ಮೋದಿ ಭೇಟಿ ವೇಳೆ ಸಂಸದ ಕಟೀಲ್ ವಿರುದ್ಧ ಬೃಹತ್ ಜನಾಕ್ರೋಶಕ್ಕೆ ಸಿದ್ಧತೆ
ಮಂಗಳೂರು, ಆಗಸ್ಟ್ 23: ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ನವ ಮಂಗಳೂರು ಬಂದರಿನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಂಗಳೂರು ನಗರ ಹೊರವಲಯದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಮೋದಿ ಸ್ವಾಗತಕ್ಕೆ ಹಿಂದುತ್ವದ ಭದ್ರಕೋಟೆ ಸಜ್ಜಾದರೂ ಇದೇ ಮೊದಲ ಬಾರಿಗೆ ಸ್ವಾಗತದ ಜೊತೆಗೆ ಬದಲಾವಣೆಯ ಅಭಿಯಾನ ಜೋರಾಗಿದೆ.
ಬಿಜೆಪಿ ಕಾರ್ಯಕರ್ತರ ನೆಚ್ಚಿನ 'ಪೋಸ್ಟ್ ಕಾರ್ಡ್' ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ನೇರ ಅಭಿಯಾನಕ್ಕೆ ಕೈ ಹಾಕಿದೆ. ಮಹೇಶ್ ವಿಕ್ರಂ ಹೆಗ್ಡೆ ನೇತೃತ್ವದ ಪೋಸ್ಟ್ ಕಾರ್ಡ್ ಈ ಕುರಿತ ಪೋಸ್ಟ್ ಹಾಕಿದೆ.
ಕೊಡಗು ಜಿಲ್ಲೆಯ ನಿಷೇಧಾಜ್ಞೆ ಜಿಲ್ಲಾಡಳಿತದ ತೀರ್ಮಾನ: ಗೃಹ ಸಚಿವ ಆರಗ ಜ್ಞಾನೇಂದ್ರ
ನಾವು ಮಂಗಳೂರಿಗರು ದೇಶದಲ್ಲೇ ಹಿಂದುತ್ವದ ಭದ್ರಕೋಟೆಯಾಗಿ ಕರಾವಳಿಯನ್ನು ಕಟ್ಟಿಕೊಂಡವರು, ನಮಗೆ ಹಿಂದುತ್ವದ ಜೊತೆಗೆ ಮಂಗಳೂರಿನ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವ ನಾಯಕನ ಅಗತ್ಯವಿದೆ. ಸೆಪ್ಟೆಂಬರ್ 2-ಮೋದಿಯನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೊದಲು ನಮ್ಮ ಜಿಲ್ಲೆಯ ಸಂಸದರ ಬದಲಾವಣೆಯ ಕೂಗು ಕೇಳಿಬರಲಿ ಎಂದು ಪೋಸ್ಟ್ ಹಾಕಲಾಗಿದೆ.
ಇನ್ನು 'ನಮೋ ಕರುನಾಡು' ಎನ್ನುವ ಪೇಜ್ ಕೂಡಾ ಈ ಬಗ್ಗೆ ಪೋಸ್ಟ್ ಹಾಕಿದೆ. ತುಳುವರೇ ಮೋದಿ ಮಂಗಳೂರಿಗೆ ಬರುತ್ತಿದ್ದಾರೆ. ವಿಶ್ವ ನಾಯಕನನ್ನು ಸ್ವಾಗತಿಸುವ ಜೊತೆಗೆ ದುರ್ಬಲ ಸಂಸದ, ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ಒತ್ತಾಯಿಸೋಣ. ನಿಮಗೆ ಗೊತ್ತಿರುವ ಎಲ್ಲಾ ಭಾಷೆಯಲ್ಲಿ ಟ್ವಿಟ್ಟರ್, ಫೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಮೋದಿಜೀಯನ್ನು ಒತ್ತಾಯಿಸೋಣ. ಮಂಗಳೂರನ್ನು ದೇಶದ ನಂಬರ್ ಒನ್ ಪ್ರವಾಸೋದ್ಯಮ ಸ್ಥಳವನ್ನಾಗಿ ಪರಿವರ್ತಿಸಲು ಸಂಸದರ ಪರಿವರ್ತನೆ ಅತ್ಯಗತ್ಯವಿದೆ. ನಮ್ಮ ಒಂದು ಮನವಿ ಯಾವ ರೀತಿಯ ಬದಲಾವಣೆಗೆ ಕಾರಣವಾಗಲಿದೆ ನೀವೇ ಯೋಚಿಸಿ ಎಂದು ಫೋಸ್ಟ್ ಮಾಡಲಾಗಿದೆ.
