ಮೋದಿ ಸಂಚರಿಸಿದ ರಸ್ತೆಯಲ್ಲಿ ಮತ್ತೆ ಗುಂಡಿ-ರಾತ್ರೋ ರಾತ್ರಿ ಮುಚ್ಚಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಮಂಗಳೂರು, ಸೆಪ್ಟೆಂಬರ್ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ನಗರ ಮದುವಣಗಿತ್ತಿಯಂತೇ ಸಿಂಗಾರಗೊಂಡಿತ್ತು. ನಗರದ ರಾಜಮಾರ್ಗಗಳು ಮರು ಡಾಂಬಾರೀಕರಣ ಗೊಂಡು ಅಂದವಾಗಿತ್ತು..ಆದರೆ ಪ್ರಧಾನಿ ಬಂದು ಹೋದ ಹತ್ತೇ ದಿನದಲ್ಲಿ ರಸ್ತೆಯಲ್ಲಿ ಹೊಂಡ ಬಿದ್ದಿದೆ. ಹೊಂಡ ಬಿದ್ದಿದೆ.
ಆದರೆ ರಸ್ತೆ ಹೊಂಡ ಬಿದ್ದಿರುವ ಚಿತ್ರಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾತ್ರೋ ರಾತ್ರಿ ಹೊಂಡವನ್ನು ಮುಚ್ಚಿ ತೇಪೆ ಕಾರ್ಯ ಮಾಡಿದೆ. ಮಂಗಳೂರು ನಗರ ಹೊರವಲಯದ ಕುಳೂರಿನ ಸೇತುವೆ ಮಳೆಗಾಲದ ಅವಧಿಯಲ್ಲಿ ಸಂಪೂರ್ಣ ಹೊಂಡ-ಗುಂಡಿಗಳಿಂದ ತುಂಬಿ ಹೋಗಿತ್ತು. ಪ್ರತಿದಿನ ಘನ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಜನ ಪಡಬಾರದ ಕಷ್ಟವನ್ನು ಅನುಭವಿಸಿ ಪ್ರಯಾಣ ಮಾಡುತ್ತಿದ್ದರು.
ಮೋದಿ ಭೇಟಿಗಾಗಿ ಡಾಂಬರು ಹಾಕಿದ್ದ ಮಂಗಳೂರು ರಸ್ತೆಯಲ್ಲಿ ಮತ್ತೆ ಗುಂಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂದರಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೆಪ್ಟೆಂಬರ್ 2 ರಂದು ನಗರಕ್ಕೆ ಭೇಟಿ ನೀಡಿದ್ದರು. ಮೋದಿ ಬರುವ ಹಿನ್ನಲೆ ಕುಳೂರು ಸೇತುವೆಯ ರಸ್ತೆಗೆ ಮರು ಡಾಂಬಾರೀಕರಣ ಮಾಡಲಾಗಿತ್ತು. ಬಂಗ್ರಕೂಳೂರಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಮೋದಿ ಅವರು ನವಮಂಗಳೂರು ಬಂದರಿನಿಂದ ರಸ್ತೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿದ್ದ ಗುಂಡಿಗಳನ್ನು ಎರಡು ದಿನಗಳಿಗೆ ಮುಂಚಿತವಾಗಿ ಮುಚ್ಚಿ, ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿತ್ತು.
