ದಕ್ಷಿಣ ಕನ್ನಡದ ಜನ ರಾಜಕೀಯದಲ್ಲಿ ದಡ್ಡರು; ರೈತ ಮುಖಂಡರು
ಮಂಗಳೂರು, ಸೆಪ್ಟೆಂಬರ್ 27; ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ಎಡಪಕ್ಷಗಳು ರೈತ ಮುಖಂಡರು ಕರೆ ನೀಡಿರುವ ಭಾರತ ಬಂದ್ಗೆ ಕರ್ನಾಟಕದಲ್ಲಿಯೂ ಬೆಂಬಲ ನೀಡಲಾಗಿತ್ತು. ಹಲವಾರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಮವಾರ ಜಿಲ್ಲೆಯಲ್ಲಿ ಜನ ಜೀವನ ಎಂದಿನಂತೆ ಇತ್ತು. ಆದರೆ ಭಾರತ್ ಬಂದ್ಗೆ ಜನರು ಅಸಹಕಾರ ನೀಡಿದ್ದು ರೈತ ಮುಖಂಡರನ್ನು ಕೆರಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನ ಎಲ್ಲಾ ವಿಷಯದಲ್ಲೂ ಬುದ್ಧಿವಂತರು. ಆದರೆ ರಾಜಕೀಯ ವಿಷಯದಲ್ಲಿ ದಡ್ಡರು ಎಂದು ರೈತ ಮುಖಂಡರು ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ್ ಬಂದ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಭೆ ಹಾಗೂ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಕಾರ್ಯಕ್ರಮ ಬಂಟ್ವಾಳದ ಬಿ. ಸಿ. ರೋಡ್ ಎಂಬಲ್ಲಿ ನಡೆದಿದೆ. ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಸಂಘಟನೆಗಳು, ಸಿಐಟಿಯು, ಡಿವೈಎಫ್ಐ, ಎಐಟಿಯುಸಿ ಸೇರಿದಂತೆ ಹಲವು ಸಂಘಟನೆಗಳು ಬೃಹತ್ ಪ್ರತಿಭಟನಾ ಸಭೆ ನಡೆಸಲು ಉದ್ದೇಶಿಸಿತ್ತು.

ಆದರೆ ಬೆಳಗ್ಗೆ ಸುಮಾರು 11 ಗಂಟೆಯಾದರೂ ಜನ ಬಾರದಿರುವ ಹಿನ್ನಲೆಯಲ್ಲಿ ಒಂದು ಹಂತದಲ್ಲಿ ಪ್ರತಿಭಟನೆ ನಡೆಸೋದಾ ಬೇಡ್ವಾ? ಎಂಬ ಗೊಂದಲಕ್ಕೆ ರೈತ ನಾಯಕರು ಬಂದಿದ್ದಾರೆ. ಬಳಿಕ ಬೇರೆ ಬೇರೆ ಭಾಗಗಳಿಂದ ಸಂಘಟನೆಗಳ ಕಾರ್ಯಕರ್ತರು ಆಗಮಿಸಿದ್ದಾರೆ.
ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗದಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ನಾರಾಯಣ ಗುರು ವೃತ್ತದ ಬಳಿಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ಬಂದಿದ್ದಾರೆ. ಹೆದ್ದಾರಿ ಬದಿಯ ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಭಾಷಣ ಮಾಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಭಾರತ್ ಬಂದ್ಗೆ ಜನರು ಸಹಕಾರ ನೀಡದಿರುವುದರಿಂದ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಕನ್ನಡ ಜಿಲ್ಲೆಯ ಜನರು ವಿದ್ಯಾವಂತರು, ಎಲ್ಲಾ ಕ್ಷೇತ್ರಗಳಲ್ಲಿ ಬುದ್ಧಿಶಕ್ತಿಯನ್ನು ಉಪಯೋಗಿಸಿ ಬುದ್ಧಿವಂತರು ಅಂತಾ ಕರೆಸಿಕೊಳ್ಳುವ ಜನರು. ರಾಜಕೀಯದಲ್ಲಿ ಮಾತ್ರ ದಡ್ಡರು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಪ್ರತಿಭಟನಾ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರೈತರ ಪ್ರತಿಭಟನೆ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧದ ಪ್ರತಿಭಟನೆಯಾಗಿ ಮಾರ್ಪಾಟಾಗಿದ್ದು, ಸುಧೀರ್ಘ ಮೂರು ಗಂಟೆಗಳ ಕಾಲ ವಿವಿಧ ಸಂಘಟನೆಗಳ ಮುಖಂಡರು ಭಾಷಣ ಮಾಡಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದ್ದಾರೆ. ಬಳಿಕ ಸಾಂಕೇತಿಕ ವಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-73 ತಡೆದು ಪ್ರತಿಭಟನೆ ಮಾಡಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ ಬಿ. ಸಿ. ರೋಡ್ನ ಆಟೋ ಚಾಲಕ ಪ್ರಕಾಶ್, "ಮೊದಲೇ ಕೊರೊನಾದಿಂದ ದುಡಿಮೆ ಇಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದೇವೆ. ಮನೆ ಬಾಡಿಗೆ, ಮಕ್ಕಳ ವಿಧ್ಯಾಭ್ಯಾಸಕ್ಕೂ ಹಣ ಇಲ್ಲ. ಬ್ಯಾಂಕ್ನಿಂದ ವಾಹನ ಸಾಲ ತೀರಿಸುವಂತೆ ಕರೆ ಬರುತ್ತಿದೆ. ಈ ಸಂದರ್ಭದಲ್ಲಿ ಬಂದ್ ಮಾಡಿ ಜೀವನ ಮತ್ತಷ್ಟು ದುಸ್ತರಕ್ಕೆ ತಂದುಕೊಳ್ಳುವುದಿಲ್ಲ" ಎಂದು ಹೇಳಿದರು.
ಒಟ್ಟಿನ್ನಲ್ಲಿ ಭಾರತ್ ಬಂದ್ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಿವಾಗಿದೆ. ಅದರಲ್ಲೂ ಇಂತಹ ವಿಚಾರದಲ್ಲಿ ಇತಿಹಾಸದಲ್ಲಿ ಒಮ್ಮೆಯೂ ಬಂದ್ ಆಗದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ ಬಂದ್ ಆಗದೇ, ಅಂತರವನ್ನು ಕಾಯ್ದುಕೊಂಡಿದೆ.












Click it and Unblock the Notifications