ಚೇತನ್ ಕಾಂತಾರದಂತ ಚಿತ್ರವನ್ನು ಮಾಡಿ ತೋರಿಸಲಿ: ದೈವಾರಾಧಕರ ಕಿಡಿ
ಮಂಗಳೂರು, ಅಕ್ಟೋಬರ್ 19: ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದು ನಟ ಚೇತನ್ ಕುಮಾರ್ ಅಹಿಂಸಾ ಅವರ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ. ನಟ ಚೇತನ್ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಕರಾವಳಿಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಕನ್ನಡ ಚಿತ್ರರಂಗದ ನಟ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಚಿತ್ರ ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲೂ ಧೂಳೆಬ್ಬಿಸಿರುವ ಕಾಂತಾರ ಈಗಾಗಲೇ 100ಕೋಟಿ ಕ್ಲಬ್ ಸೇರಿದೆ. ಎಲ್ಲಾ ಬಗೆಯ ಪ್ರೇಕ್ಷಕರನ್ನು ಮೆಚ್ಚಿಸುವ ಮೂಲಕ ಕಾಂತಾರ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು.
Breaking: ಅ.25 ರಂದು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸೇವೆ ಬಂದ್
ಕರಾವಳಿ ಸಂಸ್ಕೃತಿ ಹಾಗೂ ಆಚರಣೆಗಳಾದ ಭೂತಾರಾಧನೆಯನ್ನು ಕಥಾವಸ್ತುವನ್ನಾಗಿಸಿಕೊಂಡು ಮಾಡಿರುವ ಕಾಂತಾರ ಚಿತ್ರಕ್ಕೆ ಕರಾವಳಿ, ಕರ್ನಾಟಕ ಮಾತ್ರವಲ್ಲದೇ, ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಕನ್ನಡ ಚಿತ್ರರಂಗದ ನಟ ಚೇತನ್ ಅಹಿಂಸಾ ಚಿತ್ರದ ಬಗ್ಗೆ ನೀಡಿದ ವಿಮರ್ಶೆ ವಿವಾದಕ್ಕೆ ಕಾರಣವಾಗಿದೆ.
ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿಲ್ಲ ಎಂದ ನಟ
ಕಾಂತಾರ ಸಿನಿಮಾ ವೀಕ್ಷಿಸಿದ ನಟ ಚೇತನ್ ಅಹಿಂಸಾ ಚಿತ್ರದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಹಂಚಿಕೊಂಡಿದ್ದರು. 'ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದೆಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಅದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತಲೂ ಹಿಂದಿನದ್ದಾಗಿದೆ. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ಕೇಳುತ್ತೇವೆ," ಎಂದು ಬರೆದುಕೊಂಡಿದ್ದರು.
ನಾವು ಹಿಂದೂಗಳಲ್ಲ ಎಂದು ಚೇತನ್ ಹೇಗೆ ಹೇಳುತ್ತಾರೆ?
ನಟ ಚೇತನ್ ಅಹಿಂಸಾ ಹೇಳಿಕೆಗೆ ಸ್ವತಃ ದೈವ ನರ್ತಕರೂ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಕಿಡಿಕಾರಿದ್ದಾರೆ."ಚೇತನ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದು ಶೋಷಿತರ ಮೇಲಾಗುವ ತುಳಿತ ಎಂದು ಹೇಳುತ್ತೇನೆ. ದೈವಾರಾಧನೆ ಮಾಡುವ ನಲಿಕೆ, ಪಂಬಂದ, ಪರವ ಸಮುದಾಯವರು ಹಿಂದೂ ಧರ್ಮದವರೆಂದೇ ದಾಖಲೆಗಳಲ್ಲಿದೆ. ಇವರು ಯಾರು ನಮಗೆ ಸರ್ಟಿಫಿಕೇಟ್ ಕೊಡುವುದಕ್ಕೆ..? ನಾವು ಪ್ರಕೃತಿ ಆರಾಧಕರು. ಮತ್ತೆ ಹೇಗೆ ನಾವು ಹಿಂದೂಗಳಲ್ಲ ಎಂದು ಚೇತನ್ ಹೇಳುತ್ತಾರೆ. ನಟ ಚೇತನ್ಗೆ ಧೃತಿಗಟ್ಟಿರುವುದರಿಂದ ಅವರು ಆ ರೀತಿ ಹೇಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡದಿರಿ
"ದೈವರಾಧಾನೆಯ ಕೊಂಡಿಯಡಿಯಲ್ಲಿ 16 ಸಮುದಾಯಗಳು ಬರುತ್ತದೆ ಎಲ್ಲರೂ ಸಮಾನರೇ, ಅದು ಬಿಟ್ಟು ನಮ್ಮನ್ನು ಹೊರಗಿಡುವುದು ಅಕ್ಷಮ್ಯ ಅಪರಾಧ. ದೈವಾರಾಧನೆಯ ಸಂಧಿ ಪಾಡ್ದನಗಳಲ್ಲಿ ಶಿವ, ಪಾರ್ವತಿ, ವಿಷ್ಣುವಿನ ಉಲ್ಲೇಖವಿದೆ. ಇಷ್ಟೆಲ್ಲಾ ಇರುವಾಗ ಯಾಕೆ ನಮ್ಮನ್ನು ಹಿಂದೂ ಧರ್ಮದಿಂದ ಹೊರಗೆ ಇಡುತ್ತೀರಿ. ನಾನು 37 ವರ್ಷಗಳಿಂದ ದೈವಾರಾಧನೆಯನ್ನು ಮಾಡುತ್ತಿದ್ದೇನೆ. ದೈವಾರಾಧನೆಯನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿಯೇ ಹೇಳುತ್ತಿದ್ದೇನೆ. ಆದ್ದರಿಂದ ನಟ ಚೇತನ್ ಹೇಳಿಕೆ ತಪ್ಪು. ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡದಿರಿ" ಎಂದು ದಯಾನಂದ ಜಿ ಕತ್ತಲ್ ಸಾರ್ ಹೇಳಿದ್ದಾರೆ.
