ಕಣ್ಣೂರಿನಿಂದ ಮಂಗಳೂರಿಗೆ ನಡೆದುಕೊಂಡೇ ಬಂದ ತುಂಬು ಗರ್ಭಿಣಿ
ಮಂಗಳೂರು, ಏಪ್ರಿಲ್ 9: ತುಂಬು ಗರ್ಭಿಣಿಯೊಬ್ಬರು ಕೇರಳದ ಕಣ್ಣೂರಿನಿಂದ ಮಂಗಳೂರಿಗೆ ನಡೆದುಕೊಂಡೇ ಬಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ವಿಜಯಪುರ ಮೂಲದ ಗರ್ಭಿಣಿ ಸೇರಿದಂತೆ ಎಂಟು ಮಂದಿ ಕಾರ್ಮಿಕರು ಕೇರಳದ ಕಣ್ಣೂರಿನಿಂದ 142 ಕಿಲೋ ಮೀಟರ್ ನಡೆದುಕೊಂಡೇ ಬಂದಿದ್ದಾರೆ. ತುಂಬು ಗರ್ಭಿಣಿ ಹೀಗೆ ನಡೆದು ಬರುತ್ತಿದ್ದರೂ ಯಾರೂ ನೆರವಿಗೆ ಬಂದಿಲ್ಲ. ವಾಹನದ ವ್ಯವಸ್ಥೆಯನ್ನೂ ಯಾರೂ ಮಾಡಿಲ್ಲ. ಕೆಲವರು ಊಟ ನೀಡಿದ್ದಾರೆ, ಆದರೆ, ಕೆಲವೆಡೆ ಅದೂ ಸಿಗದೆ ಹಸಿವಿನಿಂದಲೇ ಪಾದಯಾತ್ರೆ ನಡೆಸಿದ್ದಾರೆ. ಸುಮಾರು 142 ಕಿ.ಮೀ. ಕಾಲ್ನಡಿಗೆಯ ಮೂಲಕವೇ ಕ್ರಮಿಸಿ ಕರ್ನಾಟಕ ತಲುಪಿದ್ದಾರೆ.
ಕಟ್ಟಡ ಕೆಲಸದ ಸಲುವಾಗಿ ಕೇರಳದ ಕಣ್ಣೂರಿಗೆ ವಿಜಯಪುರದ ಎಂಟು ಮಂದಿ ಕಾರ್ಮಿಕರು ಹೋಗಿದ್ದರು. ಲಾಕ್ ಡೌನ್ ಘೋಷಣೆಯಾದ ನಂತರ ಅಲ್ಲಿನ ಗುತ್ತಿಗೆದಾರ ಕಾರ್ಮಿಕರನ್ನು ಊರಿಗೆ ಹೋಗುವಂತೆ ತಿಳಿಸಿದ್ದ. ಎಂಟು ಮಂದಿಯೂ ನಿರ್ಗತಿಕರಾಗಿ ಕಳೆದ ಏಳು ದಿನಗಳಿಂದ ನಡೆದುಕೊಂಡು ಊರು ಸೇರುವ ಪ್ರಯತ್ನಕ್ಕೆ ಮುಂದಾಗಿ ಕರ್ನಾಟಕ ತಲುಪಿದ್ದಾರೆ.

ನಡಿಗೆಯಿಂದ ಗರ್ಭಿಣಿ ಸುಸ್ತಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications