ನನ್ನನ್ನು ಕೊಂದರೂ ಪರವಾಗಿಲ್ಲ, ರಾಮಮಂದಿರ ಹೇಳಿಕೆಗೆ ಬದ್ಧ: ಪೂಜಾರಿ
ಮಂಗಳೂರು, ಡಿಸೆಂಬರ್ 9: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರಿಗೆ ಜೀವ ಬೆದರಿಕೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಅವರೇ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತೃಪ್ತಿ ಸಿಗುವುದಿದ್ದರೆ ಎನ್ ಕೌಂಟರ್ ಮಾಡಿ ಸಾಯಿಸಲಿ ಎಂದು ಹೇಳಿದರು.
ನನಗೆ ಬೆದರಿಕೆ ಹಾಕಿದಾತನಿಗೆ ತೃಪ್ತಿ ಸಿಗುವುದಿದ್ದರೆ ನನ್ನನ್ನ ಕೊಲ್ಲಲಿ. ರಾಮಮಂದಿರ ನಿರ್ಮಾಣ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ರಾಮ, ಮಹಮ್ಮದ್ ಪೈಗಂಬರ್, ಏಸು ದೇವರೆಂದು ನಂಬುವವ ನಾನು ಎಂದು ಅವರು ಸ್ಪಷ್ಟಪಡಿಸಿದರು. ದೇವರನ್ನು ನಂಬಿ ಎಂದು ಆಯಾಯ ಧರ್ಮದವರಿಗೆ ಹೇಳಿದ್ದು ತಪ್ಪಾ ಎಂದು ಪ್ರಶ್ನಿಸಿದ ಅವರು, ಬೆದರಿಕೆ ಆಡಿಯೋ ಸಂದೇಶ ನೀಡಿದ್ದ ವ್ಯಕ್ತಿಗೆ ತೃಪ್ತಿ ಸಿಗುವುದಿದ್ದರೆ ನನ್ನನ್ನು ಕೊಲ್ಲಲಿ ಎಂದು ಅವರು ತಿಳಿಸಿದರು.
ಜನಾರ್ಧನ ಪೂಜಾರಿಗೆ ಬೆದರಿಕೆಯೊಡ್ಡಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪರ ಹೇಳಿಕೆ ನೀಡಿದ್ದ ಪೂಜಾರಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಎಂದು ಪರಿಚಯಿಸಿದ್ದ ವ್ಯಕ್ತಿ, ಜನಾರ್ದನ ಪೂಜಾರಿ ಅವರನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು ಎಂದು ಆಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ಬಗ್ಗೆ ಭಾರಿ ಅಕ್ರೋಶ ವ್ಯಕ್ತವಾಗಿತ್ತು.
ಪೂಜಾರಿ ಅವರು ರಾಮಮಂದಿರ ನಿರ್ಮಾಣ ಕುರಿತಂತೆ ನೀಡಿದ ಹೇಳಿಕೆಯನ್ನು ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಖಂಡಿಸಿ, ವಿರೋಧ ವ್ಯಕ್ತಪಟಿಸಿತ್ತು. ಈ ಮಧ್ಯೆ ವ್ಯಕ್ತಿಯೊಬ್ಬ ಜನಾರ್ದನ ಪೂಜಾರಿ ಅವರನ್ನು ಎನ್ ಕೌಂಟರ್ ಮಾಡಬೇಕು, ಗಡೀಪಾರು ಮಾಡಬೇಕು, ಕಾಂಗ್ರೆಸ್ ಪಕ್ಷದಿಂದ ಈ ಕೂಡಲೇ ವಜಾ ಮಾಡಬೇಕು ಎಂದು ಆಡಿಯೋ ಸಂದೇಶ ಕಳುಹಿಸಿದ್ದ.
ಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ
ಜನಾರ್ದನ ಪೂಜಾರಿ ಅವರಿಗೆ ಎನ್ ಕೌಂಟರ್ ನಲ್ಲಿ ಕೊಲ್ಲ ಬೇಕು ಎಂದಿದ್ದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಹಿರಿಯ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಇತ್ತೀಚೆಗೆ ಒತ್ತಾಯಿಸಿದ್ದರು.