10 ದಿನವೂ ಬಾರದ ರಸ್ತೆ
ಕೂಳೂರು ಹಾಗೂ ಪಣಂಬೂರು ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣವಾಗಿದ್ದ ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ನಾಲ್ಕು ತಿಂಗಳಿನಿಂದ ಜನ ಒತ್ತಾಯಿಸಿದ್ದರು. ಆದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಕಡೆಗಣಿಸಿತ್ತು. ಆದರೆ ಪ್ರಧಾನಿ ಬರುವ ಕಾರ್ಯಕ್ರಮ ನಿಗದಿಯಾದ ನಾಲ್ಕೇ ದಿನಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ನಡೆಸಿದ್ದರು, ಆದರೆ ತಾರಾತುರಿ ಕೆಲಸ 10 ದಿನಗಳಲ್ಲಿ ಗುಂಡಿ ಬಿದ್ದು ಮತ್ತದೇ ಸ್ಥಿತಿ ತಲುಪಿದೆ. ಪ್ರಧಾನಿ ಬಂದ ನಂತರವಾದರೂ ರಸ್ತೆ ಸರಿ ಆಗಿದೆ ಎಂದು ಹೇಳಿಕೊಂಡು ಖುಷಿ ಪಡುತ್ತಿದ್ದ ಕೇವಲ 10 ದಿನಗಳಲ್ಲಿ ತೀವ್ರ ನಿರಾಸೆ ಅನುಭವಿಸುವಂತಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯ ತಟ್ಟುವ ಅನು'ರಾಗಾ'
ಮಳೆ ಜಾಸ್ತಿಯಾದರೆ ಮತ್ತಷ್ಟು ಗುಂಡಿ
ಡಾಂಬಾರು ಕಿತ್ತು ಹೋಗಿ ಸೇತುವೆಯ ಕಾಂಕ್ರೀಟ್ ಕಾಣಿಸಿಕೊಳ್ಳುವಷ್ಟು ಬೃಹತ್ ಗುಂಡಿ ನಿರ್ಮಾಣ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಳಪೆ ಕಾಮಗಾರಿ ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ರಾತ್ರೋರಾತ್ರಿ ಸೇತುವೆ ಮೇಲೆಬಿದ್ದ ಗುಂಡಿಗೆ ತೇಪೆ ಕಾರ್ಯ ಹಾಕಿದ್ದಾರೆ.. ತೇಪೆ ಹಾಕಿದ ಸ್ಥಳದ ಸ್ವಲ್ಪ ದೂರದಲ್ಲೇ ಮತ್ತೊಂದು ಗುಂಡಿಯೂ ಬಿದ್ದಿದ್ದು, ಮಳೆ ಜಾಸ್ತಿಯಾದರೆ ಅದೂ ಆಳವಾಗುವ ಸಾಧ್ಯತೆಗಳಿವೆ..
|
ಬೆಂಗಳೂರಿನಲ್ಲೂ ಎರಡೇ ದಿನಗಳಲ್ಲಿ ಕಿತ್ತುಬಂದಿದ್ದ ರಸ್ತೆ
ಬೆಂಗಳೂರಿನಲ್ಲಿ ನರೇಂದ್ರ ಮೋದಿ ಕಾರ್ಯಕ್ರಮದ ಬಳಿಕ ಎರಡೇ ದಿನದಲ್ಲಿ ರಸ್ತೆ ಕಿತ್ತು ಹೋಗಿ ಸರಕಾರ ತೀವ್ರ ಮುಖಭಂಗ ಅನುಭವಿಸಿತ್ತು. ಮಂಗಳೂರಿನಲ್ಲೂ ಇದೇ ಮಾದರಿ ಪುನರಾವರ್ತನೆ ಆಗುವ ಸಾಧ್ಯತೆಗಳು ಕಂಡು ಬಂದ ಹಿನ್ನಲೆಯಲ್ಲಿ ತಕ್ಷಣ ಕಾರ್ಯಪ್ರವೃತರಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಸೋಮವಾರ ರಾತ್ರೋ ರಾತ್ರಿ ರಸ್ತೆಯ ಗುಂಡಿ ಮುಚ್ಚಿಸಿದೆ.
40% ಕಮಿಷನ್ ಇನ್ನೇನು ಸಾಕ್ಷಿ ಬೇಕು
ಪ್ರಧಾನಿ ಮೋದಿಯನ್ನು ಪ್ರತಿ ತಿಂಗಳು ಕರೆಸುತ್ತೇವೆ ಎನ್ನುವ ಬಿಜೆಪಿ ಸರಕಾರಕ್ಕೆ ತೇಪೆ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದೆ. " ನಿಮ್ಮ ಸರಕಾರದ 40% ಕಮಿಷನ್ ಲೂಟಿಗೆ ಇನ್ನು ಯಾವ ಸಾಕ್ಷಿ ಬೇಕು ಬೊಮ್ಮಾಯಿ ಅವರೇ, ಇದೇ ರಸ್ತೆಯ ಮೇಲೆ ಬಂದು " ಡಬಲ್ ಇಂಜಿನ್ ಅಭಿವೃದ್ಧಿಯಾಗುತ್ತದೆ" ಎಂದು ಭಾಷಣ ಮಾಡಿದ್ದ ನರೇಂದ್ರ ಮೋದಿಯವರೇ , ಈ ಲೂಟಿ ತನಿಖೆಗೆ ಅರ್ಹವಲ್ಲವೇ? ಬಿಜೆಪಿ ಸರಕಾರದ ರಸ್ತೆ ಡಾಂಬರಿಗಿಂತ ಅಡುಗೆ ಮನೆಯಲ್ಲಿ ರೊಟ್ಟಿಗೆ ಕಲಸುವ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್ ಎಂದು ಟೀಕಿಸಿದೆ.