ಮಂಗಳೂರು: ಎಸ್ಐಗೆ ಕಪಾಳಮೋಕ್ಷ ಮಾಡಿದ ಪೇದೆ ವರ್ಗಾವಣೆ
ಮಂಗಳೂರು, ಸೆಪ್ಟೆಂಬರ್ 27 : ಎಸ್ಐ ಮತ್ತು ಕಾನ್ ಸ್ಟೆಬಲ್ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯ ಠಾಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪುತ್ತೂರಿನ ಸಂಪ್ಯ ಠಾಣೆಯ ಎಸ್ಐ ಅಬ್ದುಲ್ ಖಾದರ್ ಹಾಗೂ ಇದೇ ಠಾಣೆಯ ಕಾನ್ ಸ್ಟೆಬಲ್ ಸತೀಶ್ ನಾಯಕ್ ಕೆಲ ದಿನಗಳ ಹಿಂದೆ ಪರಸ್ಟರ ಹೊಡೆದಾಡುಕೊಂಡಿದ್ದಾರೆ. ಈ ವೇಳೆ ಎಸ್ಐ ಕೆನ್ನೆಗೆ ಕಾನ್ ಸ್ಟೆಬಲ್ ಎರಡೇಟು ಬಿಗಿದಿದ್ದಾರೆ ಎಂಬ ಸುದ್ದಿ ಸದ್ಯ ಪುತ್ತೂರಿನಾದ್ಯಂತ ಹರಡಿದೆ.
ಎಸ್ಐ ಅಬ್ದುಲ್ ಖಾದರ್ ಪೇದೆ ಸತೀಶ್ ನಾಯಕ್ ಎಂಬವರಿಗೆ ನಿರಂತರ ಕಿರುಕುಳ ನೀಡುತ್ತಿದ್ದರಂತೆ. ಅಲ್ಲದೆ ಹಲವು ಬಾರಿ ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸಿ ಪೇದೆಗೆ ನಿಂದಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಇದರಿಂದ ಸಾಕಷ್ಟು ಬೇಸತ್ತಿದ್ದ ಪೇದೆ ಸತೀಶ್ ನಾಯಕ್ ಎಸ್ ಐ ಖಾದರ್ ಠಾಣೆಗೆ ಬಂದಿದ್ದೇ ತಡ ಅವರ ಕಾಲರ್ ಹಿಡಿದು ಕೆನ್ನೆಗೆ ಬಾರಿಸಿದ್ದಾರೆ. ಅಲ್ಲದೆ ಈ ಸುದ್ದಿ ಪುತ್ತೂರು ತಾಲೂಕಿನ ಪೊಲೀಸ್ ಠಾಣೆಗಳಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ನಡುವೆ ಕೆನ್ನೆಗೆ ಏಟು ಬಿದ್ದ ತಕ್ಷಣ ಎಸ್ಐ ಖಾದರ್ ಅವರು ಕೂಡ ಪೇದೆ ಸತೀಶ್ ನಾಯ್ಕ್ ಮೇಲೆ ಬಿದ್ದು ಏಟು ಕೊಟ್ಟಿದ್ದಾರೆ ಎನ್ನಲಾಗಿದ್ದು ಠಾಣೆಯಲ್ಲಿ ಇಬ್ಬರು ನೆಲದ ಮೇಲೆ ಬಿದ್ದು ಕಿತ್ತಾಡಿಕೊಂಡಿದ್ದಾರೆ.
ಈ ನಡುವೆ ಘಟನೆಯ ಬಳಿಕ ಎಸ್ಐ ಖಾದರ್ ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಅದರಂತೆ ಪೇದೆ ಸತೀಶ್ ನಾಯಕರನ್ನು ತಕ್ಷಣದಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹೀಗಾಗಿ ಈ ವಿಚಾರ ಹೆಚ್ಚು ಸುದ್ದಿಯಾಗದೆ ಠಾಣೆಯ ಅಂಗಳದಲ್ಲಿ ಇದ್ದರೂ ಇದೀಗ ಇಡೀ ತಾಲ್ಲೂಕಿನಲ್ಲಿ ಈ ಸುದ್ದಿ ವೈರಲ್ ಆಗಿದೆ.