ಸಾವಿನಲ್ಲಿ ರಾಜಕಾರಣ ಮಾಡುವವರು ರಾಕ್ಷಸರು : ಪ್ರಕಾಶ್ ರೈ
ಮಂಗಳೂರು, ಡಿಸೆಂಬರ್. 12 : 'ರಾಜ್ಯದಲ್ಲಿ ಮತೀಯ ಗಲಭೆಗಳನ್ನು ಯಾರು ಮಾಡುತ್ತಿದ್ದಾರೆ ಎಲ್ಲರಿಗೂ ಗೊತ್ತು. ಜನರು ಯಾರೂ ಮೂರ್ಖರಲ್ಲ. ಸಾವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರು ದೊಡ್ಡ ರಾಕ್ಷಸರು' ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಮಂಗಳವಾರ ಮಂಗಳೂರಿನ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಪಾದಯಾತ್ರೆ ನಡೆಯಿತು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಟ ಪ್ರಕಾಶ್ ರೈ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಸಂಘ ಪರಿವಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

'ಸಾವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಮನುಷ್ಯ ನನ್ನು ಕೊಲ್ಲುವ ಅರ್ಹತೆ ಯಾರಿಗೂ ಇಲ್ಲ. ದೇವರ ಹೆಸರನ್ನು ಹೇಳಿ ರಾಜಕೀಯ ಮಾಡುವವರನ್ನು ಎದುರಿಸಬೇಕಾಗಿದೆ ' ಎಂದು ಜನರಿಗೆ ಕರೆ ನೀಡಿದರು.
'ಎಲ್ಲರೂ ಒಂದಾಗಬೇಕಿದೆ, ಕಲಾವಿದ ಪ್ರತಿಭೆಯಿಂದ ಮಾತ್ರ ಗೆಲ್ಲುವುದಲ್ಲ. ಸಮಾಜದ ಜೊತೆಗಿದ್ದು ಬಾಳುವುವವನೇ ನಿಜವಾದ ಕಲಾವಿದ' ಎಂದು ಅಭಿಪ್ರಾಯ ಪಟ್ಟರು.
ಸಚಿವ ಬಿ ರಮಾನಾಥ ರೈ ಮಾತನಾಡಿ, 'ಕೆಲವು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗಳು ನಡೆದಿವೆ. ಜಿಲ್ಲೆಯನ್ನು ಮತೀಯವಾದಿಗಳು ಪ್ರಯೋಗಾಲಯ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ' ಎಂದು ದೂರಿದರು .

'ಈ ಸಮಯದಲ್ಲಿ ಸಾಮರಸ್ಯ ನಡಿಗೆ ಬೇಕಿತ್ತೇ? ಎಂಬ ಮಾತುಗಳು ಕೇಳಿಬಂದಿತ್ತು. ನಾವು ಕಾನೂನಿಗೆ ತಲೆ ಬಾಗಿಯೇ ಕೆಲಸ ಮಾಡುತ್ತೇವೆ ಹೊರತು ಕಾನೂನು ಉಲ್ಲಂಘಿಸಿಲ್ಲ. ಸಾಮರಸ್ಯ ಪಾದಯಾತ್ರೆ ದಿಢೀರ್ ನಿರ್ಧಾರವಲ್ಲ. ಪೂರ್ವಭಾವಿಯಾಗಿಯೇ ನಡೆಸಿದ ಯೋಜನೆ' ಎಂದು ಸ್ಪಷ್ಟಪಡಿಸಿದರು.
'ಸಾಮರಸ್ಯ ನಡಿಗೆ ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯುವುದಲ್ಲ. ಜೀವನಪರ್ಯಂತ ಒಬ್ಬರೊಬ್ಬರ ಜತೆಯಾಗಿ ನಡೆಯೋಣ' ಎಂದು ಕರೆ ನೀಡಿದರು.
'ದೇವರು, ಧರ್ಮ, ದೇಶಪ್ರೇಮದ ಹೆಸರಿನಲ್ಲಿ ವಂಚಿಸುವ ಜನ ಸಮಾಜದಲ್ಲಿದ್ದಾರೆ. ನಾನು ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಮತೀಯವಾದವನ್ನು ವಿರೋಧಿಸುತ್ತೇನೆ' ಎಂದು ಘೋಷಣೆ ಮಾಡಿದರು.












Click it and Unblock the Notifications