ಕಣ್ಣೂರು ಜಿಲ್ಲೆಯ ಎರಡು ಕಡೆ ಅಯ್ಯಪ್ಪ ಭಕ್ತರಿಗಾಗಿ ವಿಶ್ರಾಂತಿ ಕೇಂದ್ರ ವ್ಯವಸ್ಥೆ
ಕಣ್ಣೂರು, ನವೆಂಬರ್.22:ಶಬರಿಮಲೆ ಯಾತ್ರೆ ಕೈಗೊಳ್ಳುವ ಅಯ್ಯಪ್ಪ ಭಕ್ತರಿಗಾಗಿ ಐಆರ್ ಪಿಸಿ (ಇನಿಷಿಯೇಟಿವ್ ಫಾರ್ ರಿಹಾಬಿಲಿಟೇಷನ್ ಆಂಡ್ ಪಾಲಿಯೇಟಿವ್ ಕೇರ್) ನೇತೃತ್ವದಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ವಿಶ್ರಾಂತಿ ಕೇಂದ್ರವನ್ನು ತೆರೆಯಲಾಗಿದೆ.
ಕಣ್ಣೂರು ಜಿಲ್ಲೆಯ ಬಕ್ಕಳಂ ನೆಲ್ಲಿಯೋಡ್ ಮತ್ತು ಮುಯುಪಿಲಂಗಾಡು ಎಂಬಲ್ಲಿ ವಿಶ್ರಾಂತಿ ಕೇಂದ್ರ ಕಾರ್ಯಾಚರಿಸುತ್ತಿದೆ. ಮಂಡಲ ವಿಳಕ್ಕು ಮತ್ತು ಮಕರ ಜ್ಯೋತಿಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಅಂತಾರಾಜ್ಯಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುವವರೂ ಸೇರಿದಂತೆ ಭಕ್ತರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಮುಯುಪಿಲಂಗಾಡ್ ಶ್ರೀ ಕುರುಂಭ ಭಗವತಿ ಕ್ಷೇತ್ರ ಸಮೀಪದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ವಿಶ್ರಾಂತಿ ಕೇಂದ್ರ ಕಾರ್ಯಾಚರಿಸಲಿದೆ. ಐದು ಹೊತ್ತು ಆಹಾರ, ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಅಷ್ಟೇ ಅಲ್ಲ, ಅಲೋಪತಿ, ಆಯುರ್ವೇದ, ಹೋಮಿಯೋ ಚಿಕಿತ್ಸಾ ಕ್ಲಿನಿಕ್ ಗಳನ್ನೂ ತೆರೆಯಲಾಗಿದೆ. ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಮತ್ತು ಸ್ವಯಂ ಸೇವಕರು ಇಲ್ಲಿಗೆ ಆಗಮಿಸುವ ಅಯ್ಯಪ್ಪ ಭಕ್ತರಿಗೆ ಸಹಾಯಕ್ಕೆ ಸದಾ ಸಿದ್ಧರಾಗಿರುತ್ತಾರೆ.
ಬಕ್ಕಳಂನಲ್ಲಿ ಕಳೆದ ಮೂರು ವರ್ಷಗಳಿಂದ ಐಆರ್ ಪಿಸಿ ನೇತೃತ್ವದಲ್ಲಿ ವಿಶ್ರಾಂತಿ ಕೇಂದ್ರ ಕಾರ್ಯಾಚರಿಸುತ್ತಿದೆ. ಮುಯುಪ್ಪಿಲಂಗಾಡ್ ನಲ್ಲಿ ಈ ಬಾರಿ ಹೊಸತಾಗಿ ವಿಶ್ರಾಂತಿ ಕೇಂದ್ರ ಆರಂಭಿಸಲಾಗಿದೆ. ಪಾಪಿನಿಶ್ಸೇರಿ ಎಂಬಲ್ಲಿ ಹೊಸ ಮೇಲ್ಸೇತುವೆ ಉದ್ಘಾಟನೆಗೊಂಡ ಬಳಿಕ ಈ ಮಾರ್ಗದಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಮುಯುಪ್ಪಿಲಂಗಾಡ್ ನಲ್ಲಿ ಹೊಸ ವಿಶ್ರಾಂತಿ ಕೇಂದ್ರ ತೆರೆಯಲಾಗಿದೆ.
ಬಕ್ಕಳಂನಲ್ಲಿನ ಕೇಂದ್ರಕ್ಕೆ ಕಳೆದ ವರ್ಷ ಒಂದೂವರೆ ಲಕ್ಷಕ್ಕೂ ಮಿಕ್ಕಿ ಭಕ್ತರು ಆಗಮಿಸಿ ವಿಶ್ರಾಂತಿ ಪಡೆದಿದ್ದರು ಎಂದು ಐಆರ್ ಪಿಸಿ ಮಾರ್ಗದರ್ಶಕ ಸಮಿತಿ ಅಧ್ಯಕ್ಷ ಪಿ.ಜಯರಾಜನ್ ತಿಳಿಸಿದ್ದಾರೆ.












Click it and Unblock the Notifications