ರಂಗುಪಡೆದ ಚುನಾವಣೆ ವರ್ಷದ ಗಣೇಶೋತ್ಸವ; ಗಣೇಶ ಮೂರ್ತಿ ವಿತರಣೆಗೆ ರಾಜಕೀಯ ಪಕ್ಷಗಳ ಪೈಪೋಟಿ
ಈ ಪೋಸ್ಟ್ ಗಳು ದ.ಕ ಬಿಜೆಪಿ ವಲಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಠಿಸಿದೆ. ಮೋದಿ ಆಗಮನ ವೇಳೆ ಸಂಸದ ನಳಿನ್ ಕುಮಾರ್ ವಿರುದ್ಧದ ಕಾರ್ಯಕರ್ತರ ಆಕ್ರೋಶ ಸ್ಫೋಟ ಗೊಳ್ಳುವ ಸಾಧ್ಯತೆಗಳಿವೆ. ಪ್ರವೀಣ್ ನೆಟ್ಟಾರ್ ಅವರ ಪಾರ್ಥೀವ ಶರೀರದ ಮೆರವಣಿಗೆ ವೇಳೆ ಬಿಜೆಪಿ ಕಾರ್ಯಕರ್ತರೇ ನಳಿನ್ ಕುಮಾರ್ ಕಾರ್ ಅನ್ನು ಅಲುಗಾಡಿಸಿ ಟಯರ್ ಪಂಚರ್ ಮಾಡಿ ಅಕ್ರೋಶ ವ್ಯಕ್ತಪಡಿಸಿದ್ದರು.
ಚುನಾವಣೆಗೆ ಸಿದ್ಧ ಎಂದ ಸಂದೇಶ ರವಾನಿಸಲು ಮೋದಿ ಆಗಮನ
ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, ತಾವು ಸಿದ್ಧ ಎನ್ನುವ ಸಂದೇಶವನ್ನು ನೀಡಲು ಬಿಜೆಪಿ ಮುಂದಾಗಿದೆ. ಆ ನಿಟ್ಟಿನಲ್ಲಿ ಸೆಪ್ಟೆಂಬರ್ 2 ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶವನ್ನು ನಡೆಸುತ್ತಿದೆ. ಚುನಾವಣೆಗೆ ರಣಕಹಳೆಯನ್ನು ಕರಾವಳಿಯಿಂದಲೇ ಮೊಳಗಿಸಲು ಬಿಜೆಪಿ ಸಿದ್ಧತೆ ಮಾಡುವ ಹಂಬಲದಲ್ಲಿದೆ. ಅಲ್ಲದೆ ಇತ್ತೀಚಿನ ಕೆಲವು ಘಟನೆಗಳ ಬಳಿಕ ಬಳಿಕ ಸಿಟ್ಟಾಗಿರುವ ತನ್ನ ಕಾರ್ಯಕರ್ತರ ಸಮಾಧಾನ ಮಾಡಲು ಈ ಸಮಾವೇಶವನ್ನು ಬಳಸಿಕೊಳ್ಳುವ ಇರಾದೆಯಲ್ಲಿದೆ.
ಮಂಗಳೂರಿನ ಹೊರವಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶವನ್ನು ಆಯೋಜಿಸಲು ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ. ಇದೇ ವೇಳೆ ನಗರದ ಹೊರವಲಯ ಕೂಳೂರಿನಲ್ಲಿ ಪಕ್ಷದ ಕಾರ್ಯಕ್ರಮವನ್ನು ಆಯೋಜಿಸಲು ರಾಜ್ಯ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರಿಗೆ ಹೊಸ ಹುರುಪು ನೀಡಲು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ.
ಪ್ರವೀಣ್ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರಿಗೆ ಸನ್ಮಾನ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪ್ರಮುಖ ಪಾತ್ರವಹಿಸಿದ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಪೊಲೀಸ್ ಸಿಬ್ಬಂದಿಗೆ ಬಹುಮಾನ ನೀಡಿ ಗೌರವಿಸಿದ್ದಾರೆ. ಒಟ್ಟು 82 ಮಂದಿ ಸಿಬ್ಬಂದಿಗಳ ಈ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದರು.