ವಿದೇಶದಲ್ಲಿ 'ಸೇವ್ ಶಬರಿಮಲೆ' ಆರಂಭ: ರಸ್ತೆಗಿಳಿದು ಪ್ರತಿಭಟಿಸಿದ ಅಯ್ಯಪ್ಪ ಭಕ್ತರು
Recommended Video

ಮಂಗಳೂರು, ಅಕ್ಟೋಬರ್. 08: ಶರಬರಿಮಲೆ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳು ಆರಂಭವಾಗಿವೆ . ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯತೊಡಗಿದೆ.
ಶರಬರಿಮಲೆ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ್ದ ಪಿಣರಾಯಿ ವಿಜಯನ್ ನೇತೃತ್ವ ಈಗ ಪೇಚಿಗೆ ಸಿಲುಕಿದ್ದು, ಶಬರಿಮಲೆ ಬಿಕ್ಕಟ್ಟು ಶಮನಕ್ಕೆ ಕೇರಳ ಸರಕಾರದ ಪ್ರಯತ್ನಗಳನ್ನು ಮುಂದುವರೆಸಿದೆ.
ಈ ನಡುವೆ ವಿದೇಶದಲ್ಲೂ ಪ್ರತಿಭಟನೆಗಳು ಆರಂಭವಾಗಿದ್ದು, ವಿದೇಶದ ನೆಲದ ಮೇಲೂ ಸ್ವಾಮಿ ಶರಣಂ ಭಜನೆ ಕೇಳಿಬರತೊಡಗಿದೆ. ಆಸ್ಟ್ರೇಲಿಯಾದಲ್ಲಿ 'ಸೇವ್ ಶಬರಿಮಲೆ ' ಪ್ರತಿಭಟನೆ ಆರಂಭವಾಗಿದೆ . ಅಯ್ಯಪ್ಪ ವ್ರತಧಾರಿಗಳು ಧರಿಸುವ ಕರಿ ವಸ್ತ್ರಧರಿಸಿದ ನೂರಾರು ಅಯ್ಯಪ್ಪ ಭಕ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ರಸ್ತೆ ಬದಿ ಪ್ಲೆಕಾರ್ಡ್ ಹಾಗು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರುವ ಆಸ್ಟ್ರೇಲಿಯಾದ ಅಯ್ಯಪ್ಪ ಸ್ವಾಮಿ ಭಕ್ತರು, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿದ್ದಾರೆ.
ಈ ಕೂಡಲೇ ಕೇರಳ ಸರಕಾರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ...

ವಿಶ್ವದ ಇತರ ದೇಶಗಳಿಗೆ ಹಬ್ಬಲಿದೆ!
ವಿದೇಶದಲ್ಲೂ ಸಾವಿರಾರು ಅಯ್ಯಪ್ಪ ಸ್ವಾಮಿ ಭಕ್ತರಿದ್ದು, ಅವರು ಪ್ರತಿವರ್ಷ ಮಕರ ಜ್ಯೋತಿಯ ಸಂದರ್ಭದಲ್ಲಿ ಶಬರಿಮಲೆಗೆ ಬರುತ್ತಾರೆ. ಅಂದಹಾಗೆ ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ 'ಸೇವ್ ಶಬರಿಮಲೆ' ಪ್ರತಿಭಟನೆ ವಿಶ್ವದ ಇತರ ದೇಶಗಳಿಗೆ ಹಬ್ಬಲಿದೆ ಎಂದು ವಿಮರ್ಶಿಸಲಾಗಿದೆ.
ವಿದೇಶದಲ್ಲಿ ಪ್ರತಿಭಟನೆಗಳು ಆರಂಭಿಸಿ ಕೇರಳ ಸರಕಾರದ ಹಾಗೂ ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರಲು ಯತ್ನಿಸಲಾಗುತ್ತಿದೆ. ಇದರಿಂದ ಕೇರಳ ಸರಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮತ್ತಷ್ಟು ಒತ್ತಡಕ್ಕೆ ಸಿಲುಕಿದೆ.

ಸಂಕಷ್ಟಕ್ಕೆ ಸಿಲುಕಿದ ಕೇರಳ ಸರ್ಕಾರ
ಶಬರಿಮಲೆ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಕರೆದಿರುವ ಸಂಧಾನ ಸಭೆಯಲ್ಲಿ ಭಾಗವಹಿಸಲು ಶಬರಿಮಲೆ ದೇವಾಲಯದ ತಂತ್ರಿ ಕುಟುಂಬ ಮತ್ತು ರಾಜ ಮನೆತನಗಳು ನಿರಾಕರಿಸಿವೆ.
ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಕೇರಳ ಸರಕಾರ ಸಿದ್ದವಿಲ್ಲದಿದ್ದಾಗ ಸರಕಾರದೊಂದಿಗೆ ಸಂಧಾನ ಮಾತುಕತೆಗೆ ಭಾಗವಹಿಸಿ ಪ್ರಯೋಜನವಿಲ್ಲ ಎಂದು ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇರಳ ಸರಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಪ್ರತಿಭಟನೆ ನಡೆಸಲು ತೀರ್ಮಾನ
ಕೇರಳ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಶಬರಿಮಲೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆಗಳು ಅರಂಭವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಪ್ರತಿಭಟನೆಗೆ ಸಿದ್ಧತೆ ಜೋರಾಗಿದೆ. ಮಂಗಳೂರಿನಲ್ಲೂ ಬೃಹತ್ ಪ್ರತಿಭಟನೆಗೆ ವೇದಿಕೆ ಸಿದ್ಧವಾಗಿದೆ.
ಮಂಗಳೂರಿನ ಸಂಘನಿಕೇತನದಲ್ಲಿ ಶನಿವಾರದಂದು ನಡೆದ ಹೋರಾಟದ ಪೂರ್ವಭಾವಿ ಸಭೆ ನಡೆದಿದೆ. ಮೊದಲ ಹಂತವಾಗಿ ಇದೇ ಬರುವ ಅಕ್ಟೋಬರ್ 9 ರಂದು ಸಂಜೆ ಕದ್ರಿ ಮೈದಾನದಲ್ಲಿ ಮಹಿಳೆಯರು ಸೇರಿದಂತೆ ಸಹಸ್ರಾರು ಜನ ಸೇರಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಶ್ರೀ ಕ್ಷೇತ್ರ ಕದ್ರಿಗೆ ತೆರಳಿ ಪ್ರಾರ್ಥನೆ
ಸಭೆಯ ಬಳಿಕ ಭಜನೆಯ ಮೂಲಕ ಶ್ರೀ ಕ್ಷೇತ್ರ ಕದ್ರಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಪಾಲ್ಗೊಂಡ ವಿವಿಧೆಡೆಯ ಅಯ್ಯಪ್ಪಸ್ವಾಮಿ ಭಕ್ತರು, ಸಂಘಟನೆಗಳ ಪ್ರಮುಖರು ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಪುಣ್ಯ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಿ ಆ ಬಳಿಕ ಕದ್ರಿ ಮೈದಾನದಲ್ಲಿ ಸೇರುವಂತೆ ಸೂಚನೆ ನೀಡಲಾಗಿದೆ .












Click it and Unblock the Notifications