ಪರ್ಯಾಯ ಹಿಂದೂ ಪಕ್ಷ ಹುಟ್ಟುಹಾಕಲು ನೀವೇ ಕಾರಣರಾಗುತ್ತೀರಿ: ಮುತಾಲಿಕ್ ಎಚ್ಚರಿಕೆ
ಮಂಗಳೂರು, ಜುಲೈ, 29: ಪ್ರವೀಣ್ ಹತ್ಯೆ ಹಿನ್ನೆಲೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ ಎನ್ನುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಬರದಂತೆ ನಿರ್ಬಂಧ ಹೇರಲಾಗಿತ್ತು. ಆದರೆ ಪ್ರವೇಶ ಗಡಿಭಾಗದಲ್ಲೇ ಕುಳಿತು ಮುತಾಲಿಕ್ ಪ್ರವೇಶ ನಿರ್ಬಂಧವನ್ನು ವಿರೋಧಿಸಿದ್ದಾರೆ.
ಕೋಮು ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದು ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಪ್ರವೇಶ ಮಾಡದಂತೆ ಸೂಚನೆ ನೀಡಿದ್ದರು. ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಹೊರಟಿದ್ದ ಅವರನ್ನು ಉಡುಪಿ-ಮಂಗಳೂರು ಗಡಿಭಾಗದ ಹೆಜಮಾಡಿಯಲ್ಲಿ ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಮೋದ್ ಮುತಾಲಿಕ್ ಅವರಿಗೆ ನಿನ್ನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಪ್ರವೇಶ ನಿರ್ಬಂಧ ವಿರೋಧಿಸಿ ಸ್ಥಳದಲ್ಲೇ ಕುಳಿತು ಮುತಾಲಿಕ್ ಪ್ರತಿಭಟನೆ ಮಾಡಿದ್ದರು. ವಿನಂತಿ ಮಾಡಿದರೂ ಕೂಡ ಪೊಲೀಸ್ ಅಧಿಕಾರಿಗಳು ಅವರನ್ನು ತಡೆದಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಮನೆಗೆ ನಾನು ಹೊರಟಿದ್ದೆ. ಹೆಜಮಾಡಿಯಲ್ಲಿ ನನ್ನನ್ನ ಪೊಲೀಸರು ತಡೆದರು. ದಕ್ಷಿಣ ಕನ್ನಡ ಡಿಸಿ ಕೊಟ್ಟ ನಿಷೇದಾಜ್ಞೆ ಪತ್ರವನ್ನು ನನಗೆ ತೋರಿಸಿದರು ಎಂದರು.
ಹಿಂದುತ್ವಕ್ಕಾಗಿ ಚುನಾವಣೆ:
"ನೀವು ಮುತಾಲಿಕ್ನನ್ನು ಬ್ಯಾನ್ ಮಾಡುತ್ತಿಲ್ಲ. ಹಿಂದುತ್ವವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದೂ ವಿರೋಧಿ ಕಾಂಗ್ರೆಸ್ ಬ್ಯಾನ್ ಮಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಬಿಜೆಪಿಯವರು ಹಿಂದೂ ವಿರೋಧಿಗಳಾಗಿದ್ದಾರೆ. ನೂರಾರು ಜನ ರಾಜೀನಾಮೆ ಕೊಟ್ಟು ನಿಮ್ಮ ಮುಖಕ್ಕೆ ಉಗಿದಿದ್ದಾರೆ. ನಾನು ಯಾವುದೇ ಸಮಾವೇಶ ಸಭೆಗೆ ಹೋಗುತ್ತಿಲ್ಲ. ಸಾಂತ್ವನ ಹೇಳಲು ಹೋಗುತ್ತಿದ್ದೇನೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರ್ಯಾಯ ಹಿಂದೂ ಪಕ್ಷ ಹುಟ್ಟುಹಾಕಲು ನೀವೇ ಕಾರಣರಾಗುತ್ತೀರಿ. ಹಿಂದೂ ರಾಷ್ಟ್ರಕ್ಕಾಗಿ, ಹಿಂದುತ್ವಕ್ಕಾಗಿ ಕಾರ್ಯಕರ್ತರು ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಧಿಕ್ಕರಿಸುತ್ತಾರೆ. ಹಿಂದುತ್ವ ವಿಚಾರದಲ್ಲಿ ನಾನು ಯಾವುದೇ ಕಂಪ್ರೋಮೈಸ್ ಮಾಡಿಕೊಳ್ಳಲ್ಲ. ಬೆಳ್ಳಾರೆಗೆ ಹೋಗಲು ಎಲ್ಲರಿಗೂ ಅವಕಾಶವಿದ್ದು, ನನಗೆ ಮಾತ್ರ ಅವಕಾಶ ಯಾಕಿಲ್ಲ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸುವುದರ ಮೂಲಕ ಕಿಡಿಕಾರಿದರು.
ಬಿಜೆಪಿ ನಾಯಕರ ವಿರುದ್ಧ ಕಿಡಿ:
ಇದಕ್ಕೂ ಮೊದಲು ಉಡುಪಿಯಲ್ಲಿ ಮಾತನಾಡಿದ್ದ ಅವರು, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ್ ಹತ್ಯೆಯನ್ನು ಖಂಡಿಸುತ್ತೇನೆ. ಮುಖ್ಯಮಂತ್ರಿಗಳು ಮನೆಗೆ ಬಂದು 25 ಲಕ್ಷ ರೂಪಾಯಿ ಕೊಟ್ಟಿರುವುದನ್ನು ನಾನು ಒಪ್ಪುವುದಿಲ್ಲ. ಮೊದಲೇ ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೆ ಪ್ರವೀಣ್ ಕೊಲೆಯಾಗುತ್ತಿರಲಿಲ್ಲ. ಸ್ವಂತ ಹಣದಲ್ಲಿ ದುಡಿದು ಮನೆಯವರನ್ನು ನೋಡಿಕೊಳ್ಳುತ್ತಿದ್ದ. ಪ್ರವೀಣ್ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅವರಿಗೆ ಸ್ವಂತ ಮನೆ ಇಲ್ಲ. ಅಂತಸ್ತುಗಳ ಲೆಕ್ಕದಲ್ಲಿ ಮನೆಗಳನ್ನು ಕಟ್ಟಿ, 3 ಪೀಳಿಗೆಯಷ್ಟು ಆಸ್ತಿ ಮಾಡಿರುವ ಬಿಜೆಪಿ ನಾಯಕರಿಗೆ ಧಿಕ್ಕಾರವಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರ ಆಕ್ರೋಶ ಪ್ರವೀಣ್ ಶವಯಾತ್ರೆಯಲ್ಲಿ ಹೊರಬಿದ್ದಿದೆ. ರಾಜೀನಾಮೆ ನೀಡಿರುವ ಯುವ ಮೋರ್ಚಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜೀನಾಮೆ ನೀಡಿರುವ ನೀವೆಲ್ಲಾ ನಿಜವಾದ ಹಿಂದೂ ವಾದಿಗಳು. ಸುರತ್ಕಲ್ನಲ್ಲಿ ನಡೆದಿರುವ ಕೊಲೆ ಕ್ರಿಯೆಗೆ ಪ್ರತಿಕ್ರಿಯೆ ಆಗದಿರಲಿ. ರಾಜಕೀಯೇತರ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಇದನ್ನು ಪರಿಹಾರ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
Recommended Video