8 ಕೋಟಿ ಸಸಿ ನೆಡುವ ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ
ಮಂಗಳೂರು, ಜೂನ್ 21 : ಕರ್ನಾಟಕ ಸರ್ಕಾರದ 'ಕೋಟಿ ವೃಕ್ಷ ಆಂದೋಲನ'ಕ್ಕೆ ಚಾಲನೆ ಸಿಕ್ಕಿದೆ. ಜೂನ್ 20ರಿಂದ ಹತ್ತು ದಿನಗಳ ಕಾಲ ರಾಜ್ಯಾದ್ಯಂತ ಈ ಅಭಿಯಾನ ನಡೆಯಲಿದ್ದು, ಒಟ್ಟು 8 ಕೋಟಿ ಗಿಡಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿದರು. [ಒಂದು ಗಿಡ ನೆಟ್ಟರೆ 300 ರೂ. ತರಕಾರಿ, ಹಣ್ಣು ಉಚಿತ!]

ನಂತರ ಮಾತನಾಡಿದ ಸಚಿವರು, 'ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ. ಆದ್ದರಿಂದ, ಪ್ರತಿಯೊಬ್ಬರು ಮರ ಬೆಳೆಸಿ ಪಾಪದಿಂದ ಮುಕ್ತರಾಗಬೇಕು . ಮರಗಳು ನಾಶವಾದರೆ ಪ್ರಕೃತಿ ನಾಶವಾದಂತೆ. ಪ್ರಸಕ್ತ ದಿನಗಳಲ್ಲಿ ಜಾಗತಿಕ ತಾಪಮಾನವು ಏರುತ್ತಿದ್ದು, ಹವಾಮಾನ ವೈಪರೀತ್ಯವೂ ನಡೆಯುತ್ತಿದೆ' ಎಂದು ಹೇಳಿದರು. [ಜೀತ್ ಮಿಲನ್ ಅವರ ಸಾರ್ಥಕ ಸೇವೆಗೆ ಸಲಾಂ]
'ಕಳೆದ ಬಾರಿ ಕುಡಿಯುವ ನೀರಿನ ಬವಣೆಯನ್ನು ನಾವು ಎದುರಿಸಿದ್ದೇವೆ. ಕಾಡಿನಿಂದಲೇ ಜೀವ ಮೂಲ ದೊರೆಯುವುದರಿಂದ ಕಾಡುಗಳ ಸಂರಕ್ಷಣೆ ಅಗತ್ಯವಾಗಿದೆ. ಸಾರ್ವಜನಿಕರೂ ಮರಗಳನ್ನು ಉಳಿಸುವಲ್ಲಿ ಕೈ ಜೋಡಿಸಬೇಕಾಗಿದ್ದು, ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಈ ಪ್ರಕ್ರಿಯೆ ನಡೆಯಬೇಕು' ಎಂದರು. [15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?]
ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾದ ವನಮಹೋತ್ಸವ ಕಾರ್ಯಕ್ರಮದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಅವರು, ಈ ಮೂಲಕ ಜನ ಸಾಮಾನ್ಯರಿಗೂ ಪ್ರಚೋದನೆ ನೀಡುವ ಕೆಲಸವಾಗಬೇಕು ಎಂದರು.












Click it and Unblock the Notifications