ಡಿವೈಎಫ್ಐನಿಂದ ಜ.23ಕ್ಕೆ 'ಪಲ್ಗುಣಿ ನದಿ ಉಳಿಸಿ' ಜಾಥಾ
ಮಂಗಳೂರು, ಜನವರಿ 22: ಪಲ್ಗುಣಿ ನದಿ ಮಾಲಿನ್ಯದಿಂದ ರಕ್ಷಿಸಲು ಒತ್ತಾಯಿಸಿ ಡಿವೈಎಫ್ಐ ಜನವರಿ 23ರಂದು 'ಪಲ್ಗುಣಿ ನದಿ ಉಳಿಸಿ' ಜಾಥಾ ಹಮ್ಮಿಕೊಂಡಿದೆ.
ಪಲ್ಗುಣಿ ನದಿಯ ಉಳಿವಿಗಾಗಿ dyfi ಹೋರಾಟವನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಜನವರಿ 23 ರ ಸಂಜೆ 4:30 ಕ್ಕೆ ಮಂಗಳೂರಿನ ಮಿನಿ ವಿಧಾನಸೌಧದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರಗೆ ಪ್ರತಿಭಟನಾ ಜಾಥ ಹಮ್ಮಿಕೊಳ್ಳಲಾಗಿದೆ.
ಕರಾವಳಿಯ ಜೀವನದಿಗಳಲ್ಲಿ ಒಂದಾಗಿರುವ ಫಲ್ಗುಣಿ ನದಿ ಮತ್ತೆ ಸಂಕಷ್ಟದಲ್ಲಿದೆ. ಪಲ್ಗುಣಿ ನದಿಯನ್ನು ಸೇರುವ ತೋಕೂರು ಹಳ್ಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ಕೊಳೆತು ನಾರುತ್ತಿದೆ. ಎಂಎಸ್ಇಝಡ್ ಕಾರಿಡಾರ್ ರಸ್ತೆಯ ಬಳಿ ತೋಕೂರು ಹಳ್ಳವು ಕಾರ್ಖಾನೆಗಳ ತ್ಯಾಜ್ಯದಿಂದ ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ರಸ್ತೆಯವರೆಗೂ ದುರ್ನಾತ ಹಬ್ಬಿದೆ.

ಹಲವು ಕಾರ್ಖಾನೆಗಳು ತಳವೂರಿರುವ ಸಮೀಪದ ತೋಕೂರು ಹಳ್ಳ ಕೊಳೆತು ನಾರುತ್ತಿದೆ. ಅಲ್ಲಿಂದ ಅರ್ಧ ಕಿ ಮೀ ದೂರ ಹರಿದು ನದಿಯನ್ನು ಕೊಳೆತ ನೀರಿನೊಂದಿಗೆ ಪಲ್ಗುಣಿಯನ್ನು ಸೇರುತ್ತದೆ. ಜೀವ ನದಿ ಪಲ್ಗುಣಿ ಕಣ್ಣು ಮುಂದೆ ಸಾಯುತ್ತಿದೆ. ಆದರೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಈಗಾಗಲೇ ಈ ಬಗ್ಗೆ ಪರಿಸರ ಮಾಲಿನ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದ್ದಾರೆ.
ಫಲ್ಗುಣಿ ನಮ್ಮ ಜೀವನದಿಗಳಲ್ಲಿ ಒಂದು. ಕೈಗಾರಿಕಾ ಮಾಲಿನ್ಯದಿಂದಾಗಿ ಈ ಭಾಗದಲ್ಲಿ ಮೀನುಗಾರಿಕೆ, ಕೃಷಿ ಚಟುವಟಿಕೆಗಳು ಪೂರ್ಣವಾಗಿ ಸ್ಥಗಿತಗೊಂಡಿದೆ. ತೋಕೂರು, ಅತ್ರಬೈಲು, ಮೇಲುಕೊಪ್ಪಲ, ಕೂಳೂರು ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications