ಸಚಿವ ಸುನೀಲ್ ಕುಮಾರ್ ಕ್ಷೇತ್ರದ ಮೇಲೆ ಕಣ್ಣಿಟ್ಟ ಮುತಾಲಿಕ್: ಕ್ಷೇತ್ರ ಬಿಟ್ಟುಕೊಡುವಂತೆ ಆಗ್ರಹ
ಮಂಗಳೂರು, ಡಿಸೆಂಬರ್ 14: ಇಂಧನ ಸಚಿವ ಸುನೀಲ್ ಕುಮಾರ್ರವರ ಕಾರ್ಕಳ ವಿಧಾನಸಭಾ ಕ್ಷೇತ್ರದ ಮೇಲೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಣ್ಣೀರಿಟ್ಟಿದ್ದಾರೆ.
ಕಾರ್ಕಳದಲ್ಲಿ ಸುನೀಲ್ ಕುಮಾರ್ ವಿರುದ್ಧ ಬಹಿರಂಗವಾಗಿಯೇ ಗುಡುಗಿದ ಪ್ರಮೋದ್ ಮುತಾಲಿಕ್ ಈ ಬಾರಿ ಕ್ಷೇತ್ರ ತನಗೆ ಬಿಟ್ಟುಕೊಡುವಂತೆ ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಪ್ರಮೋದ್ ಮುತಾಲಿಕ್ ಹಿಂದುತ್ವ ಮತ್ತು ನಿಮ್ಮ ಹಿಂದುತ್ವ ಒಂದೇ ತಕ್ಕಡಿಯಲ್ಲಿ ಇಡೋಣ. ಯಾರು ಹಿಂದುತ್ವಕ್ಕಾಗಿ ಇದ್ದಾರೆ ಎನ್ನುವುದನ್ನು ಜನರ ಮುಂದೆ ಇಡೋಣ. ನನ್ನನ್ನು ಬೆಳೆಸಿದ ಗುರುಗಳು ಬಂದಿದ್ದಾರೆ ಎಂದು ಕ್ಷೇತ್ರ ತ್ಯಾಗ ಮಾಡಿ. ಬೇರೆ ಕಡೆ ಎಲ್ಲಾದರೂ ಚುನಾವಣೆಗೆ ಸ್ಪರ್ಧಿಸಿ. ನಿಮ್ಮಲ್ಲಿ ನಿಜವಾಗಿ ಹಿಂದುತ್ವ, ಆರ್ಎಸ್ಎಸ್ ಇದ್ದರೆ ಕ್ಷೇತ್ರ ತ್ಯಾಗ ಮಾಡಿ ಎಂದು ಪ್ರಮೋದ್ ಮುತಾಲಿಕ್, ಸಚಿವ ಸುನೀಲ್ ಕುಮಾರ್ಗೆ ಆಗ್ರಹಿಸಿದ್ದಾರೆ.

ಕ್ಷೇತ್ರ ನನಗೆ ಬಿಟ್ಟು ಕೊಡಿ, ನಾನು ಹಿಂದುತ್ವ ಏನೆಂದು ತೋರಿಸುತ್ತೇನೆ ಎಂದು ಕಾರ್ಕಳದಲ್ಲಿ ಗುಡುಗಿದ ಪ್ರಮೋದ್ ಮುತಾಲಿಕ್, ಐದು ವರ್ಷದ ನಂತರ ಮತ್ತೆ ನಿಮ್ಮನ್ನು ನಿಲ್ಲಿಸುತ್ತೇನೆ. ಯಾವ ದಾರಿಯಲ್ಲಿ ನಡೆಯಬೇಕೆಂದು ನಾನು ತೋರಿಸಿಕೊಡುತ್ತೇನೆ. ಈಗ ನಡೆದದ್ದು ಮತ್ತು ಗಳಿಸಿದ್ದು ಸಾಕು. ತಾತ ಮುತ್ತಾತನಿಂದ ಮರಿ ಮೊಮ್ಮಗನ ತನಕ ಗಳಿಸಿದ್ದು ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲವಾರು ಹಿಡಿದುಕೊಂಡು ಬಂದವರ ಮುಂದೆ ಹೋರಾಟ ಮಾಡಿದವನು ನಾನು. ಭಯಾನಕವಾದ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದ ಗಂಡುಗಲಿ ನಾನು. ಫೋನ್ ಮಾಡಿಸಿ ನನಗೆ ಭಯಪಡಿಸುವ ಚಿಲ್ಲರೆ ಕೆಲಸ ಮಾಡಬೇಡಿ. ಹಿಂದುತ್ವದ ವೇದಿಕೆಯಲ್ಲಿ ಇಬ್ಬರು ನಿಂತು ಚರ್ಚೆ ಮಾಡೋಣ. ಚರ್ಚೆಗೆ ಬರುವ ತಾಕತ್ತಿದೆಯಾ ನಿಮಗೆ ದುಡ್ಡು ಅಹಂಕಾರ ಸೊಕ್ಕು ದರ್ಪ ಬಿಟ್ಟುಬಿಡಿ. ನನಗೆ ಬೆಂಬಲ ಮಾಡದಂತೆ ಕಾರ್ಯಕರ್ತರನ್ನು ಹೆದರಿಸುತ್ತಾರೆ. ಆದರೆ ಅದರ ಹತ್ತು ಪಟ್ಟು ಜನ ನನ್ನ ಜೊತೆ ಬರುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ.
ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿಂದೆ ಈ ಬಗ್ಗೆ ಮಾತನಾಡಿದ್ದ ಪ್ರಮೋದ್ ಮುತಾಲಿಕ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮಸೇನೆಯಿಂದ 25 ಪ್ರಖರ ಹಿಂದೂ ಮುಖಂಡರನ್ನು ಸ್ವತಂತ್ರರಾಗಿ 25 ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ತಿಳಿಸಿದ್ದರು.












Click it and Unblock the Notifications