ಆಟೋ ಚಾಲಕರ ಮೇಲೆ ಹಲ್ಲೆಗೆ ಮುಂದಾದ ಸಚಿವ ಜೈನ್
ಮಂಗಳೂರು, ಡಿ. 30 : ಪ್ರತಿಭಟನೆ ನಡೆಸುತ್ತಿದ್ದ ಆಟೋ ಚಾಲಕರ ಮೇಲೆ ಹಲ್ಲೆ ಮಾಡಲು ಮೀನುಗಾರಿಕಾ ಸಚಿವ ಅಭಯ್ ಚಂದ್ರ ಜೈನ್ ಯತ್ನಿಸಿದ ಘಟನೆ ಮಂಗಳೂರು ಸಮೀಪದ ಮುಲ್ಕಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಸಚಿವರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರು ಇದನ್ನು ಖಂಡಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ರಸ್ತೆಗಳು ಹದಗೆಟ್ಟಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ ಎಂದು ಆಟೋ ಚಾಲಕರು ಮತ್ತು ವಿವಿಧ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವ ಅಭಯ್ ಚಂದ್ರ ಜೈನ್ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ಇದರಿಂದ ಕೆರಳಿದ ಸಚಿವರು ಪ್ರತಿಭಟನೆ ನಡೆಸುತ್ತಿದ್ದವರ ಬಳಿಗೆ ಬಂದರು. ಪ್ರತಿಭಟನೆ ನಡೆಸುತ್ತಿದ್ದ ಆಟೋ ಚಾಲಕರ ಮೇಲೆ ಹಲ್ಲೆ ಮಾಡಲು ಮುಂದಾದರು. ಒಂದು ಹಂತದಲ್ಲಿ ಸಚಿವರು ಮತ್ತು ಪ್ರತಿಭಟನಾಕಾರರು ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತು.
ಸ್ಥಳದಲ್ಲಿ ಪರಿಸ್ಥಿತಿ ಕೈ ಮೀರುವ ಹಂತ ತಲುಪಿದ್ದರಿಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಚಿವರ ಭದ್ರತಾ ಸಿಬ್ಬಂದಿ ಜೈನ್ ಅವರನ್ನು ಸಮಾಧಾನ ಪಡಿಸಿ ಸ್ಥಳದಿಂದ ಕರೆದುಕೊಂಡು ಹೋದರು. ರಸ್ತೆ ದುರಸ್ಥಿ ಮಾಡಿಸಿ ಎಂದು ಹೇಳಿದ ಆಟೋ ಚಾಲಕರ ಮೇಲೆಯೇ ಹಲ್ಲೆಗೆ ಮುಂದಾದ ಸಚಿವರ ಗುಂಡಾ ವರ್ತನೆಯನ್ನು ಆಟೋ ಚಾಲಕರು ಖಂಡಿಸಿ ಸ್ಥಳದಲ್ಲಿ ಪ್ರತಿಭಟನೆ ಮುಂದುವರೆಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಪ್ರತಿಭಟನಾನಿರತರ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನಾ ನಿರತೆ ಸಮಸ್ಯೆಯನ್ನು ಆಲಿಸದೇ, ಸ್ಥಳದಿಂದ ಸಚಿವರು ತೆರಳಿದ್ದಕ್ಕೆ ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜಿಲ್ಲೆಯ ವಿವಿಧ ಸಂಘಟನೆಗಳು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿವೆ.












Click it and Unblock the Notifications