ಎದುರಾಳಿ ರಘುಪತಿ ಭಟ್ ತಾಯಿ ಕಾಲಿಗೆ ಬಿದ್ದ ಪ್ರಮೋದ್ ಮಧ್ವರಾಜ್
ಉಡುಪಿ, ಏಪ್ರಿಲ್ 23: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ನಾಮಪತ್ರ ಸಲ್ಲಿಸಿದರು. ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಮಧ್ವರಾಜ್ ಉಡುಪಿಯ ತಾಲೂಕು ಚುನಾವಣಾಧಿಕಾರಿ ಕೆಂಪೇಗೌಡ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ತಾಯಿ ಮನೋರಮಾ ಮಧ್ವರಾಜ್ ಜೊತೆ ಪ್ರಮೋದ್ ತಮ್ಮ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಕಾಂಗ್ರೆಸ್ ನಲ್ಲಿ ಶಾಸಕಿಯಾಗಿ, ಸಚಿವೆಯಾಗಿ ಬಳಿಕ ಬಿಜೆಪಿ ಸಂಸದೆಯಾಗಿದ್ದ ಮನೋರಮಾ ಮಧ್ವರಾಜ್ ಪುತ್ರ ಪ್ರಮೋದ್ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದುದು ವಿಶೇಷವಾಗಿತ್ತು.
ಅದಕ್ಕಿಂತಲೂ ವಿಶೇಷ ಎಂದರೆ ಪ್ರಮೋದ್ ಮಧ್ವರಾಜ್ ತಮ್ಮ ಎದುರಾಳಿ ಬಿಜೆಪಿಯ ರಘುಪತಿ ಭಟ್ ತಾಯಿಯ ಕಾಲಿಗೆ ಬಿದ್ದದ್ದು.

ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ರಘಪತಿ ಭಟ್ ಅವರು ತಮ್ಮ ತಾಯಿ ಸರಸ್ವತಿಯವರ ಜೊತೆ ತಾಲೂಕು ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದಿದ್ದರು. ಈ ಸಂದರ್ಭ ರಘುಪತ್ ಭಟ್ ರ ತಾಯಿಯನ್ನು ನೋಡಿದ ಮಧ್ವರಾಜ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಎದುರಾಳಿ ಅಭ್ಯರ್ಥಿಯ ತಾಯಿಯ ಕಾಲು ಮಟ್ಟಿ, ತಮಗೆ ರಾಜಕೀಯಕ್ಕಿಂತ ಸಂಸ್ಕಾರ ಮುಖ್ಯ ಎಂಬುದನ್ನು ಪ್ರಮೋದ್ ಮಧ್ವರಾಜ್ ನಿರೂಪಿಸಿದ್ದಾರೆ ಎಂಬ ಚರ್ಚೆ ಉಡುಪಿಯಲ್ಲೀಗ ಆರಂಭವಾಗಿದೆ.












Click it and Unblock the Notifications