ಪಿಣರಾಯಿ ಆಗಮನದಂದೇ ದಕ್ಷಿಣ ಕನ್ನಡ ಜಿಲ್ಲಾ ಬಂದ್ - ಸಂಘ ಪರಿವಾರ
ಇದೇ ಫೆಬ್ರವರಿ 25ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ‘ಸೌಹಾರ್ದ ರ್ಯಾಲಿ ಮತ್ತು ಬಹಿರಂಗ ಸಭೆ'ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಬರುತ್ತಿರುವುದನ್ನುವಿರೋಧಿಸಿ ಸಂಘ ಪರಿವಾರ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಿದೆ.
ಮಂಗಳೂರು, ಫೆಬ್ರವರಿ.21: ಇದೇ ಫೆಬ್ರವರಿ 25ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ 'ಸೌಹಾರ್ದ ರ್ಯಾಲಿ ಮತ್ತು ಬಹಿರಂಗ ಸಭೆ' ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಕಾರ್ಯಕ್ರಮಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಬರುತ್ತಿರುವುದನ್ನು ವಿರೋಧಿಸಿ ಆರೆಸ್ಸೆಸ್ ನೇತೃತ್ವದಲ್ಲಿ ಸಂಘ ಪರಿವಾರ ಫೆ.25ರಂದು ಬಂದ್ ನಡೆಸಲಿದೆ.
ಮಂಗಳವಾರ ಸಂಘನಿಕೇತನದ ಸಭೆಯಲ್ಲಿ ನಿರ್ಧಾರ ಪ್ರಕಟಿಸಿದ ಆರ್.ಎಸ್.ಎಸ್ ಪ್ರಮುಖರು, ಫೆ.24ರಂದು ಬೆಳಿಗ್ಗೆ 10 ಗಂಟೆಗೆ ಜ್ಯೋತಿ ವೃತ್ತದಿಂದ ನೆಹರೂ ಮೈದಾನಕ್ಕೆ ಕಾಲ್ನಡಿಗೆ ಜಾಥ ನಡೆಸುತ್ತೇವೆ. ಹಾಗೂ ಫೆ. 25ರಂದು ಹರತಾಳ ನಡೆಸುವುದಾಗಿ ತಿಳಿಸಿದ್ದಾರೆ. [ಕೇರಳ ಸಿಎಂ ಪಿಣರಾಯಿ ಕಾರ್ಯಕ್ರಮಕ್ಕೆ ಸಂಘಪರಿವಾರದ ವಿರೋಧ]

ಶ್ರೀರಾಮಸೇನೆ ಬೆಂಬಲ
ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆ ನೀಡಿರುವುದನ್ನು ಶ್ರೀರಾಮ ಸೇನೆ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿದ ಶ್ರೀರಾಮ ಸೇನಾ ಸಂಘಟನೆ ನಾಯಕ ಆನಂದ ಶೆಟ್ಟಿ ಅಡ್ಯಾರ್, ' ಕೇರಳದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಗೆ ಸಿಎಂ ಪಿಣರಾಯಿ ನೇರ ಹೊಣೆಯಾಗಿದ್ದು, ಹಿಂದೂಗಳ ಹತ್ಯೆಯನ್ನು ಸಹಿಸಲು ಸಾಧ್ಯವಿಲ್ಲ. ನಗರದಲ್ಲಿ ಪ್ರಮೋದ್ ಮುತಾಲಿಕ್ ಭಾಷಣಕ್ಕೆ ಎಲ್ಲೆಡೆ ಅಡ್ಡಿ ಮಾಡಲಾಗುತ್ತಿದೆ. ಜಿಲ್ಲಾಡಳಿತ ತಾರತಮ್ಯ ಧೋರಣೆ ಮಾಡಬಾರದು," ಎಂದು ಹೇಳಿದ್ದಾರೆ.
ಡಿವೈಎಫ್ಐ ಖಂಡನೆ
ಫೆ.25ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆ ನೀಡಿರುವುದನ್ನು ಡಿವೈಎಫ್ಐ ಸಂಘಟನೆ ಖಂಡಿಸಿದೆ. ಈ ಕುರಿತು ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ' ಸಂಘ ಪರಿವಾರ ಕರೆ ನೀಡಿರುವ ಬಂದ್ ಖಂಡನೀಯ. ಮತೀಯ ಅಜೆಂಡಾದಿಂದ ಜ್ವಲಂತ ಸಮಸ್ಯೆಗಳು ಹಿನ್ನೆಲೆಗೆ ಸರಿದಿವೆ. ಇದನ್ನು ಎದುರಿಸಲು ಸೌಹಾರ್ದ ಸಂದೇಶ ಅನಿವಾರ್ಯಯಾಗಿದ್ದು ಸೌಹಾರ್ದ ರ್ಯಾಲಿಗೆ ಸಂಘಟನೆ ಬೆಂಬಲ ವ್ಯಕ್ತಪಡಿಸುತ್ತದೆ," ಎಂದು ಹೇಳಿದ್ದಾರೆ. [ಲೈಂಗಿಕ ಕಿರುಕುಳ: 30 ದಿನದೊಳಗೆ ಗೂಂಡಾಗಳನ್ನ ಜೈಲಿಗಟ್ಟಿ - ಪಿಣರಾಯಿ]












Click it and Unblock the Notifications