ್ಯಾಪಾರವನ್ನು ಹಾಳು ಮಾಡುವುದಾಗಿದೆ'' ಎಂದು ವೈದ್ಯರು ಹೇಳುತ್ತಾರೆ.
ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದೇ ಇಲ್ಲ
ಕೊರೊನಾ ವೈರಸ್ ತಡೆಯಲು ಮಾಸ್ಕ್ ಕಡ್ಡಾಯವಲ್ಲವೇ ಎಂದು ಕೇಳಿದರೆ, "ಮಾಸ್ಕ್ನಿಂದ ಕೊರೊನಾ ವೈರಸ್ ತಡೆಯಲು ಸಾಧ್ಯವಿಲ್ಲ. ಮಾಸ್ಕ್ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದೇ ಇಲ್ಲ. ಇದ್ದರೆ ಕೊಡಿ'' ಎಂದು ಹೇಳಿದ ವೈದ್ಯ ಶ್ರೀನಿವಾಸ್, ಮಾಸ್ಕ್ ಹಾಕದೇ ಹೋಗಿದ್ದಕ್ಕೆ ಜನರಿಗೆ ತಪ್ಪು ಸಂದೇಶ ಕೊಟ್ಟಂತಾಗುವುದಿಲ್ಲವೇ ಎಂದು ಕೇಳಿದಾಗ, ನಾನು ಯಾರಿಗೂ ತೊಂದರೆ ಕೊಡಲು ಹೋಗಿಲ್ಲವೆಂದು ಸ್ಪಷ್ಟಪಡಿಸಿದರು.
ಮಂಗಳೂರು: ಮಾಸ್ಕ್ ಹಾಕಲ್ಲವೆಂದು ಹಠ ಹಿಡಿದಿದ್ದ ವೈದ್ಯನ ವಿರುದ್ಧ ಕೇಸ್ ದಾಖಲು
ಬೇರೆ ಪ್ರಕರಣ ಲಿಂಕ್ ಮಾಡುವ ಅಗತ್ಯವಿಲ್ಲ
ಬೆಂಗಳೂರಿನ ಸಾಗರ್ ಕ್ಲಿನಿಕ್ನ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾಸ್ಕ್ ಬೇಕಿಲ್ಲ. ಸ್ಯಾನಿಟೈಸರ್ ಹಾಕಬೇಕಿಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ, ನಿಮ್ಮನ್ನು ಟಾರ್ಗೆಟ್ ಮಾಡಿ ಪ್ರಕರಣ ದಾಖಲಿಸಲಾಗಿದೆಯೇ ಎಂದು ಕೇಳಿದಾಗ, "ಆ ಪ್ರಕರಣಕ್ಕೂ, ಈ ಪ್ರಕರಣಕ್ಕೂ ಲಿಂಕ್ ಮಾಡುವ ಅಗತ್ಯವಿಲ್ಲ. ಅದು ಏನೆಂದು ನನಗೆ ಗೊತ್ತಿಲ್ಲ. ಈ ಪ್ರಕರಣವನ್ನು ನಾನು ನೋಡುವ ರೀತಿಯೇ ಬೇರೆ. ನನಗೆ ಅಗತ್ಯವಿತ್ತು ಎಂಬ ಕಾರಣಕ್ಕೆ ನಾನು ಮಾರ್ಕೆಟ್ಗೆ ಹೋಗಿದ್ದೆ. ನಾನು ಒಳಗೆ ಹೋಗುವಾಗ ತಡೆಯಲಿಲ್ಲ, ಹೊರಗೆ ತಡೆದು ಕೇಳಿದ್ದಕ್ಕೆ ನಾನು ಹೇಳಬೇಕಿದ್ದನ್ನು ಹೇಳಿದ್ದೇನೆ ಎಂದು ತಿಳಿಸಿದರು.
ಯಾವ ರಾಜಕೀಯ ಪಕ್ಷಕ್ಕೂ ನನ್ನ ನಿಷ್ಠೆ ಇಲ್ಲ
ನಾನು ಯಾರಿಗೂ ಮಾಸ್ಕ್ ಹಾಕಬೇಡಿ ಅಂತ ಎಲ್ಲೂ ಹೇಳಿಲ್ಲ. ಆದರೆ, ಕೊರೊನಾ ಸೋಂಕಿನ ಹೆಸರಿನಲ್ಲಿ ಸರ್ಕಾರಗಳು ಸುಳ್ಳು ಹೇಳುತ್ತಿವೆ. ಜನರನ್ನು ದಬ್ಬಾಳಿಕೆ ಮಾಡುತ್ತಿವೆ. ಲಾಕ್ಡೌನ್, ಲಾಠಿ ಚಾರ್ಜ್ ಅಂತ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಹಾಗಾದರೆ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಿ ಎಂದು ಹೇಳಿದರು.
ನನ್ನ ನಿಷ್ಠೆ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ, ಯಾವ ವ್ಯಕ್ತಿ ಅಥವಾ ಕಂಪನಿಗೂ ಇಲ್ಲ. ನನ್ನ ನಿಷ್ಠೆ ಏನಿದ್ದರೂ ನನ್ನ ವೃತ್ತಿಗೆ, ವಿಜ್ಞಾನಕ್ಕೆ, ವೃತ್ತಿ ಧರ್ಮಕ್ಕೆ ಎಂದು ವೈದ್ಯ ಶ್ರೀನಿವಾಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.