ಮೋದಿ ಪರ ಘೋಷಣೆ ಹೆಚ್ಚಾಗುತ್ತಿದ್ದಂತೇ ಸಿಟ್ಟಿನಿಂದ ಕಾಲ್ಕಿತ್ತ ಸಚಿವ ರೈ
ಮಂಗಳೂರು, ಮೇ 7: ಕಾಂಗ್ರೆಸ್ ಮುಖಂಡರು ಭಾಗವಹಿಸುವ ಸಮಾವೇಶ/ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೇಳಿಬರುವುದು ಹೊಸದೇನಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ ನಂತರ ಅರಣ್ಯ ಸಚಿವ ರಮಾನಾಥ ರೈ ಕೂಡಾ 'ಮೋದಿ' ಬಿಸಿ ಎದುರಿಸಬೇಕಾಗಿ ಬಂದಿದೆ.
ಭಾನುವಾರ ರಾತ್ರಿ (ಮೇ 6) ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿನ ಮಲರಾಯಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಸಚಿವ ರಮಾನಾಥ ರೈ ಆಗಮಿಸಿದ್ದರು. ಅವರು ಕಾರಿನಲ್ಲಿ ಇಳಿಯುತ್ತಿದ್ದಂತೇ ಅಲ್ಲಿದ್ದ ಯುವಕರ ಗುಂಪು ಮೋದಿ ಪರ ಘೋಷಣೆ ಕೂಗಲಾರಂಭಿಸಿದರು.
ಸ್ವಲ್ಪಹೊತ್ತು ಅಲ್ಲೇ ಇದ್ದರೂ ಯುವಕರ ಮೋದಿ ಘೋಷಣೆ ಮುಂದುವರಿಯುತ್ತಲೇ ಇತ್ತು, ಇದರಿಂದ ಆಕ್ರೋಶಕ್ಕೆ ಒಳಗಾದ ರಮಾನಾಥ ರೈ, ಯುವಕರನ್ನು ದಿಟ್ಟಿಸಿ ನೋಡಿದರು. ಆಗ, ಯವಕರ ಮೋದಿ ಘೋಷಣೆ ತಾರಕಕ್ಕೇರಿತು. ಇದರಿಂದ ತೀವ್ರ ಮುಜುಗರಕ್ಕೀಡಾದ ಸಚಿವ ರೈ, ಕಾರು ಹತ್ತಿ ಹಾಗೇ ವಾಪಸ್ ಹೋದರು.

ಸಚಿವರ ಮುಂದೆ ಮೋದಿ ಘೋಷಣೆಯ ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಎರಡು ವರ್ಷಗಳ ಹಿಂದೆ ಕರೋಪಾಡಿ ಪಂಚಾಯತಿ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡರೂ ಆಗಿದ್ದ ಜಲೀಲ್ ಕರೋಪಾಡಿ ಎನ್ನುವ ಮುಖಂಡನ ಕೊಲೆ ನಡೆದಿತ್ತು.
ರಮಾನಾಥ ರೈ ಆಪ್ತನಾಗಿದ್ದ ಜಲೀಲ್ ಕೊಲೆ ಪ್ರಕರಣದ, ನೈಜ ಆರೋಪಿಗಳನ್ನು ಪತ್ತೆಹಚ್ಚಲು ಸಹಕರಿಸಿಲ್ಲವೆಂಬ ಆರೋಪವೂ ಆ ಸಂದರ್ಭದಲ್ಲಿ ಸಚಿವ ರೈ ವಿರುದ್ದ ಕೇಳಿಬಂದಿತ್ತು. ಸ್ಥಳೀಯ ಮುಸ್ಲಿಮರು ಕೂಡ ಈ ಹಿಂದೆ ರಮಾನಾಥ ರೈಗೆ ಘೆರಾವ್ ಹಾಕಿದ್ದ ಘಟನೆ ನಡೆದಿತ್ತು.
ಇದೀಗ ಧಾರ್ಮಿಕ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ರಮಾನಾಥ ರೈ ವಿರುದ್ಧ ಮೋದಿ ಘೋಷಣೆ ಕೇಳಿ ಬಂದಿದೆ. ಚುನಾವಣೆಯ ಸಂದರ್ಭದಲ್ಲಿ ಈ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಶನಿವಾರ (ಮೇ 5) ರಾತ್ರಿ ಬಾದಾಮಿಯಲ್ಲಿ ಪ್ರಚಾರದಲ್ಲಿದ್ದ ಮುಖ್ಯಮಂತ್ರಿಗಳಿಗೂ ಮೋದಿ ಘೋಷಣೆಯ ಬಿಸಿತಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications