ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವು ಪ್ರಕರಣದ ತನಿಖೆ ಚುರುಕು
ಮಂಗಳೂರು: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾಧ್ಯಮಗಳಲ್ಲಿ ಪ್ರಕರಣದ ಕುರಿತು ಗಂಭೀರ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ತರಾತುರಿಯಲ್ಲಿ ತನಿಖೆ ನಡೆಸುತ್ತಿದೆ.
ಪ್ರಕರಣದ ಕುರಿತು ಎಸಿಪಿ ರಾಜೇಂದ್ರ ಅವರ ನೇತೃತ್ವದ ತಂಡ ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಆಳ್ವಾಸ್ ಸಂಸ್ಥೆಯ ಹಾಸ್ಟೆಲ್ ಗೆ ಭೇಟಿ ನೀಡಿದ ಪೊಲೀಸರ ತಂಡ ವಾರ್ಡನ್ ಹಾಗೂ ಅಲ್ಲಿಯ ಸಿಬ್ಬಂದಿ ಸೇರಿದಂತೆ ಆರು ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದೆ.

ಕಟೀಲಿನ ದೇವರ ಗುಡ್ಡದಲ್ಲಿರುವ ಕಾವ್ಯ ಮನೆಗೂ ಭೇಟಿ ನೀಡಿದ ಪೊಲೀಸರ ತಂಡ ಕಾವ್ಯ ಅವರ ಪೋಷಕರು ಸೇರಿದಂತೆ ಇತರರನ್ನು ವಿಚಾರಣೆ ನಡೆಸಿದ್ದು ಮಾಹಿತಿ ಕಲೆ ಹಾಕಿದೆ.
ಮೈಲೇಜ್ ಪಡೆಯಲು ರಾಜಕೀಯ ಮುಖಂಡರ ದಂಡು
ಈ ನಡುವೆ ಕಾವ್ಯಾ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ಕುರಿತು ರಾಜಕೀಯ ಮುಖಂಡರು ಮೈಲೇಜ್ ಪಡೆಯಲು ಮುಂದಾಗುತ್ತಿದ್ದಾರೆ . ಭಾನುವಾರ ಮೃತ ಕಾವ್ಯಾಳ ಮನೆಗೆ ಜನಪ್ರತಿನಿಧಿಗಳು ಭೇಟಿ ನೀಡಿದರು.
ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಚತ್ ನಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜಾ, ಕಾಂಗ್ರೆಸ್ ನಾಯಕರಾದ ಹರಿಕೃಷ್ಣ ಬಂಟ್ವಾಳ್, ಮಿಥುನ್ ರೈ ಸೇರಿದಂತೆ ಇತರ ರಾಜಕೀಯ ಮುಖಂಡರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು. ಜತೆಗೆ ಉನ್ನತ ತನಿಖೆಯ ಭರವಸೆ ನೀಡಿದರು.
ಭಾನುವಾರವೇ ಕಾವ್ಯಾ ಪೂಜಾರಿಯ ಮನೆಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಕೂಡಾ ಭೇಟಿ ನೀಡಿದರು. ಈ ವೇಳೆ ಪ್ರಕರಣದ ವಿವರ ಪಡೆದುಕೊಂಡ ಸಚಿವರು ಬಳಿಕ ಕಾವ್ಯಾಳ ತಂದೆ ಲೋಕೇಶ್ ಹಾಗೂ ತಾಯಿ ಬೇಬಿಯವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಕಾವ್ಯಾಳ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಸರಕಾರದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಕೂಡಾ ಒದಗಿಸಿ ಕೊಡುವುದಾಗಿ ತಿಳಿಸಿದರು.












Click it and Unblock the Notifications