ಇದು ಹಿಂದೂ ಧರ್ಮ ಪ್ರತ್ಯೇಕಗೊಳಿಸುವ ಹುನ್ನಾರ
ಇನ್ನು ನಟ ಚೇತನ್ ಹೇಳಿಕೆಯನ್ನು ದೈವಾರಾಧನೆಯ ಮಧ್ಯಸ್ಥ ಶ್ರೀಕಾಂತ್ ಕೂಡಾ ಖಂಡಿಸಿದ್ದಾರೆ. "ಚೇತನ್ ಕುಮಾರ್ ಕಾಂತಾರದಂತ ಒಂದು ಅದ್ಭುತ ಚಿತ್ರವನ್ನು ಮಾಡಿ ತೋರಿಸಲಿ. ದೈವಾರಾಧನೆ ಹಿಂದೂ ಧರ್ಮದಿಂದ ಪ್ರತ್ಯೇಕ ಎನ್ನೋದನ್ನು ಚಿತ್ರದ ಮೂಲಕ ತೋರಿಸಲಿ. ಕಾಂತಾರದ ಪಬ್ಲಿಸಿಟಿ ಇಟ್ಟುಕೊಂಡು ತನ್ನ ಬೇಳೆ ಬೇಯಿಸಲು, ತನ್ನ ಐಡಿಯಾಲಜಿ ತುರುಕುವ ಅಗತ್ಯ ಇಲ್ಲ. ಬಹುಜನ ಸಮಾಜ ಎನ್ನುವ ನೀವು ಸರ್ಕಾರಿ ದಾಖಲೆಯಲ್ಲಿ ಹಿಂದೂ ಧರ್ಮ ಎಂದು ಬಳಸುತ್ತಿರಿ. ಹಿಂದೂ ಎನ್ನುವುದು ಜೀವನ ಪದ್ದತಿ ಎಂದು ನ್ಯಾಯಾಲಯವೇ ಹೇಳಿದೆ. ಹಿಂದೂ ಧರ್ಮ ಪ್ರತ್ಯೇಕಗೊಳಿಸುವ ಹುನ್ನಾರದ ವಿರುದ್ಧ ನಾವೆಲ್ಲ ಒಂದಾಗಬೇಕು" ಎಂದು ಶ್ರೀಕಾಂತ್ ಹೇಳಿದ್ದಾರೆ.
ಇನ್ನು"ಪ್ರಕೃತಿಯ ಮೂಲ ಆರಾಧನೆಯಿಂದ ಬೆಳೆದು ಬಂದು ಲಕ್ಷಾಂತರ ವರ್ಷಗಳ ಇತಿಹಾಸ ಇರುವ ತೌಳವ ಜನಪದ ಆಚರಣೆಯಾಗಿದೆ. ನಮ್ಮಲ್ಲಿ ವೈವಿಧ್ಯತೆ ಇದೆ, ವೈರುದ್ಯ ಇಲ್ಲ. ದೈವದ ನೇಮೋತ್ಸವ ನಡೆಯುವಾಗ ಬ್ರಾಹ್ಮಣ ಸೇರಿದಂತೆ ಎಲ್ಲಾ ವರ್ಗಗಳಿಗೂ ದೈವಗಳು ವಿಶೇಷ ಸ್ಥಾನಮಾನ ಕಲ್ಪಿಸಿದೆ. ಇದು ತುಳುನಾಡಿನ ವಿಶೇಷತೆ" ಎಂದು ಶ್ರೀಕಾಂತ್ ಹೇಳಿದ್ದಾರೆ.
ಭಿಕ್ಷೆಯಿಂದ ಬಂದ 1ಲಕ್ಷ ರೂಪಾಯಿಯನ್ನು ಬಪ್ಪನಾಡು ಅನ್ನದಾನಕ್ಕೆ ನೀಡಿದ ವೃದ್ಧೆ