ಸಾಮಾಜಿಕ ಚಿಂತಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ವಿಧಿವಶ
ಮಂಗಳೂರು, ಜುಲೈ 1: ಸಾಮಾಜಿಕ ಚಿಂತಕ ನಿವೃತ್ತ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿಯ ಅವರು ಶನಿವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ಮಂಗಳೂರು ನಗರದ ದೇರೆಬೈಲು ಕೊಂಚಾಡಿ ಬಳಿಯಿರುವ ಗಿರಿನಗರದಲ್ಲಿ ಒಂಟಿಯಾಗಿ ವಾಸವಿದ್ದ ಪ್ರೊ. ಪಟ್ಟಾಭಿರಾಮ ಸೋಮಯಾಜಿಯ ಅವರು ಬೆಳಗ್ಗೆ ಮನೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನಿವೃತ್ತರಾಗಿರುವ ಇವರು ಕೋಮು ಸೌಹಾರ್ದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೊ.ಪಟ್ಟಾಭಿರಾಮ ಸೋಮಯಾಜಿ ಅವರು ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಶುಕ್ರವಾರ ರಾತ್ರಿ ಕೆಲ ಆಪ್ತರೊಡನೆ ಫೋನ್ನಲ್ಲಿ ಮಾತನಾಡಿದ್ದರು. ಆದರೆ ಶನಿವಾರ ಬೆಳಗ್ಗೆ ಮನೆಯಿಂದ ಹೊರಬಾರದಿರುವುದನ್ನು ನೋಡಿ ನೆರೆಹೊರೆಯವರು ಪೊಲೀಸರರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆಗಮಿಸಿ ಮನೆ ಬಾಗಿಲ ಅನ್ನು ಒಡೆದು ನೋಡಿದಾಗ ಅವರು ಮಲಗಿದಲ್ಲೇ ಕೊನೆಯುಸಿರೆಳೆದಿದ್ದುದು ಕಂಡು ಬಂದಿದೆ. ವಿಚ್ಛೇದಿತರಾಗಿ ಒಂಟಿಯಾಗಿ ವಾಸವಿರುವ ಅವರಿಗೆ ಮಕ್ಕಳಿಲ್ಲ. ಪಟ್ಟಾಭಿರಾಮ ಅವರಿಗೆ ಅಪಾರ ಶಿಷ್ಯವರ್ಗ ಇದ್ದು, ಪ್ರಾಧ್ಯಾಪಕರಾಗಿ ಜನಮನ್ನಣೆ ಗಳಿಸಿದ್ದರು. ಸರಳವಾಗಿ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದಿದ್ದರು. ಅಚ್ಚುಮೆಚ್ಚಿನ ಪ್ರಾಧ್ಯಾಪಕರ ಅಗಲಿಕೆಗೆ ಪಟ್ಟಾಭಿರಾಮ ಸೋಮಯಾಜಿ ಅವರ ಶಿಷ್ಯ ವರ್ಗ ಕಂಬನಿ ಮಿಡಿದಿದ್ದಾರೆ.
ಪ್ರೊ.ಪಟ್ಟಾಭಿರಾಮ ಸೋಮಯಾಜಿ ಅವರ ಸಹೋದ್ಯೋಗಿಗಳು, ಸ್ಥಳೀಯ ಗಣ್ಯರು, ವಿದ್ಯಾರ್ಥಿಗಳು ಹಾಗೂ ಒಡನಾಡಿಗಳು ಸಂತಾಪ ಸೂಚಿಸಿದ್ದಾರೆ.












Click it and Unblock the Notifications